ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಅವರು ಜಗದೀಪ್ ಎಲ್. ಜೊತೆ ಬೆಂಗಳೂರಿನಲ್ಲಿ ವಿವಾಹವಾದರು. ಈ ಹಿಂದೆ ಪ್ಯಾರಿಸ್ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು. ಮದುವೆಯ ನಂತರ, ಅಕಾಡೆಮಿ ತೆರೆಯುವ ಆಶಯ ವ್ಯಕ್ತಪಡಿಸಿದರು. ಜಗದೀಪ್ ಅವರ ಸ್ನೇಹಿತರ ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇವರ ಪರಿಚಯವಾಗಿ ಪ್ರೀತಿಗೆ ತಿರುಗಿತು. ಇದು ಚೈತ್ರಾ ಅವರ ಎರಡನೇ ವಿವಾಹವಾಗಿದ್ದು, ಈ ಹಿಂದೆ 2017ರಲ್ಲಿ ಸತ್ಯ ನಾಯ್ಡು ಅವರನ್ನು ವಿವಾಹವಾಗಿ 2023ರಲ್ಲಿ ವಿಚ್ಛೇದನ ಪಡೆದಿದ್ದರು.
ಖ್ಯಾತ ಆ್ಯಂಕರ್ ಚೈತ್ರಾ ವಾಸುದೇವನ್ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು, ಜಗದೀಪ್ ಎಲ್. ಅವರ ಜೊತೆ ಹಸೆಮಣೆ ಏರಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಮದುವೆಯ ಸೀರೆಯಲ್ಲಿ ಚೈತ್ರಾ ಮಿಂಚಿದ್ದು, ಅದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕಿರುತೆರೆ, ಹಿರಿತೆರೆಯ ಗಣ್ಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ. ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್ ನಲ್ಲಿ ಜಗದೀಪ್ ಜೊತೆ ಪ್ರೀವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು. ವಿಡಿಯೋವನ್ನು ಚೈತ್ರಾ ಹಂಚಿಕೊಂಡಿದ್ದರು. ನಾನು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಎಂದಿದ್ದರು.
ಇದೀಗ ಮದುವೆಯ ಬಳಿಕ ಮಾಧ್ಯಮಗಳ ಜೊತೆ ಫ್ಯೂಚರ್ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಚೈತ್ರಾ, ನಾವಿಬ್ಬರು ಹೇಗೆ ಡಿಸಿಷನ್ ತಗೊಂಡಿದ್ದೇವೋ, ಅದೇ ರೀತಿ ಬೇರೆಯವರಿಗೂ ಸಪೋರ್ಟ್ ಮಾಡಬೇಕು ಎನ್ನುವುದು ನಮ್ಮ ಆಸೆ. ಅದಕ್ಕಾಗಿಯೇ ನಾನೊಂದು ಅಕಾಡೆಮಿ ಶುರು ಮಾಡಬೇಕು ಎಂದು ಇದ್ದೇನೆ. ಅದಕ್ಕೆ ಇವರು ಸಪೋರ್ಟ್ ಕೊಡುತ್ತಾರೆ ಎಂದು ಹೇಳಿದರು. ಅಂದಹಾಗೆ, ಚೈತ್ರಾ ಮತ್ತು ಜಗದೀಪ್ ಅವರ ಮೊದಲ ಭೇಟಿ, ಪ್ರೀತಿ, ಪ್ರೇಮ, ಮದುವೆಯ ಬಗ್ಗೆ ಈ ಹಿಂದೆ ಚೈತ್ರಾ ಮಾತನಾಡಿದ್ದರು. ಪ್ಯಾರೀಸ್ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ನಲ್ಲಿ ಮಾಡಿರುವ ಕುರಿತು ಮಾತನಾಡಿದ್ದ ಅವರು, ಪ್ಯಾರೀಸ್ ಮತ್ತು ಫ್ರಾನ್ಸ್ಗೆ ಹೋಗುವ ಪ್ಲ್ಯಾನ್ ಮೊದಲೇ ಇತ್ತು. ಆ ಬಳಿಕ ಮದುವೆ ಫಿಕ್ಸ್ ಆಯಿತು. ಆದ್ದರಿಂದ ಜಗದೀಪ್ ಅವರನ್ನೂ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿರುವುದಾಗಿ ತಿಳಿಸಿದರು. ಇದು ಆಗಿದ್ದು ಅಚಾನಕ್ ಅಷ್ಟೇ ಎಂದಿದ್ದರು.
ಚೈತ್ರಾ ವಾಸುದೇವನ್ ಮನದಲ್ಲಿ 2ನೇ ಬಾರಿ ಪ್ರೀತಿ ಹುಟ್ಟಿದ್ಹೇಗೆ? ಹುಟ್ಟುಹಬ್ಬದ ರೋಚಕ ಸ್ಟೋರಿ ತೆರೆದಿಟ್ಟ ಆ್ಯಂಕರ್
ಇದೇ ವೇಳೆ, ತಮ್ಮ ಮತ್ತು ಜಗದೀಪ್ ಪರಿಚಯ ಆರಂಭವಾಗಿರುವ ಬಗ್ಗೆ ಮಾತನಾಡಿದ್ದ ಚೈತ್ರಾ, ನಾನು ಈವೆಂಟ್ ನಡೆಸುತ್ತಿದ್ದೇನೆ. ಜಗದೀಪ್ ಅವರ ಸ್ನೇಹಿತರ ಮಗನ ಹುಟ್ಟುಹಬ್ಬಕ್ಕೆ ಎಲ್ಲಾ ಕಡೆ ಸರ್ಚ್ ಮಾಡಿ, ನನ್ನ ಈವೆಂಟ್ ಕಂಪೆನಿಗೆ ಬಂದರು. ಅವರ ಸ್ನೇಹಿತರಿಗೆ ಮಗುವನ್ನು ನೋಡಿಕೊಳ್ಳಬೇಕಾಗಿದ್ದರಿಂದ ಜಗದೀಪ್ ಅವರೇ ಅದರ ಉಸ್ತುವಾರಿ ವಹಿಸಿಕೊಂಡಿದ್ದರಿಂದ, ನನ್ನ ಮತ್ತು ಅವರ ನಡುವೆ ಮಾತುಕತೆ ನಡೆಯಿತು. ಕೊನೆಗೆ ಅವರು ಇದೇ ವಿಷಯವಾಗಿ ನಮ್ಮ ಕಂಪೆನಿಗೆ ಬಂದರು. ಹೀಗೆ ಪರಿಚಯ ಶುರುವಾಯಿತು. ಒಂದೇ ಜಿಮ್, ಒಂದೇಕಾಲೇಜು ಇವೆಲ್ಲಾ ಮಾತನಾಡುವ ನಡುವೆ ಅವರಿಗೆ ನಾನು ಇಷ್ಟವಾದೆ. ನೇರವಾಗಿಯೇ ಅವರು ಈ ವಿಷಯವನ್ನು ನನಗೆ ಹೇಳಿದರು. ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಎಂದು ಚೈತ್ರಾ ಹೇಳಿದ್ದರು. ನಾನು ಅಷ್ಟು ಬೇಗ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಕಾಲಾವಕಾಶ ಬೇಕು ಎಂದೆ. ಅವರು ನೇರವಾಗಿ ನನ್ನ ಅಪ್ಪ-ಅಮ್ಮನ ಬಳಿ ಮಾತನಾಡಿದರು. ಅವರ ಗುಣ ನನ್ನ ಅಪ್ಪ-ಅಮ್ಮನಿಗೆ ಇಷ್ಟವಾಯಿತು. ಅವರಿಗೆ ಅಪ್ಪ ಇಲ್ಲ. ಜೀವನದಲ್ಲಿ ತುಂಬಾ ಪ್ರಯತ್ನ ಪಟ್ಟು ಮೇಲೆ ಬಂದವರು. ಅವರನ್ನು ನೋಡಿ ನನಗೂ ಖುಷಿಯಾಯಿತು. ಇಬ್ಬರ ಮೈಂಡ್ಸೆಟ್, ಗುರಿ ಎಲ್ಲವೂ ಒಂದೇ ರೀತಿ ಎನ್ನಿಸಿತು. ಅವರು ಫ್ಯಾಮಿಲಿಮ್ಯಾನ್ ರೀತಿ ಎನ್ನಿಸಿತು. ನನಗೂ ಇಷ್ಟವಾಗಿ ಒಪ್ಪಿಕೊಂಡೆ ಎಂದಿದ್ದರು ಚೈತ್ರಾ.
ಅಂದಹಾಗೆ, ಇದು ಚೈತ್ರಾ ವಾಸುದೇವನ್ ಅವರಿಗೆ ಎರಡನೇ ಮದುವೆ. ಚೈತ್ರಾ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎಂಬುವವರ ಕೈ ಹಿಡಿದಿದ್ದರು. 2017ರಲ್ಲಿ ಚೈತ್ರಾ ವಾಸುದೇವನ್ ಮದುವೆ ನಡೆದಿತ್ತು. ಆದ್ರೆ ಮದುವೆಯಾಗಿ 5 ವರ್ಷಗಳ ನಂತ್ರ ಅವರು ವಿಚ್ಛೇದನ ಪಡೆದಿದ್ದರು. 2023ರಲ್ಲಿ ಚೈತ್ರಾ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದರು. ಅಲ್ಲದೆ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಏನು ಕಾರಣ ಎಂಬುದನ್ನು ಹೇಳಿದ್ದರು. ಸಂಸಾರ ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೆ ಎಂದಿದ್ದ ಚೈತ್ರಾ ಧೈರ್ಯ ಕಳೆದುಕೊಂಡಿರಲಿಲ್ಲ. ಚೈತ್ರಾ ನಿರೂಪಕಿ ಮಾತ್ರವಲ್ಲ ಅವರು ಉದ್ಯಮಿಯೂ ಹೌದು. ನಾನಾ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಚೈತ್ರಾ, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಮತ್ತು ಸ್ಟಾರ್ ಕನ್ನಡದಲ್ಲಿ ನಿರೂಪಣೆ ಮಾಡಿದ್ದಾರೆ ಚೈತ್ರಾ. ಅಲ್ಲದೆ ಬಿಗ್ ಬಾಸ್ 7 ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಚೈತ್ರಾ, ಯುಟ್ಯೂಬ್ ನಲ್ಲಿ ಅನೇಕ ವಿಷ್ಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಇವರ ಮದುವೆಯ ವಿಡಿಯೋ ಅನ್ನು ನಮ್ಮ ಕೆಎಫ್ಐ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಚೈತ್ರಾ ವಾಸುದೇವನ್ ಕೈ ಹಿಡಿಯುತ್ತಿರುವ ಹುಡುಗ ಇವರೆ, ಫೋಟೋ ರಿವೀಲ್ ಮಾಡಿದ ಆಂಕರ್
