ನುಡಿದಂತೇ ನಡೆದ ಭೂಮಿಕಾ- ಇರೋ ಬರೋ ಕಾರ್ಡ್ಗಳೆಲ್ಲವೂ ಬ್ಲಾಕ್: ವಿಲನ್ಗಳು ವಿಲವಿಲ!
ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುವ ಮನೆಯವರ ಕಳ್ಳಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಭೂಮಿಕಾ ಬಹುದೊಡ್ಡ ತಂತ್ರ ರೂಪಿಸಿದ್ದಾಳೆ. ಅದೇನದು?
![Bhoomika has come up with a great strategy to put a stop to misue of money in Amrutadhare suc Bhoomika has come up with a great strategy to put a stop to misue of money in Amrutadhare suc](https://static-ai.asianetnews.com/images/01j1kyzv216z2d2xw7s0y1sye2/amrutadhare-card-block_363x203xt.jpg)
ಈ ಸೊಸೆ ಉಳಿದ ಬಹುತೇಕ ಸೀರಿಯಲ್ ಸೊಸೆಯಂತೆ ಅಳುಮುಂಜಿಯಲ್ಲ. ಇಲ್ಲಿ ವಿಲನ್ಗಳ ಕೈ ಮೇಲಾಗಲ್ಲ. ಬದಲಿಗೆ ವಿಲನ್ಗಳನ್ನು ಹಂತಹಂತಕ್ಕೂ ವಿಲವಿಲ ಆಗಿಸೋಳು ಸೀರಿಯಲ್ ಹೀರೋಯಿನ್ನು. ವಿಲನ್ಗಳು ಕೆಟ್ಟವರು ಎನ್ನುವುದನ್ನು ಅರಿಯದ ಮುಗ್ಧ ಗಂಡನನ್ನೂ ಎದುರು ಹಾಕಿಕೊಳ್ಳದೇ, ಅವರನ್ನು ಒಳ್ಳೆಯವರೆಂದು ನಂಬಿರುವ ಮನೆಯ ಇತರರಿಗೂ ಯಾವುದೇ ಸಂದೇಹ ಮೂಡದಂತೆ ನಗುನಗುತ್ತಲೇ ಅವರ ಬುಡಕ್ಕೆ ಕತ್ತರಿ ಹಾಕುವಲ್ಲಿ ಈ ಸೊಸೆ ಸಿಕ್ಕಾಪಟ್ಟೆ ಎಕ್ಸ್ಪರ್ಟ್. ಅವಳೇ ಅಮೃತಧಾರೆಯ ಭೂಮಿಕಾ. ಇದೀಗ ಯಾರಿಗೂ ಅರಿವಿಗೆ ಬಾರದೇ ಖಳನಾಯಕರ ಬುಡಕ್ಕೇ ತಂದಿಟ್ಟಿದ್ದಾಳೆ ಈ ಭೂಮಿ ಮಿಸ್ಸು.
ಆಗರ್ಭ ಶ್ರೀಮಂತರ ಮನೆಯಲ್ಲಿ ಕೋಟಿಯೂ ಕಸಕ್ಕೆ ಸಮ. ಅದೇ ಮಧ್ಯಮ ವರ್ಗದ ಕುಟುಂಬದವರಲ್ಲಿ ನೂರು ರೂಪಾಯಿನೂ ಕೋಟಿಗೆ ಸಮ. ಇದೀಗ ಆಗರ್ಭ ಮನೆಯ ಸೊಸೆಯಾಗಿರುವ ಭೂಮಿಕಾಗೆ ಆ ಮನೆಯನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವೇ. ಶ್ರೀಮಂತಿಕೆಯಲ್ಲಿ ಬೆಳೆದ ಹೆಣ್ಣುಮಕ್ಕಳು ಮಧ್ಯಮ ವರ್ಗದ ಮನೆಗೆ ಮದುವೆಯಾಗಿ ಹೋದರೆ ಪಡುವ ಕಷ್ಟ ಒಂದೆಡೆಯಾದರೆ, ಸ್ವಾಭಿಮಾನದ ಮಧ್ಯಮ ವರ್ಗದ ಹೆಣ್ಣು ಶ್ರೀಮಂತರ ಮನೆಗೆ ಸೊಸೆಯಾಗಿ ಹೋದರೂ ಅದೇ ರೀತಿ ಆಗುತ್ತದೆ. ಇದಕ್ಕೆ ಉದಾಹರಣೆ ಅಮೃತಧಾರೆ. ಮಿಡ್ಲ್ಕ್ಲಾಸ್ ಭೂಮಿಕಾ ಆಗರ್ಭ ಶ್ರೀಮಂತನ ಮನೆಯ ಸೊಸೆಯಾಗಿದ್ದೂ ಅಲ್ಲದೇ ಮನೆಯ ಯಜಮಾನಿ ಪಟ್ಟ ಬೇರೆ ಸಿಕ್ಕಿಬಿಟ್ಟಿದೆ. ಆ ಮನೆಯವರ ಖರ್ಚಿಗೆ ಕಡಿವಾಣ ಹಾಕುವ ಪಣ ತೊಟ್ಟಿದ್ದಾಳೆ ಭೂಮಿಕಾ. ಆದರೆ ವಿಲನ್ಗಳೇ ಮನೆಯಲ್ಲಿ ತುಂಬಿದ್ದರೂ ಎಲ್ಲರನ್ನೂ ಒಳ್ಳೆಯವರು ಎಂದು ಬಗೆಯುತ್ತಿರುವ ಪತಿಗೆ ತಿಳಿಯದಂತೆ ಮನೆಯವರಿಗೆಲ್ಲಾ ಬುದ್ಧಿ ಕಲಿಸುವುದು ಅಷ್ಟು ಸುಲಭದ ಮಾತಲ್ಲ.
ನಿವೇದಿತಾ ಡಿವೋರ್ಸ್ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್ ಶೆಟ್ಟಿಗೆ ಟಾಂಗ್ ಕೊಟ್ರಾ ಮಾಜಿ ಅತ್ತೆ?
ಇದೀಗ ದುಡ್ಡು ಕೊಟ್ಟಿಲ್ಲ ಎಂದು ಗೌತಮ್ ತಂಗಿ ಗೌತಮ್ಗೆ ಕಂಪ್ಲೇಟ್ ಮಾಡಿದ್ದಕ್ಕೆ ಗೌತಮ್ ಭೂಮಿಕಾ ಮೇಲೆ ರೇಗಿದ್ದಾನೆ. ಅದೂ ಐದು ಕೋಟಿ ರೂಪಾಯಿ! ಇಷ್ಟು ಹಣ ಯಾಕೆ ಎಂದು ಭೂಮಿಕಾ ಕೇಳಿದ್ದಕ್ಕೆ ಒಂದಕ್ಕೆರಡು ಮಾಡಿ ಗೌತಮ್ ತಲೆ ತುಂಬಿದ್ದಾಳೆ ತಂಗಿ. ತಂಗಿಗೆ ನೋವಾಗಿದ್ದನ್ನು ನೋಡಿ ಭೂಮಿಕಾ ಮೇಲೆ ಗೌತಮ್ ರೇಗಿದ್ದನ್ನು ಕಂಡು ಅತ್ತೆ ಮತ್ತು ನಾದಿನಿಗೆ ಖುಷಿಯೋ ಖುಷಿ. ಅದೇ ಇನ್ನೊಂದೆಡೆ ಭೂಮಿಕಾ ಒಬ್ಬಳೇ ಕುಳಿತು ಕಣ್ಣೀರು ಹಾಕಿದ್ದಾಳೆ. ಅದನ್ನು ತೆರೆಮರೆಯಲ್ಲಿ ನೋಡುತ್ತಿದ್ದ ಅತ್ತೆ ಮತ್ತು ನಾದಿನಿ ಖುಷಿ ಪಟ್ಟಿದ್ದಾರೆ. ಇದು ನಮ್ ಭೂಮಿ ಮಿಸ್ಗೆ ತಿಳಿಯದೇ ಇರುತ್ತಾ? ಅತ್ತೆ ಮತ್ತು ನಾದಿನಿ ಎದುರು ಕಣ್ಣೀರು ಹಾಕಿದಂತೆ ಮಾಡಿದ ಭೂಮಿಕಾ, ನನಗೆ ಎಲ್ಲವೂ ಗೊತ್ತು ನಿಮ್ಮ ಕಳ್ಳಾಟ, ಅದನ್ನು ಹೇಗೆ ಕಂಟ್ರೋಲ್ ಮಾಡುವುದೂ ಗೊತ್ತು ಎನ್ನುತ್ತಲೇ ಇಬ್ಬರಿಗೂ ಛಡಿ ಏಟು ಕೊಟ್ಟಿದ್ದಾಳೆ. ಇನ್ನು ಮುಂದೆ ಹೇಳುವುದಿಲ್ಲ. ಮಾಡಿ ತೋರಿಸ್ತೇನೆ ಎಂದಿದ್ದಳು. ಇದೀಗ ನುಡಿದಂತೆ ನಡೆಯುತ್ತಿದ್ದಾಳೆ.
ಇದೀಗ ತನ್ನ ಕೆಲಸ ಶುರುವಿಟ್ಟುಕೊಂಡಿದ್ದಾಳೆ ಭೂಮಿಕಾ. ಗಂಡ ದುಡಿಯುತ್ತಿರುವ ಕೋಟಿ ಕೋಟಿ ಹಣವನ್ನು ನೀರಿನಂತೆ ಮೋಜು ಮಸ್ತಿಗೆ ಖರ್ಚು ಮಾಡುವವರಿಗೆ ಕಡಿವಾಣ ಹಾಕಲು ಬಯಸಿರೋ ಭೂಮಿಕಾ ಎಲ್ಲರ ಎಟಿಎಂ ಕಾರ್ಡ್ ಸೇರಿದಂತೆ ಹಣ ಬರಬೇಕಿರುವ ಎಲ್ಲವನ್ನೂ ಬ್ಲಾಕ್ ಮಾಡಿಸಿದ್ದಾಳೆ. ಯಾರೂ ಹಣವನ್ನು ತೆಗೆಯದಂತೆ ಮಾಡಿದ್ದಾಳೆ. ಅತ್ತೆ, ನಾದಿನಿ ಮತ್ತು ಅತ್ತೆಯ ಸಹೋದರ ಎಲ್ಲರೂ ಶಾಕ್ ಆಗಿದ್ದಾರೆ. ಇದು ಭೂಮಿಕಾಳ ತಂತ್ರ ಎಂದು ಗೊತ್ತಾಗಿ ಅತ್ತೆ ಶಕುಂತಲಾದೇವಿ ನೀನೋ, ನಾನೋ ಎಂದು ನೋಡೇ ಬಿಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾಳೆ. ಇದೀಗ ಅತ್ತೆ-ಸೊಸೆಯಂದಿರ ಈ ಕಾಳಗದಲ್ಲಿ ಗೆಲುವು ಭೂಮಿಕಾಗೆ ಎಂದು ಗೊತ್ತಿದ್ದರೂ ಇದು ಯಾವೆಲ್ಲಾ ರೀತಿಯ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಇನ್ನಷ್ಟೇ ಕಾದುನೋಡಬೇಕಿದೆ.
ಸೀತಾ-ರಾಮ ವಿವಾಹದ ಟೈಮ್ನಲ್ಲೇ ಎಂಟ್ರಿ ಕೊಟ್ಟಳು ಇನ್ನೋರ್ವ ಮಾಜಿ ಪ್ರೇಯಸಿ! ಮುರಿದು ಬೀಳುತ್ತಾ ಮದ್ವೆ?