Asianet Suvarna News Asianet Suvarna News

ನಮಗೇ ಗೊತ್ತಿಲ್ಲದ ನಮ್ಮ ಬೆಂಗಳೂರಿನ 10 ವಿಶೇಷತೆಗಳು, ನಿಮಗ್ಗೊತ್ತಿತ್ತಾ?

ಬೆಂಗಳೂರು (bangalore) ಅಷ್ಟು ಪ್ರಾಚೀನ ಅಲ್ಲ, ಇದೊಂದು ನೂತನ ನಗರ ಅಂತ ಕೆಲವರು ಹೇಳುತ್ತಾರೆ. ಆದರೆ ಬೆಂಗಳೂರು ನಿಜವಾಗಿಯೂ ಪ್ರಾಚೀನ ಎಂದು ಸಾರುವ ಹಲವಾರು ಸಂಗತಿಗಳು ಕಾಣಸಿಗುತ್ತವೆ. ಇದರ ಬಗೆಗೆ ಹೆಚ್ಚಿನ ಬೆಂಗಳೂರಿಗರಿಗೇ ಗೊತ್ತಿಲ್ಲ. ಅದನ್ನು ಒಂದೊಂದಾಗಿ ನೋಡೋಣ.

what you know about ancient bangalore is not true, this city is old
Author
First Published Apr 1, 2023, 11:15 AM IST

ದಿಲ್ಲಿ (dehli), ಮುಂಬಯಿಯಂಥ (umbai) ನಗರಗಳು ಪುರಾತನವಾದವು. ಬೆಂಗಳೂರು (bangalore) ಅಷ್ಟು ಪ್ರಾಚೀನ ಅಲ್ಲ, ಇದೊಂದು ನೂತನ ನಗರ ಅಂತ ಹೇಳಲಾಗ್ತದೆ. ಬೆಂಗಳೂರು ನಮ್ಮ ದೇಶದ ಸಿಲಿಕಾನ್ ವ್ಯಾಲಿ (cilicon valey). ಇದು ನಿವೃತ್ತರ ಸ್ವರ್ಗ ಮತ್ತು ಉದ್ಯಾನ ನಗರಿ. ಇದೆಲ್ಲದರ ನಡುವೆ ಈ ನಗರ ವೇಗವಾಗಿ ಬೆಳೆಯುತ್ತಿದೆ ಕೂಡಾ. ಆದರೆ ಬೆಂಗಳೂರು ನಿಜವಾಗಿಯೂ ಪ್ರಾಚೀನ ಎಂದು ಸಾರುವ ಹಲವಾರು ಸಂಗತಿಗಳು ಕಾಣಸಿಗುತ್ತವೆ. ಇದರ ಬಗೆಗೆ ಹೆಚ್ಚಿನ ಬೆಂಗಳೂರಿಗರಿಗೇ ಗೊತ್ತಿಲ್ಲ. ಅದನ್ನು ಒಂದೊಂದಾಗಿ ನೋಡೋಣ.

1. ಭೂಮಿಯ ಆರಂಭದ ಕತೆಯನ್ನು ಬೆಂಗಳೂರಿನಲ್ಲಿ ಶೋಧಿಸಬಹುದು. ಸುಮಾರು 3.5 ಶತಕೋಟಿ ವರ್ಷಗಳ ಹಿಂದೆ, ಈಗ ಭಾರತೀಯ ಪರ್ಯಾಯ ದ್ವೀಪದ ಅತ್ಯಂತ ಪ್ರಾಚೀನ ಮೂಲವಾದ ದಖ್ಖನ್‌ ಪ್ರಸ್ಥಭೂಮಿ ಸೃಷ್ಟಿಯಾಯಿತು. ಇದರ ಕೆಳಭಾಗದಲ್ಲಿ ಮೂಲಶಿಲೆಗಳು ಸಿಗುತ್ತವೆ. ಲಾಲ್‌ಬಾಗ್‌ನಲ್ಲಿ ಈ ಪ್ರಿಕೇಂಬ್ರಿಯನ್ ಕಾಲದ ಬಂಡೆಯನ್ನು ನೀವು ನೋಡಬಹುದು. ನೀವು ಲಾಲ್‌ಬಾಗ್ ಬಂಡೆ ಏರಿದ್ದೀರಾ? ಹಾಗಿದ್ದರೆ ನೀವು 3.6 ಶತಕೋಟಿ ವರ್ಷ ಹಳೆಯ ಶಿಲೆಯ ಮೇಲೆ ನಿಂತಿದ್ದೀರಿ ಎಂದರ್ಥ.

2. ಬೆಂಗಳೂರಿನಲ್ಲಿ ರೋಮನ್ ನಾಣ್ಯಗಳು ಪತ್ತೆಯಾಗಿವೆ. 1965ರಲ್ಲಿ ಹಳೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಮಿಸುತ್ತಿದ್ದಾಗ 256 ರೋಮನ್ ಬೆಳ್ಳಿ ನಾಣ್ಯಗಳಿರುವ ಮಡಕೆ ಪತ್ತೆಯಾಗಿತ್ತು. 1891ರಲ್ಲಿ, ಯಶವಂತಪುರದಲ್ಲಿ ರೈಲು ಮಾರ್ಗವನ್ನು ನಿರ್ಮಿಸುವಾಗ, ಆಗಸ್ಟಸ್, ಟೈಬೀರಿಯಸ್ ಮತ್ತು ಕ್ಲಾಡಿಯಸ್ ಅವರ ಮುಖಗಳನ್ನು ಹೊಂದಿರುವ 163 ರೋಮನ್ ಬೆಳ್ಳಿ ನಾಣ್ಯಗಳನ್ನು ಕಂಡುಹಿಡಿಯಲಾಯಿತು. ರೋಮನ್ ಸಾಮ್ರಾಜ್ಯವು 476 ಕ್ರಿಸ್ತಶಕದಲ್ಲಿ ಕುಸಿಯಿತು. ಆದ್ದರಿಂದ ಇವು 1700 ವರ್ಷಗಳಷ್ಟು ಹಳೆಯವು.

3. ಹಳೆಯ ಬೆಂಗಳೂರು ಸಂಬಂಧಿತ ಶಾಸನ 517 ಕ್ರಿಸ್ತಶಕಕ್ಕೂ ಹಿಂದಿನದು. ಇಂದಿನ ಸಿಲ್ಕ್ ಬೋರ್ಡ್ ಜಂಕ್ಷನ್‌ ಸಮೀಪ, ಬೇಗೂರು ಸರೋವರದ ಪಕ್ಕದಲ್ಲಿರುವ ಪಂಚಲಿಂಗೇಶ್ವರ ದೇವಾಲಯವು 1100 ಕ್ರಿಸ್ತಶಕದಷ್ಟು ಹಿಂದಿನದು. ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ದೇವಾಲಯ. ತಂಜಾವೂರು, ಮಧುರೈ ಮತ್ತು ಆಂಧ್ರಪ್ರದೇಶದ ದೇವಾಲಯಗಳಿಗಿಂತ ಹಳೆಯದು. ಇಲ್ಲಿರುವ 900 ಕ್ರಿಸ್ತಶಕ ಹಳೆಯ ಶಾಸನದಲ್ಲಿ ನಮ್ಮ ನಗರಕ್ಕೆ ʼಬೆಂಗುಳೂರʼ ಎಂದು ಹೆಸರಿಸಲಾಗಿದೆ. ಆಂಧ್ರದ ಸರ್ಕಾರಿ ಬಸ್ಸುಗಳು ಈಗಲೂ ʼಬೆಂಗುಳೂರʼ ಎಂದು ಬರೆಯುತ್ತವೆ. 

4. ಬೆಂಗಳೂರಿಗೆ ಹೇಗೆ ಹೆಸರು ಬಂತು ಎಂಬುದು ಕಾಲ್ಪನಿಕ ಜನಪದ ಕಥೆ. 12ನೇ ಶತಮಾನದ ಹೊಯ್ಸಳ ರಾಜ, 2ನೇ ವೀರ ಬಲ್ಲಾಳ ಬೇಟೆಯ ಸಮಯದಲ್ಲಿ ದಾರಿ ತಪ್ಪಿದನಂತೆ. ಒಬ್ಬ ಮುದುಕಿ ದಣಿದ ರಾಜನಿಗೆ ಬೇಯಿಸಿದ ಕಾಳುಗಳನ್ನು ಅರ್ಪಿಸಿದಳು. ರಾಜನು ಈ ಪ್ರದೇಶವನ್ನು ಬೆಂದ-ಕಾಳು-ಊರು ಎಂದು ನಾಮಕರಣ ಮಾಡಿದ. ಈ ಕಥೆ ಅದ್ಭುತವಾಗಿದೆ, ಆದರೆ ಇದು ಸುಳ್ಳು. ಬೇಗೂರು ಶಾಸನವನ್ನು ಕಂಡುಹಿಡಿದ ವ್ಯಕ್ತಿ, ಪುರಾತತ್ವ ಶಾಸ್ತ್ರಜ್ಞ, ಮೈಸೂರಿನ ಉಸ್ತುವಾರಿ ಅಧಿಕಾರಿಯಾಗಿದ್ದ ಆರ್. ನರಸಿಂಹಾಚಾರ್. ಅವರು "ವೀರ ಬಲ್ಲಾಳನ ಕಥೆಯನ್ನು ನಾವು ತಿರಸ್ಕರಿಸಬಹುದು" ಎಂದು ಬರೆದಿದ್ದಾರೆ.

5. ಹೆಬ್ಬಾಳದಲ್ಲಿ ಒಂದು ವೀರಗಲ್ಲು ದೊರೆತಿದೆ. ರಸ್ತೆಬದಿಯ ಚರಂಡಿಯಲ್ಲಿ ಪತ್ತೆಯಾದ ಈ ವೀರಗಲ್ಲಿನಲ್ಲಿ ಕ್ರಿಸ್ತಶಕ 750ರ ಉಲ್ಲೇಖವಿತ್ತು. ತನ್ನ ಹಳ್ಳಿಯ ಮೇಲಿನ ದಾಳಿಯನ್ನು ಎದುರಿಸಿ ಹುತಾತ್ಮರಾದ ʼಹೆಬ್ಬಾಳ ಕಿಟ್ಟಯ್ಯʼ ಎಂಬವರ ಕತೆ ಅದರಲ್ಲಿದೆ. "ಇವರು ನಮಗೆ ತಿಳಿದುಬಂದಿರುವ ಮೊದಲ ಬೆಂಗಳೂರಿಗರು. ನಮ್ಮಲ್ಲಿ ಅನೇಕರು ಅವರನ್ನು ಬೆಂಗಳೂರಿನ ಪ್ರಥಮ ಪ್ರಜೆ ಎಂದು ಕರೆಯುತ್ತಾರೆ" ಎಂದು ಇತಿಹಾಸಜ್ಞ ಉದಯಕುಮಾರ್‌ ಪಿ.ಎಲ್‌ ಎಂಬವರು ಹೇಳುತ್ತಾರೆ.

ನಮ್ಮಲ್ಲೇ ನೇತ್ರಾಣಿ ಐಲ್ಯಾಂಡ್ ಇರೋವಾಗ ಸ್ಕೂಬಾ ಡೈವಿಂಗ್‌ಗಾಗಿ ಥೈಲ್ಯಾಂಡ್‌ಗೆ ಯಾಕೆ?

6. ನಗರದ ಅತ್ಯಂತ ಹಳೆಯ ಭಾಗಗಳೆಂದು ಜನರು ಭಾವಿಸುವುದು ಚಿಕ್ಕಪೇಟೆ, ಬಳೆಪೇಟೆ ಮತ್ತು ಇವುಗಳ ನೆರೆಹೊರೆಯ ಪ್ರದೇಶಗಳನ್ನು. ಇವು ಚಿಕ್ಕ ಪ್ರದೇಶಗಳು. ಇದಕ್ಕೆ ವಿರುದ್ಧವಾಗಿ, ಇಂದಿನ ಇಂದಿರಾನಗರ 1200 ಕ್ರಿಸ್ತಶಕ ವರೆಗಿನ ಶಾಸನಗಳನ್ನು ಹೊಂದಿದೆ. ಇವತ್ತಿಗೂ ಇರುವ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ಇವು ಪತ್ತೆಯಾಗಿವೆ.

7. ಅದೇ ರೀತಿ ದೊಮ್ಮಲೂರಿನಲ್ಲಿ 1000 ವರ್ಷಗಳ ಹಿಂದಿನ ಸುಂದರವಾದ ಚೊಕ್ಕನಾಥ ಸ್ವಾಮಿ ದೇವಾಲಯವಿದೆ. ಜೆ.ಪಿ.ನಗರ, ಮಾರತ್ತಹಳ್ಳಿ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಶತಮಾನಗಳಷ್ಟು ಹಳೆಯದಾದ ಶಿಲಾಶಾಸನಗಳಿವೆ.

8. ಶಾಸನ ಕಲ್ಲು ಎಂದರೇನು? ಅವುಗಳನ್ನು ಕಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಸಾಮಾನ್ಯವಾಗಿ ಹಳೆಯ ಕನ್ನಡ ಅಥವಾ ತಮಿಳಿನಲ್ಲಿ, ಗಮನಾರ್ಹವಾದದ್ದನ್ನು ದಾಖಲಿಸುತ್ತಾರೆ. ಹೆಚ್ಚಾಗಿ ಇದು ದೇವಸ್ಥಾನ, ಕೆರೆ ನಿರ್ಮಿಸಲು ದೇಣಿಗೆ ನೀಡಿದವರನ್ನು ಸ್ಮರಿಸುತ್ತದೆ. ಸಾಮಾನ್ಯವಾಗಿ ರಾಜನಿಂದ ನೀಡಿದ ಅನುದಾನಗಳ ದಾಖಲೆ. ಬೆಂಗಳೂರಿನಲ್ಲಿ 175 ಶಿಲಾಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 110 ಮಾತ್ರ ಇಂದು ಓದಬಹುದು. ಇನ್ನೂ ನೂರಾರು ಶಾಸನಗಳು ರಿಯಲ್ ಎಸ್ಟೇಟ್‌ನಿಂದಾಗಿ ನಾಶವಾಗಿವೆ.

9. ಬೆಂಗಳೂರಿನ ಎಲ್ಲಾ ಪ್ರಸಿದ್ಧ ಕೆರೆಗಳು ಮಾನವ ನಿರ್ಮಿತ. ಬೇಗೂರು, ಹೆಬ್ಬಾಳ ಕೆರೆಗಳಂತೆ ಬೆಳ್ಳಂದೂರು ಸರೋವರ ಕೂಡ 2000 ವರ್ಷಗಳಷ್ಟು ಹಳೆಯದು. ಕೆರೆಯ ಬಳಿ ದುರ್ಗಾ ವಿಗ್ರಹಗಳು ಪತ್ತೆಯಾಗಿರುವುದರಿಂದ ಇದು ತಿಳಿದಿದೆ. ಸಾಂಪ್ರದಾಯಿಕವಾಗಿ, ಕೆರೆಗಳನ್ನು ಸಂರಕ್ಷಿಸಲು ದುರ್ಗ, ಗಣೇಶ ಮತ್ತು ಕ್ಷೇತ್ರಪಾಲಕ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸುವ ಪದ್ಧತಿ ಇತ್ತು. ಹಲಸೂರು ಮತ್ತು ಸ್ಯಾಂಕಿ ಕೆರೆ ಅತ್ಯಂತ ಇತ್ತೀಚಿನ ಕೆರೆಗಳು.

10. ಬೆಂಗಳೂರಿನ ಇತಿಹಾಸದಲ್ಲಿ ಆಸಕ್ತಿಯುಳ್ಳವರು ಮಿಥಿಕ್ ಸೊಸೈಟಿ ಮೀಡಿಯಾ ಹೊರತಂದಿರುವ “Journey of Bangalore- Southern Hemisphere till 15th century” ಎಂಬ ವೀಡಿಯೊವನ್ನು Youtubeನಲ್ಲಿ ವೀಕ್ಷಿಸಬಹುದು. 

River Rafting ಖುಷಿ ನೀಡುತ್ತೆ ನಿಜ, ಆದ್ರೆ ಸೇಫ್ ಆಗಿರ್ಬೇಕು ಅಂದ್ರೆ ಈ ತಪ್ಪು ಮಾಡ್ಬೇಡಿ
 

Follow Us:
Download App:
  • android
  • ios