ಸಿದ್ದಿ ಮನೆಯಲ್ಲಿ ನೈಟಿ ಧರಿಸಿ ಫುಲ್ ಎಸಿ ಎಂದ ಸುಕೃತಾ ! ಹಳ್ಳಿಯಲ್ಲಿ ಭರ್ಜರಿ ಬ್ಯಾಚುಲರ್ಸ್

Synopsis
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭರ್ಜರಿ ಬ್ಯಾಚುಲರ್ಸ್ ಟೀಂ ಈಗ ಹಳ್ಳಿ ಸೇರಿದೆ. ಸಿದ್ದಿ ಜೀವನದ ಅನುಭವ ಪಡೆದ ಸ್ಪರ್ಧಿಗಳ, ಹಳ್ಳಿ ಜೀವನ ಎಂಜಾಯ್ ಮಾಡ್ತಿದ್ದಾರೆ.
ಜೀ ಕನ್ನಡ (Zee Kannada )ದಲ್ಲಿ ಪ್ರಸಾರ ಆಗ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 (Bharjari Bachelors) ಈ ಬಾರಿ ಮಜವಾಗಿದೆ. ಪ್ಯಾಟೆ ಹುಡುಗ್ರೆಲ್ಲ ಹಳ್ಳಿ ಸೇರಿದ್ದಾರೆ. ಯಲ್ಲಾಪುರದ ಹಳ್ಳಿಯಲ್ಲಿ ಸಿದ್ದಿ ಜನಾಂಗದ ಜೊತೆ ಸ್ಪರ್ದಿಗಳು ಹೊಸ ಅನುಭವ ಪಡೆಯುತ್ತಿದ್ದಾರೆ. ಈಗಾಗಲೇ ಜೀ ಕನ್ನಡ, ಭರ್ಜರಿ ಬ್ಯಾಚುಲರ್ಸ್ 2 ಶೋನ ಹಳ್ಳಿ ಕಥೆಯ ಅನೇಕ ಪ್ರೋಮೋಗಳನ್ನು ಪೋಸ್ಟ್ ಮಾಡಿದೆ. ಈಗ ನಟಿ ಸುಕೃತಾ ವಿಡಿಯೋ ವೈರಲ್ ಆಗ್ತಿದೆ. ಹಳ್ಳಿ ಸೇರ್ತಿದ್ದಂತೆ ನಟಿ ಸುಕೃತಾ ಸ್ಟೈಲ್ ಬದಲಾಗಿದೆ. ಮಾಡರ್ನ್ ಡ್ರೆಸ್ ನಲ್ಲಿ ಮಿಂಚುತ್ತಿದ್ದ ಸುಕೃತಾ ನೈಟಿ ಧರಿಸಿದ್ದಾರೆ.
ಸುಕೃತಾ ಹೊಸ ಡ್ರೆಸ್ ವಿಡಿಯೋವನ್ನು ಜೀ ಕನ್ನಡ ತನ್ನ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದೆ. ಹಂಗಿದ್ದ ಸುಕೃತಾ ಕಾಡಲ್ಲಿ ಹಿಂಗಾಗಿದ್ದು ಯಾಕೆ ಅಂತ ಶೀರ್ಷಿಕೆ ಹಾಕಲಾಗಿದೆ. ನನ್ನನ್ನು ನೀವು ಮಾಡರ್ನ್ ಡ್ರೆಸ್ ನಲ್ಲಿ ನೋಡಿರ್ತೀರಿ. ಇದೇ ಮೊದಲ ಬಾರಿ ನಾನು ನೈಟಿ ಧರಿಸಿದ್ದೇನೆ. ಇಲ್ಲಿನ ಆಂಟಿ ನನಗೆ ನೈಟಿ ಕೊಟ್ಟಿದ್ದಾರೆ. ಫುಲ್ ಎಸಿ. ಈ ಸೆಕೆಗೆ ನೈಟಿ ಹಿತವಾಗಿದೆ. ಆರಾಮಾಗಿದೆ, ಕಂಫರ್ಟ್ ಆಗಿದೆ. ಇದನ್ನು ಹಾಕಿಕೊಂಡು ಎಲ್ಲ ಕೆಲ್ಸ ಮಾಡ್ತಿದೆನೆ. ಇದು ನನಗೆ ಹೊಸ ಅನುಭವ. ಎಂಜಾಯ್ ಮಾಡ್ತಿದ್ದೇನೆ ಅಂತ ಸುಕೃತಾ ಹೇಳಿದ್ದಾರೆ. ಕಪ್ಪು- ಬಿಳಿ ಬಣ್ಣದ ಕಾಟನ್ ನೈಟಿ ಧರಿಸಿರುವ ಸುಕೃತ ಕೂದಲು ಬಿಟ್ಟಿದ್ದಾರೆ. ಕೈನಲ್ಲಿ ಬಣ್ಣಗಳು ತುಂಬಿರುವ ಪ್ಲೇಟ್ ಹಿಡಿದಿದ್ದು, ಮೇಕಪ್ ಇಲ್ಲದೆಯೂ ಸುಕೃತ ಸುಂದರವಾಗಿ ಕಾಣ್ತಿದ್ದಾರೆ.
ಪ್ಯಾಟೆ ಮಂದಿ ಕಾಡಿಗೆ ಬಂದ್ರು ನೆನಪಿಸಿದ ಶೋ : ಭರ್ಜರಿ ಬ್ಯಾಚುಲರ್ಸ್ ಈ ಬಾರಿ ಭರ್ಜರಿಯಾಗೇ ಇದೆ. ಯಲ್ಲಾಪುರದ ಸಿದ್ದಿ ಉತ್ಸವದಲ್ಲಿ ಬರೀ ಭರ್ಜರಿ ಬ್ಯಾಚುಲರ್ಸ್ ಸ್ಪರ್ಧಿಗಳು ಮಾತ್ರ ಪಾಲ್ಗೊಂಡಿಲ್ಲ. ರವಿಚಂದ್ರನ್, ರಚಿತಾ ರಾಮ್ ಕೂಡ ಹಳ್ಳಿಗೆ ಬಂದಿದ್ದಾರೆ. ನಿರಂಜನ್ ದೇಶಪಾಂಡೆಗೆ ಸಾಥ್ ನೀಡಲು ಅಕುಲ್ ಬಾಲಾಜಿ ಕೂಡ ಬಂದಿದ್ದಾರೆ. ಅಕುಲ್ ಬಾಲಾಜಿ ಪ್ರೋಮೋ ನೋಡ್ತಿದ್ದಂತೆ ಜನರು ಪ್ಯಾಟೆ ಮಂದಿ ಕಾಡಿಗೆ ಬಂದ್ರು ಶೋ ನೆನಪಿಸಿಕೊಂಡಿದ್ದಾರೆ. ಆ ಶೋ ನಿರೂಪಣೆ ಮಾಡಿದ್ದು ಅಕುಲ್ ಬಾಲಾಜಿ. ಅಲ್ಲದೆ ಇಡೀ ಶೋ ಹಳ್ಳಿಯಲ್ಲಿ ನಡೆದಿತ್ತು. ಭರ್ಜರಿ ಬ್ಯಾಚುಲರ್ ನಲ್ಲಿ ಸ್ಪರ್ಧಿಗಳು ಒಂದೆರಡು ದಿನದ ಮಟ್ಟಿಗೆ ಹಳ್ಳಿಯಲ್ಲಿರಲಿದ್ದಾರೆ. ದೊಡ್ಡ ಅಖಾಡ ಸಿದ್ಧವಾಗಿದ್ದು, ಬಲಾ ಬಲ ಪ್ರದರ್ಶನ ಸಿದ್ದಿ ಉತ್ಸವದಲ್ಲಿ ನಡೆಯಲಿದೆ.
ಬೇಸಿಗೆ ಬಿಸಿಲಿನಲ್ಲಿ ಹಳ್ಳಿಯಲ್ಲಿ ಸ್ಪರ್ಧಿಗಳ ಮೋಜು : ಸಿದ್ದಿ ಜನಾಂಗದ ಜೀವನ ಶೈಲಿ ಹೇಗಿರುತ್ತೆ ಎಂಬುದನ್ನು ಬ್ಯಾಚುಲರ್ಸ್ ತಿಳಿದುಕೊಳ್ತಿದ್ದಾರೆ. ಸುಕೃತಾ ಮಾತ್ರವಲ್ಲ ಭರ್ಜರಿ ಬ್ಯಾಚುಲರ್ಸ್ ನ ಎಲ್ಲ ಸ್ಪರ್ಧಿಗಳ ಲುಕ್ ಬದಲಾಗಿದೆ. ವೇದಿಕೆ ಮೇಲೆ ಮಿರಿ ಮಿರಿ ಬಟ್ಟೆ ಹಾಕಿಕೊಂಡು ಮಿಂಚುತ್ತಿದ್ದವರು ಈಗ ಸಂಪೂರ್ಣ ಹಳ್ಳಿ ಸ್ಟೈಲ್ ಗೆ ಬಂದಿದ್ದಾರೆ. ಹಳ್ಳಿಯವರಂತೆ ಕೆಲ್ಸ ಮಾಡ್ತಿದ್ದಾರೆ. ಸಗಣಿ ಸಾರಿಸೋದ್ರಿಂದ ಹಿಡಿದು, ತೋಟಕ್ಕೆ ಹೋಗುವವರೆಗೆ ಎಲ್ಲ ಕೆಲ್ಸವನ್ನು ಸ್ಪರ್ಧಿಗಳು ಮಾಡ್ತಿದ್ದಾರೆ. ಹುಲಿ ಕಾರ್ತಿಕ್ ನೀಲಾವತಿ ಸಿದ್ದಿ ಕುಟುಂಬದಲ್ಲಿ ಆಸ್ತಿ ಪಾಲು ಕೇಳಿದ್ರೆ, ರಕ್ಷಿತ್ ಬುಲೆಟ್ ಮೀನಿಗಾಗಿ ಬಲೆ ಬೀಸಿದ್ದಾರೆ. ಇನ್ನು ಬಾವಿಯಲ್ಲಿ ನೀರು ಸೇದೋಕೆ ಉಲ್ಲಾಸ ಪವಿ ಹೋದ್ರೆ, ಇದ್ದಿಲಿನಲ್ಲಿ ಹಲ್ಲುಜ್ಜಿ, ಹಳ್ಳಿ ಜೀವನ ತೋರಿಸಿಕೊಟ್ಟಿದ್ದಾರೆ ಪ್ರವೀಣ್, ಸುಕೃತ.
ಜೀ ಕನ್ನಡದ ಒಂದೊಂದೇ ಪ್ರೋಮೋ ಬಿಡ್ತಿದ್ದಂತೆ ವೀಕ್ಷಕರ ಆಸಕ್ತಿ ಹೆಚ್ಚಾಗಿದೆ. ಸಿದ್ದಿ ಉತ್ಸವದಲ್ಲಿ ಭರ್ಜರಿ ಬ್ಯಾಚುಲರ್ಸ್ ಏನೆಲ್ಲ ಮಾಡಿದ್ದಾರೆ ಅನ್ನೋದನ್ನು ತಿಳಿಯೋ ಕುತೂಹಲದಲ್ಲಿ ವೀಕ್ಷಕರಿದ್ದಾರೆ. ಹಾಗೆಯೇ ಅಕುಲ್ ಬಾಲಾಜಿ ಸ್ವಾಗತಿಸಿರುವ ವೀಕ್ಷಕರು, ಆದಷ್ಟು ಬೇಗ ರಿಯಾಲಿಟಿ ಶೋ ಮಾಡಿ ಅಂತ ಬೇಡಿಕೆ ಇಟ್ಟಿದ್ದಾರೆ.