2020ರಲ್ಲಿ ತಂದೆಯ ಆರೋಗ್ಯಕ್ಕಾಗಿ ಕಾಶಿ ವಿಶ್ವನಾಥನಲ್ಲಿ ಹರಕೆ ಹೊತ್ತಿದ್ದ ನಟಿ ಕಾವ್ಯಾ ಶಾಸ್ತ್ರಿ, ಇತ್ತೀಚೆಗೆ ಕಾಶಿಯಲ್ಲಿ ಭಿಕ್ಷೆ ಬೇಡಿ ಆ ಹಣದಿಂದ ಊಟ ಮಾಡಿದ್ದಾರೆ. ಕಷ್ಟದಲ್ಲಿ ಅಂಧ ವಿಶ್ವಾಸ ಮೂಡುತ್ತದೆ ಎಂದಿದ್ದಾರೆ. ಭಿಕ್ಷಾಟನೆಯಿಂದ ಅಹಂಕಾರ ಕಳೆದುಹೋಗುತ್ತದೆ, ಕೊಡುವವರ ಪಾಪ ಪರಿಹಾರವಾಗುತ್ತದೆ ಎಂದು ಕಾವ್ಯಾ ಹೇಳಿದ್ದಾರೆ. 'ಬಿಗ್ ಬಾಸ್ 10'ರಲ್ಲಿ ಭಾಗವಹಿಸಿದ್ದ ಕಾವ್ಯಾ, 'ಜಾನಕಿ ಸಂಸಾರ' ಧಾರಾವಾಹಿಯ ಮೂಲಕ ಮರು ಪ್ರವೇಶಿಸಿದ್ದಾರೆ.

'2020ರಲ್ಲಿ ಕರೋನಾ ಎನ್ನುವ ಭಯ ಯಾರನ್ನೂ ಬಿಟ್ಟಿಲ್ಲ. ಕರೋನಾದಿಂದಾಗಿ ನನ್ನ ತಂದೆ ಕಳೆದೇ ಹೋಗುತ್ತಾರೆ ಎನ್ನುವ ಭಯದಲ್ಲಿ ಸಿಕ್ಕಸಿಕ್ಕ ದೇವರಿಗೆ, ಸಿಕ್ಕಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಹರಕೆ ಇದು. ಕಾಶಿ ವಿಶ್ವನಾಥನ ಸನ್ನಿಧಿ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ. ಈ ಹರಕೆ ತೀರಿಸುವ ಸೌಭಾಗ್ಯ ನಾನು ಮೊನ್ನೆ ಕಾಶಿಗೆ ಹೋದಾಗ ಸಿಕ್ಕಿತು...' ಎನ್ನುತ್ತಲೇ ಭಿಕ್ಷೆ ಬೇಡಿ ಅದರಿಂದ ಬಂದ ಹಣದಲ್ಲಿ ಊಟ ಮಾಡಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ.

ಈ ಕುರಿತ ವಿಡಿಯೋ ಶೇರ್​ ಮಾಡಿಕೊಂಡಿರುವ ನಟಿ, 'ಅಂದು ಅಪ್ಪನಿಗೆ ಜೀವ ಭಿಕ್ಷೆ ಬೇಡಿದೆ. ಅದು ಫಲಿಸಿದೆ. ಇದೇನು ಅಂಧ ವಿಶ್ವಾಸ ಎಂದು ನೀವು ಕೇಳಬಹುದು. ಆದರೆ ಕಷ್ಟದಲ್ಲಿದ್ದಾಗ, ಅದನ್ನು ನಿವಾರಿಸಿಕೊಳ್ಳಲು ಏನನ್ನಾದರೂ ಮಾಡುವ ಸ್ಥಿತಿಗೆ ಬಂದು ಬಿಡುತ್ತೇವೆ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಪವಿತ್ರವಾದ ಸ್ಥಾನವಿದೆ. ಅದು ನಾನು-ನನ್ನದು ಎನ್ನುವ ಅಹಂಕಾರ ಮತ್ತು ಮೋಹ ಎಲ್ಲದನ್ನೂ ಕಳೆದುಬಿಡುತ್ತದೆ. ಒಬ್ಬರ ಮುಂದೆ ಕೈಚಾಚಿ ಭಿಕ್ಷೆ ಕೊಡಿ ಎಂದು ಕೇಳಬೇಕಾದರೆ ದುರಹಂಕಾರ ಎಲ್ಲಾ ಕಳೆದು ಹೋಗುತ್ತದೆ. ಇದೇ ಭಿಕ್ಷಾಟನೆಯ ಪಾವಿತ್ರ್ಯತೆ. ಭಿಕ್ಷೆ ಕೊಡುವವರು ತಮ್ಮ ಪಾಪ ಕಳೆದುಕೊಳ್ಳುತ್ತಾರೆ. ತೆಗೆದುಕೊಳ್ಳುವವರು ತಮ್ಮ ಅಹಂಕಾರ ಕಳೆದುಕೊಳ್ಳುತ್ತಾರೆ. ಅದಕ್ಕೇ ಹೇಳುವುದು, ಈ ದುಡ್ಡು, ಹೆಸರು ಎಲ್ಲ, ಜೀವದ ಮುಂದೆ ಏನೇನೂ ಅಲ್ಲ. ಈ ಜೀವನ ಅನ್ನೋದೇ ಪರಮಾತ್ಮನ ಭಿಕ್ಷೆ. ಅದನ್ನ ಯಾವತ್ತೂ ಅಹಂಕಾರದಿಂದ ಮರೆಯಬಾರದು. ಒಟ್ಟಿನಲ್ಲಿ ಇವತ್ತು ನಾನು ನನ್ನ ತಂದೆ-ತಾಯಿಯ ಜೊತೆ ಖುಷಿಯಾಗಿದ್ದೇನೆ' ಎನ್ನುತ್ತಲೇ ಬದುಕಿನ ಅತಿ ದೊಡ್ಡ ಸತ್ಯವನ್ನು ತೆರೆದಿಟ್ಟಿದ್ದಾರೆ ನಟಿ ಕಾವ್ಯಾ.

Add Asianetnews Kannada as a Preferred SourcegooglePreferred

10 ಸಾವಿರ ಕೋಟಿಯ ಕುಂಭಮೇಳದ ಆದಾಯವೆಷ್ಟು? ಬಿಕರಿಯಾದ ವಸ್ತುಗಳೆಷ್ಟು? ಅಬ್ಬಬ್ಬಾ ಎನ್ನುವ ಮಾಹಿತಿ ಇಲ್ಲಿದೆ...

ಇನ್ನು ಕಾವ್ಯಾ ಶಾಸ್ತ್ರಿಯವರ ಕುರಿತು ಹೇಳುವುದಾದರೆ, ಇವರು ‘ಬಿಗ್ ಬಾಸ್ 10'ರ ಮೂಲಕ ಖ್ಯಾತಿ ಪಡೆದ ಕಿರುತೆರೆ ನಟಿ. ಕೆಲ ಸಮಯ ಬಣ್ಣದ ಲೋಕದಿಂದ ದೂರ ಸರಿದಿದ್ದ ಕಾವ್ಯಾ ಅವರು, ‘ಜಾನಕಿ ಸಂಸಾರ’ ಎಂಬ ಸೀರಿಯಲ್ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಇವರದ್ದು ವಿಲನ್ ರೋಲ್​. 'ಶುಭವಿವಾಹ' ಸೀರಿಯಲ್​ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ತಮಿಳು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 'ಮಹಾಲಕ್ಷ್ಮಿ' ಎಂಬ ತಮಿಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ, 'ಲವ್ 360', 'ಚೆಲುವೆಯೇ ನಿನ್ನ ನೋಡಲು', 'ಯುಗ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಷ್ಟಕ್ಕೂ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಕಾವ್ಯಾ ಸದ್ದು ಮಾಡಿದ್ದರು. ಅದಕ್ಕೆ ಕಾರಣ, ಬಿಗ್​ಬಾಸ್​ ಬಗ್ಗೆ ಅವರು ಅಸಮಾಧಾನ ಹೊರಹಾಕಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಕಮೆಂಟ್​. 'ಈ ಸಲದ ಕನ್ನಡದ ಬಿಗ್​ಬಾಸ್‌ ಸೀಸನ್‌ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರುಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ - ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ' ಎಂದು ಬೇಸರದಿಂದಲೇ ಬಿಗ್ ಬಾಸ್ ವೀಕ್ಷಕರಿಗೆ ಕಿವಿ ಮಾತು ಹೇಳಿದ್ದರು. 

ಕೊನೆಗೂ ಪ್ರಸಾದ ನೀಡಿದ ದೇವಿ: ಕನಿಷ್ಠ ಎರಡು ವರ್ಷ ವೀಕ್ಷಕರಿಗೆ 'ಭಾಗ್ಯಲಕ್ಷ್ಮಿ ಗ್ಯಾರಂಟಿ'!

View post on Instagram