ತಾನು ಹೇಗೆ ದುಡಿಯಬಲ್ಲೆ, ದುಡ್ಡಿಗೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿರುವ ಭಾಗ್ಯಳಿಗೆ ಬಾಬಾ ಹಿತ ವಚನ ನುಡಿದಿದ್ದಾರೆ. ಪ್ರತಿ ಹೆಣ್ಣಿಗೂ ಇದು ಅನ್ವಯ ಅಲ್ವಾ? 

ಒಂದು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಓರ್ವ ಹೆಣ್ಣು ಎಷ್ಟು ಪ್ರಮುಖ ಪಾತ್ರ ವಹಿಸುತ್ತಾಳೋ, ಆ ಸಂಸಾರದ ನೊಗವನ್ನೂ ಆಕೆ ಎಷ್ಟೇ ಕಷ್ಟದ ಸ್ಥಿತಿಯಲ್ಲಿಯೂ ಎದುರಿಸಬಲ್ಲಳು, ಇದು ಪ್ರತಿ ಹೆಣ್ಣಿಗೂ ದೇವರು ಕೊಟ್ಟಿರೋ ವರ ಎಂದೇ ಹೇಳಲಾಗುತ್ತದೆ. ಈ ಮಾತಿಗೆ ಉದಾಹರಣೆಯೆಂಬಂತೆ ಪ್ರತಿನಿತ್ಯವೂ ನಮ್ಮ ಕಣ್ಣಮುಂದೆ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಮನೆ-ಸಂಸಾರ-ಜೀವನವನ್ನು ನಿರ್ವಹಿಸಿಕೊಂಡು ಹೋಗಲು ಹೆಣ್ಣಿಗೆ ವಿದ್ಯೆಯೇ ಬೇಕೆಂದೇನೂ ಇಲ್ಲ, ಒಂದಕ್ಷರವೂ ಕಲಿಯದೇ ಇರುವ ಅದೆಷ್ಟೋ ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಂಸಾರ ನಿಭಾಯಿಸುತ್ತಾರೆ, ನೂರಾರು ಮಂದಿಗೆ ಆಶ್ರಯವನ್ನೂ ಕೊಡುತ್ತಾರೆ. ಇದು ಹೆಣ್ಣಿಗಿರುವ ಶಕ್ತಿ. ಇದೇ ಮಾತನ್ನು ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಬಾಬಾ ಭಾಗ್ಯಂಗೆ ಹೇಳಿದ್ದಾರೆ.

ಹೌದು. ಸದ್ಯ ಭಾಗ್ಯಳ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್​ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ. ಇದೇ ಕಾರಣಕ್ಕೆ ತಾಂಡವ್​ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್​ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್​ಗೆ ಅದು ಸಾಧ್ಯವೇ ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್​ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್​ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್​ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ. ಇದೀಗ ತಾಂಡವ್​ಗೆ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ.

ಬಾಲಿವುಡ್​ ಖಳನಾಯಕ್​-2 ಚಿತ್ರದಲ್ಲಿ ನಟ ಯಶ್​? ನಿರ್ದೇಶಕ ಸುಭಾಷ್​ ಘಾಯ್​ ಹೇಳಿದ್ದೇನು?

ಭಾಗ್ಯಳನ್ನು ಸೋಲಿಸಲೇಬೇಕು ಎನ್ನುವ ಕಾರಣಕ್ಕೆ ಮನೆ ಹೇಗೋ ಎರಡು ಭಾಗವಾಗಿದೆಯಲ್ಲ, ಇಎಂಐ ನಾನೊಬ್ಬನೇ ಹೇಗೆ ಕಟ್ಟುವುದು ಎಂದು ಕೇಳುತ್ತಿದ್ದಾನೆ ತಾಂಡವ್​. ಅದಕ್ಕೆ ಭಾಗ್ಯ ಹೆದರಬೇಡಿ. ಅರ್ಧ ಇಎಂಐ ನಾನು ಕಟ್ಟುತ್ತೇನೆ ಎನ್ನುವ ಮೂಲಕ ತಾಂಡವ್​ಗೆ ಶಾಕ್​ ಕೊಟ್ಟಿದ್ದಾಳೆ. ಈಗ ಕಚೇರಿಯಲ್ಲಿ ಅವಾರ್ಡ್​ ಫಂಕ್ಷನ್​ ಇರುವಾಗಲೂ ಭಾಗ್ಯಳೇ ಕಾಡುತ್ತಿದ್ದಾಳೆ. ಎಲ್ಲರನ್ನೂ ಸಾಕಲು ಏನಿಲ್ಲವೆಂದರೂ ಅವಳಿಗೆ ಕನಿಷ್ಠ 35 ಸಾವಿರ ರೂಪಾಯಿಯಾದ್ರೂ ಬೇಕು. ಹೇಗೆ ತರ್ತಾಳೆ. ಅದು ಸಾಧ್ಯವೇ ಇಲ್ಲ ಎಂದುಕೊಂಡರೂ ಏನಾದರೂ ಮಾಡಿ ಅವಳು ತಂದುಬಿಟ್ಟರೆ ಎನ್ನುವ ಭಯವೂ ಕಾಡುತ್ತಿದೆ. 

ಅದೇ ಇನ್ನೊಂದೆಡೆ ಸಂಸಾರವನ್ನು ಹೇಗೆ ನಿಭಾಯಿಸುವುದು, ಹೆಚ್ಚಿಗೆ ಕಲಿತಿಲ್ಲದ ಹೆಣ್ಣು ನಾನು, ಸಂಸಾರ ಒಂದನ್ನು ಬಿಟ್ಟು ಏನೂ ಗೊತ್ತಿಲ್ಲ ಎಂಬ ಚಿಂತೆ ಭಾಗ್ಯಳನ್ನು ಕಾಡುತ್ತಿದೆ. ಆಗ ಎದುರಾಗುವ ಬಾಬಾ ಹೆಣ್ಣಿನ ಶಕ್ತಿಯನ್ನು ಹೇಳಿದ್ದಾರೆ. ಪ್ರತಿ ಹೆಣ್ಣಿಗೂ ಇರುವ ವಿಶೇಷ ಗುಣಗಳ ಬಗ್ಗೆ ಮಾತನಾಡಿದ್ದಾರೆ. ನಿನ್ನಂಥ ಹೆಣ್ಣಿನಿಂದಲೇ ಪ್ರಪಂಚ ನಡೆಯುತ್ತಿರುವುದು ಎಂದಿದ್ದಾರೆ. ಇದನ್ನು ಕೇಳಿ ಭಾಗ್ಯಳಿಗೆ ತಾನು ಹೇಗೆ ಸಂಪಾದನೆ ಮಾಡಬಹುದು, ನನ್ನ ಕೈಯಲ್ಲಿ ಏನಿದೆ ಎಂಬ ಚಿಂತೆ ಕಾಡಿದೆ. ಅಷ್ಟರಲ್ಲಿಯೇ ಮಗಳು ಬಂದು ನನಗೆ ಮನೆಗೆ ಹೋಗಿ ಬಾದಾಮಿ ಹಲ್ವಾ ಮಾಡಿಕೊಡು, ನಿನ್ನ ಕೈರುಚಿ ಸಕತ್​ ಎನ್ನುತ್ತಾಳೆ. ಆಗಲೇ ಭಾಗ್ಯಳಿಗೆ ನಾನು ಅಡುಗೆ ಮಾಡಿ ಅದನ್ನು ಮಾರಿ ಜೀವನ ಸಾಗಿಸಬಹುದು ಎಂದು ಯೋಚನೆ ಮಾಡುತ್ತಾಳೆ. ಇದೇ ಅಲ್ವೆ ಹೆಣ್ಣಿನ ಶಕ್ತಿ. 

ಪ್ರಧಾನಿ ವಿರುದ್ಧ ಅಪಪ್ರಚಾರಕ್ಕೆ ನಟರ ಹೆಸರು ದುರ್ಬಳಕೆ! ಆಮೀರ್​ ಬಳಿಕ ರಣವೀರ್​ ಸಿಂಗ್​ ಎಫ್​ಐಆರ್​