ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಗಂಡ ತಾಂಡವ್ ಭಾಗ್ಯಳ ಆಸ್ತಿಯನ್ನು ಕಿತ್ತುಕೊಂಡು ಬೀದಿಗೆ ತರುವ ಸಂಚು ರೂಪಿಸಿದ್ದಾನೆ. ಒಡವೆಗಳನ್ನು ಕಸಿದುಕೊಂಡು, ಹಣ ಕಟ್ಟಲು ದಾರಿಯಿಲ್ಲದಂತೆ ಮಾಡಿದ್ದಾನೆ. ದಿಕ್ಕೇ ತೋಚದ ಭಾಗ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರ ಕೇಳುತ್ತಾಳೆ. ಆಕೆಯ ತಂದೆ-ತಾಯಿ ತಾಂಡವ್ನನ್ನು ಸತ್ತನೆಂದು ಪರಿಗಣಿಸಿದ್ದಾರೆ. ಲಕ್ಷ್ಮಿ ತಾಂಡವ್ನನ್ನು ಎಚ್ಚರಿಸಿದ್ದಾಳೆ. ಸೀರಿಯಲ್ನ ಮುಂದಿನ ತಿರುವುಗಳಿಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಭಾಗ್ಯಲಕ್ಷ್ಮಿಯ ಬಳಿಯಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಗಂಡ ತಾಂಡವ್. ಐದು ತಿಂಗಳು ಮನೆಯ ಇಐಎಂ ಕಟ್ಟದೇ ಎಲ್ಲರನ್ನೂ ಬೀದಿಗೆ ತರುವ ಪ್ಲ್ಯಾನ್ ಮಾಡಿದ್ದ ಆತ. ಅದಕ್ಕಾಗಿ ಭಾಗ್ಯ ಮತ್ತು ಅಪ್ಪ-ಅಮ್ಮನ ಕೈಯಲ್ಲಿ ಬಿಡಿಕಾಸೂ ಇರದಂತೆ ನೋಡಿಕೊಳ್ಳುತ್ತಿದ್ದಾನೆ. ಅಪ್ಪ ಕೂಡಿಟ್ಟ ಹಣವನ್ನೂ ಲಪಟಾಯಿಸಿದ್ದಾನೆ. ಭಾಗ್ಯ ಸೇರಿ ಎಲ್ಲರೂ ಒಡವೆಗಳನ್ನು ಮಾರಿ ಇಐಎಂ ಹಣ ಕಟ್ಟೋಣ ಎಂದುಕೊಂಡು ಎಲ್ಲ ಒಡವೆ ತೆಗೆದಿಟ್ಟಾಗ ಶ್ರೇಷ್ಠಾ ಸಹಿತ ಬಂದಿರುವ ತಾಂಡವ್, ಆ ಒಡವೆಗಳು ನನ್ನ ಹಣದಿಂದ ತಂದಿರುವುದು, ಅವೆಲ್ಲವೂ ಶ್ರೇಷ್ಠಾಳಿಗೆ ಸಿಗಬೇಕು ಎಂದು ಹೇಳಿ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಹಣ ಕಟ್ಟಲು ಯಾವ ದಾರಿಯೂ ಉಳಿದಿಲ್ಲ. ದಿಕ್ಕೇ ತೋಚದ ಭಾಗ್ಯ ಏನಾದರೊಂದು ಮಾಡುವುದಾಗಿ ಹೇಳಿ ಮನೆಬಿಟ್ಟು ಹೊರಟಿದ್ದಾಳೆ. ಒಂದೇ ದಿನ ಅವರಿಗೆ ಇರುವ ಗಡುವು. ಮರುದಿನ ದುಡ್ಡು ಕಟ್ಟಿಲ್ಲದಿದ್ದರೆ ಮನೆ ಖಾಲಿ ಮಾಡಿ ಬೀದಿಗೆ ಬರಬೇಕು. ಮುಂದೇನು?
ಇದು ಭಾಗ್ಯಲಕ್ಷ್ಮಿ ಸೀರಿಯಲ್ ಸದ್ಯದ ಕಥೆ. ದಾರಿ ತೋರದ ಭಾಗ್ಯ ದೇವಿಯ ದೇವಾಲಯಕ್ಕೆ ಬಂದು ತಮಗೆ ಏಕೆ ಈ ಕಷ್ಟ ಕೊಟ್ಟೆ. ಏನಾದರೂ ಉಪಾಯ ತೋರಿಸು ಎಂದಿದ್ದಾಳೆ. ದೇವಿಯ ಪ್ರಸಾದವಾಗಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ದೇವಿಯ ಪ್ರಸಾದ ಅಂತೂ ಆಯ್ತು, ಇನ್ನು ಎರಡು ವರ್ಷ ಸೀರಿಯಲ್ ಆರಾಮಾಗಿ ಎಳೆಯಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ವೀಕ್ಷಕರಿಗೆ ಇನ್ನೂ ಸೀರಿಯಲ್ ಎಳೆಯುವ ಗ್ಯಾರಂಟಿ ಭಾಗ್ಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮಿ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆಯೋ ನೋಡಬೇಕಿದೆ.
ಅಮೃತಧಾರೆಯಿಂದ ಮಲ್ಲಿ ಔಟ್- ಕಾರಣ ಕೊಟ್ಟ ನಟಿ: ಇನ್ಮುಂದೆ ಅಕ್ಕವ್ರೇ ಅಕ್ಕವ್ರೇ ಅನ್ನೋರು ಯಾರು?
ಅಷ್ಟಕ್ಕೂ, ಶ್ರೇಷ್ಠಾಳ ಸ್ನೇಹಿತ ಭಾಗ್ಯಳಿಗೆ ನೆರವು ನೀಡಬಹುದು ಎನ್ನುವುದು ಕೆಲವರ ಅನಿಸಿಕೆಯಾದರೆ, ಯಾವುದೋ ಮಾಯೆಯಿಂದ ಭಾಗ್ಯಳಿಗೆ ಕೆಲಸ ಸಿಗುತ್ತದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಈಗ ಕೆಲಸ ಸಿಕ್ಕರೆ ಒಂದೇ ದಿನದಲ್ಲಿ ಹಣ ಕೊಡಬೇಕು ಎಂದಾದರೆ, ಅವಳ ಕೈಗೆ ಇಂದೇ ದುಡ್ಡು ಸಿಗಬೇಕು. ಹಾಗಿದ್ದ ಮೇಲೆ ಯಾರೋ ದುಡ್ಡು ತಂದು ಕೊಡಬೇಕು. ಹಾಗಿದ್ದರೆ ಇನ್ಯಾರು ಎನ್ನುವುದು ವೀಕ್ಷಕರ ತಲೆ ತಿನ್ನುತ್ತಿದೆ. ಒಟ್ಟಿನಲ್ಲಿ ಸೀರಿಯಲ್ ಅನ್ನು ಬೈಯುತ್ತಲೇ ಜನರು ಮನರಂಜನೆ ಪಡೆಯುತ್ತಿದ್ದಾರೆ. ಭರತನಾಟ್ಯ, ಅಡುಗೆ, ಟೈಲರಿಂಗ್, ಇಂಗ್ಲಿಷ್ ಎಲ್ಲ ಬರುವಾಗ ಈ ಅಳುಮುಂಜಿ ಮುಖ ಯಾಕೆ? ಜಡೆ ತೆಗೆದು ಹಿಂದೆ ಹಾಕಿ car ಲಿ strong ಆಗಿ ತಿರುಗಾಡಿ ಸ್ವಂತ ಬಿಜಿನೆಸ್ ಮಾಡು ಎಂದು ನೆಟ್ಟಿಗರೊಬ್ಬರು ಭಾಗ್ಯಳಿಗೆ ಬುದ್ಧಿಮಾತು ಹೇಳಿದ್ದಾರೆ. ರಕ್ತ ಕಣ್ಣೀರು ಫಿಲಂ ಹೀರೋ ಪರಿಸ್ಥಿತಿ ಬರಬೇಕು ಅವನಿಗೆ ಎಂದು ತಾಂಡವ್ ವಿರುದ್ಧ ಕಿಡಿ ಕಾರಿದ್ದಾರೆ!
ಅದೇ ಇನ್ನೊಂದೆಡೆ, ತಾಂಡವ್ ಅಪ್ಪ ಮತ್ತು ಅಮ್ಮ ತಮ್ಮ ಮಗ ತಮ್ಮ ಪಾಲಿಗೆ ಸತ್ತ ಎಂದುಕೊಂಡು ಮೈಮೇಲೆ ತಣ್ಣೀರು ಸುರಿದುಕೊಂಡಿದ್ದಾರೆ. ಭಾಗ್ಯಳಿಗೆ ಇನ್ನು ನೀನೇ ನಮಗೆ ಮಗಳು, ನಮಗೆ ಯಾವ ಮಗನೂ ಇಲ್ಲ. ಅವನು ನಮ್ಮ ಪಾಲಿಗೆ ಸತ್ತ ಎಂದಿದ್ದಾರೆ. ಅದೇ ಮತ್ತೊಂದೆಡೆ, ಭಾಗ್ಯಳ ತಂಗಿ ಲಕ್ಷ್ಮೀ ಬಂದು ತಾಂಡವ್ಗೆ ಟಾಂಟ್ ಕೊಟ್ಟು ಹೋಗಿದ್ದಾಳೆ. ನನ್ನ ಅಕ್ಕ ಖುಷಿಯಾಗಿ ಇರ್ತಾಳೆ, ನೀವು ಈ ಭಾಗ್ಯಳ ಜೊತೆ ಸಂಸಾರ ಮಾಡುವುದು ತುಂಬಾ ಸುಲಭ ಎಂದುಕೊಂಡಿದ್ದರೆ ಅದು ತಪ್ಪು. ಸಂಸಾರ ಮಾಡುವುದು ಲವ್ ಮಾಡಿದಷ್ಟು ಸುಲಭ ಅಲ್ಲ, ಅದು ನಿಮಗೆ ಅರ್ಥವಾಗುತ್ತದೆ. ಆಗ ದಯವಿಟ್ಟು ಮತ್ತೊಮ್ಮೆ ನನ್ನ ಅಕ್ಕನ ಬಾಳಿನಲ್ಲಿ ವಾಪಸ್ ಬರಬೇಡಿ ಎಂದು ಹೇಳಿ ಹೋಗಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ.
ಅಮೃತಧಾರೆ ಪೆದ್ದು ಮಲ್ಲಿ, ಭಾರ್ಗವಿ ಆದ್ಮೇಲೆ ಹೀಗೆಲ್ಲಾ ಬದಲಾದ್ಲಾ? ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
