Asianet Suvarna News Asianet Suvarna News

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

ಕೇರಳ ಅಂದ್ರೆ ಟೂರಿಸಂ. ಟೂರಿಸಂ ಅಂದ್ರೆ ಕೇರಳ. ಅಷ್ಟರಮಟ್ಟಿಗೆ ಕೇರಳದ ಪ್ರವಾಸೋದ್ಯಮ ಹೆಸರುವಾಸಿಯಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸಿಗರನ್ನು ಕೇರಳೀಯರು ಮನಸ್ಫೂರ್ತಿಯಾಗಿ ಸ್ವಾಗತಿಸುತ್ತಾರೆ. ಆದರೆ ಕೇರಳದ ಈ ಗ್ರಾಮದಲ್ಲಿ ಮಾತ್ರ ಜನರು ಪ್ರವಾಸಿಗರಿಗೆ ಡೋಂಟ್ ಕಮ್ ಎಗೈನ್ ಎಂದೇ ಹೇಳುತ್ತಿದ್ದಾರೆ. ಅದ್ಯಾಕೆ?

Indias Beautiful Village Tag Became A Nightmare For The Residents Of This Kerala Village Vin
Author
First Published Jul 27, 2023, 2:46 PM IST

ಭಾರತ, ಹಚ್ಚ ಹಸಿರಾದ ಭೂರಮೆ, ಸುಂದರವಾದ ಬೆಟ್ಟಗಳು, ಕಡಿದಾದ ಕಣಿವೆಗಳು, ಮೈ ತುಂಬಿಯೋ ಹರಿಯೋ ಝರಿಗಳು, ನದಿಗಳು, ಜಲಪಾತಗಳನ್ನು ಒಳಗೊಂಡ ಸುಂದರ ದೇಶವಾಗಿದೆ. ಹೀಗಾಗಿಯೇ ಇದು ವಿದೇಶಿಗರ ಪಾಲಿನ ಸ್ವರ್ಗ. ವರ್ಷವಿಡೀ ಪ್ರವಾಸಿಗರು ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ಬರುತ್ತಲೇ ಇರುತ್ತಾರೆ. ಅದರಲ್ಲೂ ಮಾನ್ಸೂನ್ ಅಂದರೆ ಕೇಳಬೇಕಾ. ಪ್ರಕೃತಿ ಮೈದುಂಬಿ ನಿಲ್ಲುತ್ತದೆ. ನೋಡಲು ಎರಡೂ ಕಣ್ಣು ಸಾಕಾಗಲ್ಲ. ಮಳೆಗಾಲ ಬಂತು ಅಂದ್ರೆ ಜನ್ರು ಟ್ರಿಪ್‌, ಟ್ರಕ್ಕಿಂಗ್ ಎಂದು ಶುರು ಮಾಡ್ಕೊಂಡು ನಿಸರ್ಗದ ಸೌಂದರ್ಯವನ್ನು ಸವಿಯುತ್ತಾರೆ. ಮಾತ್ರವಲ್ಲ ಇತ್ತೀಚಿಗೆ ಟ್ರಾವೆಲ್ ಬ್ಲಾಗ್‌, ರೀಲ್ಸ್ ಹೆಚ್ಚು ಟ್ರೆಂಡ್‌ ಆಗ್ತಿರೋ ಕಾರಣ ಸೋಷಿಯಲ್ ಮೀಡಿಯಾಗಳ ಮೂಲಕ ಇಂಥಾ ಸುಂದರ ಜಾಗಗಳ ಪರಿಚಯ ಎಲ್ಲರಿಗೂ ಆಗುತ್ತಿದೆ. ಹೆಚ್ಚಿನ ಜನರು ಅತ್ತ ಟ್ರಿಪ್‌, ಟ್ರಕ್ಕಿಂಗ್ ಎಂದು ಹೊರಟುಬಿಡುತ್ತಾರೆ.

ಕೇರಳ ಅಂದ್ರೆ ಟೂರಿಸಂ. ಟೂರಿಸಂ ಅಂದ್ರೆ ಕೇರಳ. ಅಷ್ಟರಮಟ್ಟಿಗೆ ಕೇರಳದ ಪ್ರವಾಸೋದ್ಯಮ (Tourism) ಹೆಸರುವಾಸಿಯಾಗಿದೆ. ದೇವರ ಸ್ವಂತ ನಾಡಿನ ಸುಂದರ ಗ್ರಾಮಗಳು (Village), ಜಲಪಾತಗಳು, ಹಳೆಯ ದೇವಾಲಯಗಳನ್ನು (Old temples) ನೋಡುವುದೇ ಚೆಂದ. ಪ್ರವಾಸೋದ್ಯಮವೇ ಕೇರಳದ ಆರ್ಥಿಕತೆಯ ಮೂಲವಾಗಿದೆ ಎಂದರೂ ತಪ್ಪಾಗದು. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸಿಗರನ್ನು ಕೇರಳೀಯರು ಮನಸ್ಫೂರ್ತಿಯಾಗಿ ಸ್ವಾಗತಿಸುತ್ತಾರೆ. ಆದರೆ ಕೇರಳದ ಈ ಗ್ರಾಮದಲ್ಲಿ ಮಾತ್ರ ಜನರು ಪ್ರವಾಸಿಗರಿಗೆ ಡೋಂಟ್ ಕಮ್ ಎಗೈನ್ ಎಂದೇ ಹೇಳುತ್ತಿದ್ದಾರೆ. ಅದ್ಯಾಕೆ?

ಭಾರತದಲ್ಲಿ ನೋಡ್ಲೇಬೇಕಾದ ಅದ್ಭುತ ಸ್ಥಳಗಳು, ಆನಂದ್ ಮಹೀಂದ್ರಾ ಶೇರ್ ಮಾಡಿರೋ ಬಕೆಟ್ ಲಿಸ್ಟ್‌ ಇಲ್ಲಿದೆ

ಪಾಲಕ್ಕಾಡ್‌ನ ಕೊಲ್ಲಂಗೋಡೆ ಗ್ರಾಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇತ್ತೀಚಿಗೆ ಕೇರಳದ ಪಾಲಕ್ಕಾಡ್‌ನ ಸುಂದರ ಗ್ರಾಮವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚಿಗೆ ಉದ್ಯಮಿ ಆನಂದ್ ಮಹೀಂದ್ರಾ ಸಹ ಭಾರತದಲ್ಲಿ ನೋಡಲೇಬೇಕಾದ ಸುಂದರವಾದ ಹತ್ತು ಸ್ಥಳಗಳ ಪಟ್ಟಿಯಲ್ಲಿಇದನ್ನು ಸೇರಿಸಿದ್ದರು. ಅದುವೇ ಪಾಲಕ್ಕಾಡ್‌ನ ಕೊಲ್ಲಂಗೋಡು. ಹಚ್ಚ ಹಸಿರಾದ ಪರಿಸರದ ನಡುವೆಯಿರುವ ಸುಂದರವಾದ ಹಳ್ಳಿ. ಕೊಲ್ಲಂಗೋಡಿನ ರುದ್ರರಮಣೀಯ ಸೌಂದರ್ಯವನ್ನು (Beauty) ತೋರಿಸುವ ಫೋಟೋಗಳು ಮತ್ತು ರೀಲ್‌ಗಳಿಂದ ಸಾಮಾಜಿಕ ಮಾಧ್ಯಮಗಳು ಕೂಡ ತುಂಬಿವೆ. ಜನರು ಸಾಗರೋಪಾದಿಯಲ್ಲಿ ಇತ್ತ ಆಗಮಿಸುತ್ತಿದ್ದಾರೆ.

ಕೊಲ್ಲಂಗೋಡೆ, ಭಾರತದ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿದೆ.  ಅನೇಕ ಮಲಯಾಳಂ ಚಲನಚಿತ್ರಗಳ ಶೂಟಿಂಗ್ ಇಲ್ಲಿ ನಡೆದಿದೆ. ಇದು ಇಲ್ಲಿಯವರೆಗೆ ಒಂದು ಹಿಡನ್ ಪ್ಲೇಸ್ ಎಂಬಂತೆ ಇತ್ತು. ಯಾವಾಗಲಾದರೂ ಒಮ್ಮೆ ಇಲ್ಲಿಗೆ ಕೆಲವು ಮಂದಿಯಷ್ಟೇ ಆಗಮಿಸುತ್ತಿದ್ದರು. ಆದರೆ, ಉದ್ಯಮಿ ಆನಂದ್ ಮಹೀಂದ್ರಾ ಅದರ ಬಗ್ಗೆ ಟ್ವೀಟ್ ಮಾಡಿದ ನಂತರ ಕೊಲ್ಲಂಗೋಡ್ ಜನಪ್ರಿಯತೆ ಹೆಚ್ಚಾಗಿದೆ. ಕಳೆದ ಕೆಲವು ವಾರಗಳಲ್ಲಿ ಕೊಲ್ಲಂಗೋಡಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದು, ಸ್ಥಳೀಯರು ಈಗ ಪ್ರವಾಸಿಗರಿಂದ ಬೇಸತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕಸವನ್ನು (Waste) ಇಲ್ಲೇ ಎಸೆದು ಹೋಗುತ್ತಿದ್ದು, ಸುತ್ತಲೂ ಮಾಲಿನ್ಯ (Pollution) ತುಂಬಿದೆ.

ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ, ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಗ್ರಾಮದಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿ ಎಸೆದು ಹೋಗುತ್ತಿರುವ ಪ್ರವಾಸಿಗರು
ಕಳೆದ ಕೆಲವು ದಿನಗಳಲ್ಲಿ, ಹಲವಾರು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಪ್ಲಾಸ್ಟಿಕ್ ಮತ್ತು ಮದ್ಯದ ಬಾಟಲಿ ತ್ಯಾಜ್ಯವನ್ನು ಗ್ರಾಮದಲ್ಲಿ ಎಸೆದಿರುವುದನ್ನು ತೋರಿಸುತ್ತದೆ. ಕೆಲವು ಸ್ಥಳೀಯರು ತಮ್ಮ ಭತ್ತದ ಗದ್ದೆಗಳು, ನದಿಗಳು ಮತ್ತು ಕೊಳಗಳು  ಈಗ ಮದ್ಯದ ಬಾಟಲಿಗಳು ಮತ್ತು ಆಹಾರ ತ್ಯಾಜ್ಯಗಳಿಂದ ತುಂಬಿ ಹೋಗಿದೆ ಎಂದು ಆರೋಪಿಸುತ್ತಿದ್ದಾರೆ. ಇದಲ್ಲದೇ ನಿತ್ಯ ಸಂಚರಿಸುವ ಪ್ರವಾಸಿಗರ ವಾಹನಗಳ ದಂಡು, ಬೈಕ್‌ ಸವಾರರ ಗುಂಪುಗಳು ಗ್ರಾಮದ ಕಿರಿದಾದ ರಸ್ತೆಗಳಲ್ಲಿ ಉಸಿರುಗಟ್ಟಿಸುತ್ತಿದ್ದು, ಇದರಿಂದ ಸ್ಥಳೀಯರು ಓಡಾಡಲು ಪರದಾಡುವಂತಾಗಿದೆ.

'ಗ್ರಾಮಕ್ಕೆ ಈಗ ಪ್ರತಿದಿನ ಕನಿಷ್ಠ ಸಾವಿರ ಕಾರುಗಳು ಬರುತ್ತಿವೆ. ಆದರೆ ಅವರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಅಥವಾ ಫ್ರೆಶ್ ಆಗಲು ಸ್ಥಳವಿಲ್ಲ. ಇಲ್ಲಿ ತ್ಯಾಜ್ಯ ವಿಲೇವಾರಿ ಸೌಲಭ್ಯದ ಕೊರತೆಯಿದೆ ಮತ್ತು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ' ಎಂದು ಗ್ರಾಮಸ್ಥರೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. 'ನಾವು ಪ್ರವಾಸಿಗರ ವಿರೋಧಿಗಳಲ್ಲ. ಆದರೆ ಕೊಲ್ಲಂಗೋಡಿನ ಸೌಂದರ್ಯ ಸವಿಯಲು ಬರುವವರು ಜವಾಬ್ದಾರಿಯುತ ಪ್ರವಾಸಿಗರಂತೆ ವರ್ತಿಸಬೇಕು' ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Follow Us:
Download App:
  • android
  • ios