Saregamapa Kannada Show Mohan Son Hrithik: ಇತ್ತೀಚೆಗೆ ಅಪ*ಘಾತ, ಆತ್ಮ*ಹತ್ಯೆ, ಹೃದಯಾಘಾತದ ಕಾರಣಕ್ಕೆ ದಿನಕ್ಕೆ ಒಂದಿಷ್ಟು ಜನರು ಸಾಯುತ್ತಿದ್ದಾರೆ. ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿರುವವರು ಸಾಯೋದು ಹೆಚ್ಚಾಗುತ್ತಿದೆ. ಸರಿಗಮಪ ಶೋ ಜ್ಯೂರಿ ಮೋಹನ್‌ ಅವರ ಮಗ ಕೂಡ ನಿಧನರಾಗಿದ್ದಾರಂತೆ.

ನಟ ಮಂಡ್ಯ ರಮೇಶ್‌ ಅವರ ನಟನ ರಂಗಭೂಮಿ ಕೇಂದ್ರದಲ್ಲಿ ಆಕ್ಟಿವ್‌ ಆಗಿದ್ದ ಹೃತಿಕ್‌ ಅವರು ನಿಧನರಾಗಿದ್ದಾರೆ. ಈ ಬಗ್ಗೆ ಮಂಡ್ಯ ರಮೇಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇವರ ನಿಧನಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. 

ಮಂಡ್ಯ ರಮೇಶ್‌ ಪೋಸ್ಟ್‌ ಹೀಗಿದೆ!

ನಟನದ ನಾಟಕಗಳನ್ನು ನೋಡಿದವರಿಗೆ ಈ ಹುಡುಗ ಪರಿಚಿತ. ಹೃತಿಕ್ (ಜಿ‌‌ ಸರಿಗಮಪ ದ ಜೂರಿಯಾಗಿರುವ ಮೋಹನ್ ಅವರ ಏಕ ಮಾತ್ರ ಪುತ್ರ. ಮೊನ್ನೆ ಮೊನ್ನೆ ನಡೆದ ‘ಸುಬ್ಬಣ್ಣ ಸ್ಮರಣೆ’ಯ ಎರಡೂ ನಾಟಕಗಳಲ್ಲಿ ಮುಖ್ಯ ಪಾತ್ರವಹಿಸಿ, ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಅತಿ ಮೆಚ್ಚಿನ ನಟ ಆಗಿದ್ದ. ರಂಗಗೀತೆಗಳಲ್ಲಿ ಸೊಗಸಾಗಿ ಹಾಡಿದ. ಚೆಕ್ ಪೋಸ್ಟ್ ನಂಬರ್ 840 ಯ ರಾಜಕಾರಣಿ,

ಚೋರ ಚರಣದಾಸದ ಕುಡುಕ , ಅಂಧಯುಗದ ಸಂಜಯ, ಅಡುಗೆ ಮನೆಯಲ್ಲಿ ಹುಲಿಯ, ಸಕ್ಸೆನಾ ಮತ್ತು ಶೆಟ್ಟಿ, ಬೆತ್ತಲೆ ಅರಸನ ರಾಜ ರಹಸ್ಯ ನಾಟಕದ ಕಾರಬಾರಿ.... ಅಸಂಖ್ಯ ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿ ನಟನ ತಂಡದ ದೊಡ್ಡ ಶಕ್ತಿಯಾಗಿದ್ದ. ಗಾಯನ, ನೃತ್ಯ, ಪ್ರಾಣಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು, ಅದರ ಬಗ್ಗೆ ಅತೀವ ಅಧ್ಯಯನ ಮಾಡಿ ಮಕ್ಕಳಿಗೆ ಪರಿಸರದ ಬಗ್ಗೆ ಎಚ್ಚರ ಮೂಡಿಸುವುದರ ಜೊತೆಗೆ ಸದಾ ನಗುತ್ತಾ ಹಸನ್ಮುಖನಾಗಿ, ಗೆಳೆಯರ ಗುಂಪಿನಲ್ಲಿ ಚಂದವಾಗಿದ್ದ. ನಟನದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪ್ರೀತಿ, ನಿಷ್ಠೆಗಳಿಂದ ಎಲ್ಲರ ಮನ ಗೆದ್ದಿದ್ದ.

ಧುತ್ತೆಂದು ಇವತ್ತು ಕಣ್ಮರೆಯಾಗಿ ಬಿಟ್ಟ

ಇದೇ ವಾರ ಮಂಡ್ಯ ರಮೇಶ್‌ ಅವರ ಅಣ್ಣ ಕೂಡ ನಿಧನರಾಗಿದ್ದರು, ಈಗ ಹೃತಿಕ್‌ ಇಹಲೋಕ ತ್ಯಜಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಹೋದರೆ ಏನು ಮಾಡೋದು, ತಂದೆ-ತಾಯಿಗೆ ಹೇಗೆ ಸಮಾಧಾನ ಮಾಡೋದು ಎಂದು ಜನರು ಮಂಡ್ಯ ರಮೇಶ್‌ ಅವರ ಪೋಸ್ಟ್‌ಗೆ ಸಂತಾಪ ಸೂಚಿಸಿದ್ದಾರೆ.