ಕೇಂದ್ರ ಸರ್ಕಾರವು 'ಸಿಮ್ ಬೈಂಡಿಂಗ್' ಎಂಬ ಹೊಸ ಭದ್ರತಾ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ, ನಿಮ್ಮ ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ನವದೆಹಲಿ (ಫೆ.26): "ಸಿಮ್ ಬೈಂಡಿಂಗ್" ನಿಯಮಗಳನ್ನು ಜಾರಿಗೆ ತರಲು ಫೆಬ್ರವರಿ 28 ರ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡೋದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಹೊಸ ನಿಯಮಗಳ ಅಡಿಯಲ್ಲಿ, ಮೊಬೈಲ್ ಫೋನ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ WhatsApp, Telegram, Signal, Snapchat, ShareChat, JioChat, Arattai ಮತ್ತು Josh ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ತಮ್ಮ ಕಂಪ್ಯೂಟರ್‌ಗಳಿಗೆ ಲಾಗಿನ್ ಆಗಿರುವ WhatsApp ಯೂಸರ್‌ಗಳನ್ನು ಕೂಡ ಆರು ಗಂಟೆಗಳ ಒಳಗೆ ಲಾಗ್ ಔಟ್ ಮಾಡಲಾಗುತ್ತದೆ. ಇದು ಸೈಬರ್ ವಂಚಕರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಹೊಸ ನಿಯಮವೇನು? ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಪ್ರಶ್ನೆ: ಏನಿದು ಸಿಮ್‌ ಬೈಂಡಿಂಗ್‌?

ಉತ್ತರ: ಸಿಮ್ ಬೈಂಡಿಂಗ್ ಅನ್ನೋದು ಭದ್ರತಾ ಕ್ರಮ. ಇದು ನಿಮ್ಮ ಮೆಸೇಜ್‌ ಕಳುಹಿಸುವ ಅಪ್ಲಿಕೇಶನ್ ಅನ್ನು ನಿಮ್ಮ ಸಿಮ್ ಕಾರ್ಡ್‌ಗೆ ಲಾಕ್ ಮಾಡುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಹ್ಯಾಕರ್‌ಗಳು ಅಥವಾ ವಂಚಕರು ನಿಮ್ಮ ಸಂಖ್ಯೆಯನ್ನು ಮತ್ತೊಂದು ಸಾಧನದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.

ಪ್ರಶ್ನೆ: ಸಿಮ್ ಬೈಂಡಿಂಗ್ ನಿಯಮ ಜಾರಿಗೆ ಬರೋದು ಯಾವಾಗ?

ಉತ್ತರ: ನೀವು ಸಿಮ್ ಬೈಂಡಿಂಗ್ ಮೂಲಕ ಅಪ್ಲಿಕೇಶನ್ ಅನ್ನು ಒಟ್ಟುಗೂಡಿಸಿದಾಗ, ನಿಮ್ಮ ನೋಂದಾಯಿತ ಸಿಮ್ ಕಾರ್ಡ್, ಫೋನ್ ಒಳಗೆ ಇದ್ದಾಗ ಮಾತ್ರ ಆ ಅಪ್ಲಿಕೇಶನ್ ತೆರೆಯುತ್ತದೆ. ಈ ನಿಯಮವು ಮಾರ್ಚ್ 1, 2026 ರಿಂದ ಜಾರಿಗೆ ಬರುತ್ತದೆ.

ಪ್ರಶ್ನೆ: ಸರ್ಕಾರ ಗಡುವನ್ನು ವಿಸ್ತರಿಸಲು ನಿರಾಕರಿಸಿದ್ದೇಕೆ?

ಉತ್ತರ: ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಸ್ತುತ ನಿಯಮಗಳನ್ನು ಪಾಲಿಸಲು ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ. ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಂಚನೆಯನ್ನು ತಡೆಗಟ್ಟಲು ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಮತ್ತು ಸರ್ಕಾರವು ಭದ್ರತಾ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳೋದಿಲ್ಲ ಎಂದಿದೆ.

ಪ್ರಶ್ನೆ: ಮಾರ್ಚ್ 1ರ ನಂತರ ಯೂಸರ್‌ಗಳು ಏನು ಮಾಡಬೇಕು?

ಉತ್ತರ: ಯೂಸರ್‌ಗಳು ತಮ್ಮ ವಾಟ್ಸಾಪ್ ಸಂಖ್ಯೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಅನ್ನು ಅದೇ ಫೋನ್‌ನಲ್ಲಿ ಸೇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಸಿಮ್ ಕಾರ್ಡ್ ತೆಗೆದುಹಾಕುವುದರಿಂದ ಮೆಸೇಜಿಂಗ್ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು.

ಪ್ರಶ್ನೆ: ಈ ಬಗ್ಗೆ ತಂತ್ರಜ್ಞಾನ ಕಂಪನಿಗಳ ನಿಲುವೇನು?

ಉತ್ತರ: ಆರು ಗಂಟೆಗಳ ಲಾಗ್ ಔಟ್ ನಿಯಮವು ಒಂದೇ ಖಾತೆಯನ್ನು ಹಂಚಿಕೊಳ್ಳುವ ವೃತ್ತಿಪರರು ಮತ್ತು ಯೂಸರ್‌ಗಳಿಗೆ ತೊಂದರೆಯಾಗುತ್ತದೆ ಎಂದು ಕೈಗಾರಿಕಾ ಸಂಘ (IAMAI) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಪ್ರಶ್ನೆ: ಕಂಪನಿಗಳು ನಿಯಮಗಳನ್ನು ಪಾಲಿಸದಿದ್ದರೆ ತೆಗೆದುಕೊಳ್ಳುವ ಕ್ರಮವೇನು?

ಉತ್ತರ: ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಕಂಪನಿಗಳು 120 ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕು. ಪಾಲಿಸಲು ವಿಫಲವಾದರೆ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮಗಳು ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.