ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ತನಗೆ ಮಕ್ಕಳಾಗಲ್ಲ ಅಂತ ಅತ್ತೂ ಅತ್ತೂ ಸ್ಕ್ರೀನೆ ಒದ್ದೆಯಾಗಿದೆ. ಟೆಕ್ನಾಲಜಿ ಈ ಲೆವೆಲ್ನಲ್ಲಿರುವಾಗ ಬಿಲಿಯನೇರ್ ಹೆಂಡ್ತಿ ಹಿಂಗಾ ಯೋಚ್ನೆ ಮಾಡೋದು ಅಂತ ಜನ ತಾರಾಮಾರ ಉಗೀತಿದ್ದಾರೆ.
ಅಮೃತಧಾರೆ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತೆ. ಈ ಸೀರಿಯಲ್ ಆರಂಭದಿಂದಲೂ ಸದಭಿರುಚಿ ಕಥೆಗೆ, ಉತ್ತಮ ನಟನೆಗೆ ಸಾಕಷ್ಟು ಹೆಸರು ಮಾಡಿತ್ತು. ಆದರೆ ಈಗಿನ ಸ್ಟೋರಿ ಟ್ರ್ಯಾಕ್ ಮಾತ್ರ ವೀಕ್ಷಕರಿಗೆ ಕೊಂಚವೂ ಇಷ್ಟವಾದಂತಿಲ್ಲ. ಸೀರಿಯಲ್ ಹಳ್ಳ ಹಿಡೀತಿದೆ. ಹೀಗಾದರೆ ಖಂಡಿತಾ ಮತ್ತೊಂದು 'ಸೀತಾರಾಮ'ದ ಹಾಗಾಗುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅದರರ್ಥ ಸೀರಿಯಲ್ ಕಥೆ ವೀಕ್ಷಕರಿಗೆ ಇಷ್ಟವಾಗದೇ ಹೋದರೆ ಟಿಆರ್ಪಿ ಕುಸಿತವನ್ನು ಸೀರಿಯಲ್ ಟೀಮ್ ಫೇಸ್ ಮಾಡಬೇಕಾಗುತ್ತೆ. ಒಮ್ಮೆ ಹೀಗೆ ಟಿಆರ್ಪಿಯಲ್ಲಿ ಕೆಳಗಿಳಿದರೆ ಮತ್ತೆ ಮೇಲಕ್ಕೇರೋದು ದೊಡ್ಡ ಸರ್ಕಸ್ಸು. ಹಾಗೆ ನೋಡಿದರೆ ಈ ಟಿಆರ್ಪಿ ರೇಸನ್ನು ಅರ್ಥ ಮಾಡಿಕೊಳ್ಳೋದೂ ಕಷ್ಟನೇ. ಸೀರಿಯಲ್ ವೀಕ್ಷಕರು ಈ ಥರ ಇರ್ತಾರೆ, ಅವರ ಯೋಚನೆ ಈ ರೀತಿ ಇರುತ್ತೆ ಅಂತ ಗ್ರಹಿಸಿ ಚಾನೆಲ್ ಸೀರಿಯಲ್ ಕಥೆ ಹೆಣೆಯುತ್ತೆ. ಆದರೆ ಈ ಕಾಲದ ವೀಕ್ಷಕರು ಹಿಂದಿನ ಕಾಲದಂತೆ ಗೋಳಾಡುವ, ವಿಷ ಹಾಕುವಂಥಾ ಸ್ಟೋರಿ ಲೈನ್ ಕಂಡರೆ ಬೆಂಕಿ ಆಗ್ತಾರೆ. ಅವರಿಗೆ ಮೊನಾಟನಿ ಸ್ಟೋರಿ ಲೈನ್ಗಳು ಇಷ್ಟ ಆಗಲ್ಲ.
ಅದರ ಬದಲು ಲವಲವಿಕೆ, ರೊಮ್ಯಾನ್ಸ್, ಕಾಮಿಡಿ ಇತ್ಯಾದಿಗಳನ್ನು ಈ ಕಾಲದ ಸೀರಿಯಲ್ ವೀಕ್ಷಕರು ಮೆಚ್ಚಿಕೊಳ್ಳೋದನ್ನ ಆ ಸೀರಿಯಲ್ ಪ್ರೋಮೋಗೆ ಬಂದಿರುವ ಕಾಮೆಂಟ್ ನೋಡಿಯೇ ಅರ್ಥ ಮಾಡಿಕೊಳ್ಳಬಹುದು. ಆದರೆ ಸೀರಿಯಲ್ ಪ್ರೋಮೋ ನೋಡೋರೆಲ್ಲ ಮನೆಯಲ್ಲಿ ಟಿವಿ ಮುಂದೆ ಕೂತು ಸೀರಿಯಲ್ ನೋಡಲ್ಲ ಅನ್ನೋದು ಸೀರಿಯಲ್ ಟೀಮ್ಗಳ ಸಿದ್ಧ ಉತ್ತರ. ಹೀಗಾಗಿ ಅವರು ತಮ್ಮ ಮಂಚಕ್ಕೆ ಮೂರೇ ಕಾಲು ಅನ್ನೋ ಹಾಗೆ ಅದೇ ಹಳೇ ಸವಕಲು ಕಥೆ ಹೇಳಲು ಬಂದು ಟಿಆರ್ಪಿ ರೇಸ್ನಲ್ಲಿ ಯದ್ವಾ ತದ್ವಾ ಹೊಡೆಸಿಕೊಳ್ತಾರೆ. ಸದ್ಯ ಅಮೃತಧಾರೆ ಸೀರಿಯಲ್ನ ಸ್ಟೋರಿ ಲೈನ್ ಹೋಗ್ತಿರೋ ರೀತಿ ನೋಡಿದ್ರೆ ಇದೂ ಹೊಡೆಸಿಕೊಳ್ಳುವ ಸೂಚನೆ ಕಾಣುತ್ತಿದೆ.
ಅಷ್ಟಕ್ಕೂ ಸೀರಿಯಲ್ ಪ್ರಿಯರಿಗೆ ಈ ಸೀರಿಯಲ್ ಕಥೆ ಗೊತ್ತಿರುತ್ತೆ. ಭೂಮಿಕಾ ನಿಜಕ್ಕೂ ಗರ್ಭ ಧರಿಸಿರುವ ಸೂಚನೆ ನೀಡಿದರೂ ವಿಲನ್ ಶಕುಂತಲಾ ಡಾಕ್ಟರಮ್ಮನ್ನ ಟ್ರಾಪ್ ಮಾಡಿ ಅವಳಿಂದ ಸುಳ್ಳು ಹೇಳಿಸಿದ್ದಾಳೆ. ಭೂಮಿಕಾಗೆ ಗರ್ಭಕೋಶದ ಸಮಸ್ಯೆ ಇದೆ, ಮಕ್ಕಳಾಗಲ್ಲ ಅನ್ನೋ ಮಾತನ್ನ ಆಕೆ ಹೇಳಿದ್ದಾಳೆ. ಇತ್ತ ಗೌತಮ್ಗೆ ತನಗೆ ಇದರಿಂದ ಅಪ್ಸೆಟ್ ಆದರೂ ಭೂಮಿಕಾಗೆ ಗೊತ್ತಾದ್ರೆ ಅವಳನ್ನು ಹ್ಯಾಂಡಲ್ ಮಾಡೋದು ಕಷ್ಟ ಅಂತ ತನಗೆ ಸಮಸ್ಯೆ ಇದೆ, ಮಕ್ಕಳಾಗಲ್ಲ ಅಂತ ಸುಳ್ಳು ಹೇಳಿದ್ದಾನೆ. ಆತನನ್ನು ಮನೆಯವರು, ಭೂಮಿಕಾ ಎಲ್ಲರೂ ಸಮಾಧಾನ ಮಾಡಿದ್ದಾರೆ. ಇತ್ತ ಶಕುಂತಳಾ ಭೂಮಿಕಾಗೆ ತನ್ನ ಪ್ಲಾನ್ ಪ್ರಕಾರವೇ ಸಮಸ್ಯೆ ಆಗಿರೋದು ಗೌತಮ್ಗಲ್ಲ, ನಿಂಗೆ ಅನ್ನುವ ಮಾತನ್ನ ಹೇಳಿ ಅವರಿಗೆ ಸಿಕ್ಕಪಟ್ಟೆ ಹರ್ಟ್ ಮಾಡಿ ಗೌತಮ್ಗೆ ಬೇರೆ ಮದುವೆ ಮಾಡಿಸುವ ಯೋಚನೆಯನ್ನು ಭೂಮಿಕಾ ಮನಸ್ಸಲ್ಲಿ ಬಿತ್ತಿದ್ದಾಳೆ. ಈಗ ಸೀರಿಯಲ್ ಫುಲ್ ಭೂಮಿಕಾ ಅಳು. ಆ ಅಳುವಿಗೆ ಸ್ಕ್ರೀನೆಲ್ಲ ಒದ್ದೆಯಾಗೋ ಸೂಚನೆ ಇದೆ.
ಕನ್ನಡ ಕಿರುತೆರೆಯ ಎವರ್ ಗ್ರೀನ್ ಜೋಡಿ ಅಂದ್ರೆ ಇವರೇ ಅಲ್ವಾ? ಏನಂತೀರಿ ನೀವು
'ಕಾಲ ಇಷ್ಟೆಲ್ಲ ಬದಲಾಗಿದೆ, ಭೂಮಿಕಾಗೆ ಸಮಸ್ಯೆ ಇದ್ದರೂ ಐವಿಎಫ್ನಿಂದ ಮಗು ಪಡೆಯೋದು ಕಷ್ಟ ಅಲ್ವೇ ಅಲ್ಲ. ಅದೇ ಸವಕಲು ಯೋಚನೆಯನ್ನೇ ಹೇಳ್ತಿದ್ದೀರಲ್ಲ, ಮಕ್ಕಳಾಗಲ್ಲ ಅಂತ ಗಂಡಂಗೆ ಬೇರೆ ಮದುವೆ ಮಾಡೋದು.. ಇದು ಸೊಸೈಟಿ ಮೇಲೆ ಯಾವ ಪರಿಣಾಮ ಬೀರುತ್ತೆ ಗೊತ್ತಾ?' ಅಂತ ಜನ ಝಾಡಿಸ್ತಿದ್ದಾರೆ. ಅವರಿಗೆ ಕಥೆಯ ಈ ಲೈನ್ ಇಷ್ಟನೇ ಆಗಿಲ್ಲ. ಮೊದಲಿಂದಲೂ ಲವಲವಿಕೆಯ ಕಥೆಗೆ ಹೆಸರಾಗಿದ್ದ ಅಮೃತಧಾರೆ ಸೀರಿಯಲ್ನಿಂದ ನಾವು ಇದನ್ನ ನಿರೀಕ್ಷಿಸಿರಲಿಲ್ಲ ಅಂತ ಬಹಳ ಮಂದಿ ಕಾಮೆಂಟ್ ಮಾಡಿದ್ದಾರೆ.
ಸೀತಾರಾಮ ಧಾರಾವಾಹಿ ಬಿಗ್ ಟ್ವಿಸ್ಟ್: ಅಘೋರಿ ಬಾಬಾ ಸಿಹಿಗೆ ಕೊಟ್ಟ 'ಹನುಮ ರಕ್ಷೆ'ಯ ಶಕ್ತಿ ಏನು ಗೊತ್ತಾ?
