Asianet Suvarna News Asianet Suvarna News

Bengaluru: ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

*  ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಗಳು ಹೆಚ್ಚು ಹೂಡಲಿ
*  ಬೆಂಗಳೂರು ಐಬಿಎಂ ಕಚೇರಿಗೆ ಕೇಂದ್ರ ಸಚಿವ
*  ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಐಬಿಎಂ ಇಡೀ ಜಗತ್ತಿಗೆ ಮಾದರಿಯಾದ ಕಂಪನಿ 
 

Great opportunity for India in IT sector Says Union Minister Rajeev Chandrasekhar grg
Author
Bengaluru, First Published Apr 12, 2022, 4:56 AM IST

ಬೆಂಗಳೂರು(ಏ.12):  ಜಗತ್ತು ಡಿಜಿಟಲೀಕರಣಗೊಳ್ಳುತ್ತಿದ್ದು(Digitization), ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಕಂಪನಿಗಳು ಮುಂದಾಗಬೇಕು ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದರು.

ನಗರದ ಐಬಿಎಂ(IBM) ಕಚೇರಿಗೆ ಭೇಟಿ ನೀಡಿದ ಅವರು, ಭಾರತವು(India) ಜಾಗತಿಕ ತಂತ್ರಜ್ಞಾನ ಮತ್ತು ವಾಣಿಜ್ಯ(Global Technology and Commerce) ಶಕ್ತಿಯಾಗಿ ಹೊರಹೊಮ್ಮುವ ಕಾಲ ಇದಾಗಿದ್ದು, ನವ ಭಾರತವು ಜಾಗತಿಕ ಗುಣಮಟ್ಟದ ಡಿಜಿಟಲ್‌ ಉತ್ಪನ್ನಗಳು ಮತ್ತು ಸೇವೆಗಳನ್ನು ಜಗತ್ತಿಗೆ ಒದಗಿಸಲಿದೆ. ಸೈಬರ್‌ ಭದ್ರತೆ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನಗಳಲ್ಲಿ ನವೋದ್ಯಮಗಳು ಉದಯೋನ್ಮುಖ ಹೊಸ ಕ್ಷೇತ್ರಗಳನ್ನು ಸೃಷ್ಟಿಸುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಿ ದೇಶದ ಯುವಕರಿಗೆ ಅವಕಾಶಗಳ ಉಜ್ವಲ ಭವಿಷ್ಯ ನೀಡುವುದು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ಮಹತ್ವದ ಗುರಿಯಾಗಿದೆ ಎಂದರು.

ಮುಂದಿನ 10 ವರ್ಷ Tech Decade: ಡಿಜಿಟಲ್‌ ಇಂಡಿಯಾಕ್ಕೆ 6 ಗುರಿ, 1000 ದಿನಗಳ ನಿಖರ ಯೋಜನೆ

ಬೆಂಗಳೂರಿನ(Bengaluru) ಐಬಿಎಂನ ಸೈಬರ್‌ ಸೆಕ್ಯೂರಿಟಿ ಹಬ್‌ ಮತ್ತು ಕ್ಲೈಂಟ್‌ ಇನೋವೇಶನ್‌ ಸೆಂಟರ್‌ ಉತ್ತಮವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಐಬಿಎಂ ಇಡೀ ಜಗತ್ತಿಗೆ ಮಾದರಿಯಾದ ಕಂಪನಿಯಾಗಿದೆ. ಆತ್ಮನಿರ್ಭರ ಯೋಜನೆ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಿಂದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ(Central  Government) ಆದ್ಯತೆ ನೀಡಿದೆ ಎಂದು ತಿಳಿಸಿದರು.

ಐಬಿಎಂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌ ಮಾತನಾಡಿ, ಐಬಿಎಂ ಸೈಬರ್‌ ಸೆಕ್ಯೂರಿಟಿ ಹಬ್‌ ಮತ್ತು ಕ್ಲೈಂಟ್‌ ಇನೋವೇಶನ್‌ ಸೆಂಟರ್‌(IBM Cyber Security Hub and Client Innovation Center) ತಂತ್ರಜ್ಞಾನದ ಸಾಧನೆಗಳನ್ನು ಪ್ರಪಂಚಕ್ಕೆ ಒದಗಿಸುತ್ತಿದ್ದೇವೆ. ಜಗತ್ತಿಗೆ ಭಾರತದ ಮೇಕ್‌ ಇನ್‌ ಇಂಡಿಯಾದ ಬಗ್ಗೆ ನಮಗಿರುವ ಬದ್ಧತೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ನ್ಯಾಯಾಂಗದ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಬದ್ಧ: ರಾಜೀವ್‌ ಚಂದ್ರಶೇಖರ್‌

ನ್ಯಾಯಾಂಗದ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಹಾಗೂ ಆಧುನಿಕ ತಂತ್ರಜ್ಞಾನ ನೆರವಿನೊಂದಿಗೆ ತ್ವರಿತ ನ್ಯಾಯದಾನ ಕಲ್ಪಿಸಲು ನ್ಯಾಯಾಂಗ ಕೈಗೊಳ್ಳುವ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಭರವಸೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಹೈಕೋರ್ಟ್‌(High Court) ವಕೀಲರ ಸಭಾಂಗಣದಲ್ಲಿ ನಡೆದ ‘ನ್ಯಾಯ ವಿತರಣೆಯಲ್ಲಿ ಅಧುನಿಕ ತಂತ್ರಜ್ಞಾನ’ ವಿಷಯ ಕುರಿತ ಸಂಕಿರಣದಲ್ಲಿ ‘ಇ-ಗ್ರೀವಿಯೆನ್ಸ್‌ ಪೋರ್ಟಲ್‌’(E-Grievance Portal0 ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳ ಕೋವಿಡ್‌ ಸಂಕಟದ ಸಮಯದಲ್ಲಿ ಭಾರತೀಯ ನ್ಯಾಯಾಂಗವು(Indian Judiciary) ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಂಡಿದೆ. ಹಾಗಾಗಿ, ನ್ಯಾಯಾಂಗದ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆಧುನಿಕ ತಂತ್ರಜ್ಞಾನ ನೆರವಿನೊಂದಿಗೆ ತ್ವರಿತ ನ್ಯಾಯದಾನಕ್ಕೆ ಅನುವಾಗುವಂತೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ತಿಳಿಸಿರು.

ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಇಂದು ಪ್ರಪಂಚದಲ್ಲೇ ಅಗ್ರಗಣ್ಯ ದೇಶವಾಗಿದೆ. ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ ತನ್ನ ಯೋಜನೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಫಲಾನುಭವಿಗಳಿಗೆ ತಲುಪಬೇಕಾದ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ನ್ಯಾಯಾಂಗದಲ್ಲಿ ತಂತ್ರಜ್ಞಾನದ ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಲು ಚಿಂತಿಸುವ ಅವಶ್ಯಕತೆಯಿದೆ. ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಬೃಹತ್‌ ಪ್ರಮಾಣದಲ್ಲಿದೆ. ಅವುಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನ ಬಳಕೆಯಾಗಬೇಕು. ಸುಪ್ರೀಂ ಕೋರ್ಚ್‌ ತೀರ್ಪುಗಳು, ತಿದ್ದುಪಡಿಗಳು ವಕೀಲರಿಗೆ ತಕ್ಷಣಕ್ಕೇ ಲಭ್ಯವಾಗಬೇಕು. ವಕೀಲರಿಗೆ ಗ್ರಂಥಾಲಯ ಸೌಲಭ್ಯ ದೊರೆಯುಂತೆ ಮಾಡಬೇಕು. ಈ ನಿಟ್ಟಿನಲ್ಲಿ ಯಾವುದೇ ಸೌಕರ್ಯಗಳನ್ನು ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಬಯಸಿದರೂ ಅದನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

Rajeev Chandrasekhar: ಮೊಬೈಲ್‌ನಿಂದಾಗಿ ಶೇ.37ರಷ್ಟು ಮಕ್ಕಳಿಗೆ ಏಕಾಗ್ರತೆ ಕೊರತೆ

ಹೈಕೋರ್ಚ್‌ ಹಿರಿಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮಾತನಾಡಿ, ರಾಜ್ಯದ ನ್ಯಾಯಾಲಯವು ಕೋವಿಡ್‌ ಅವಧಿಯಲ್ಲಿ ತಂತ್ರಜ್ಞಾನ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯದಾನ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ ಎಂದು ಶ್ಲಾಘಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಸಂಘದಿಂದ ಆಗಬೇಕಿರುವ ಕೆಲಸಗಳು, ಹಾಲಿಯಿರುವ ಸಮಸ್ಯೆಗಳ ಬಗ್ಗೆ ವಕೀಲರು ಇನ್ನು ಮುಂದೆ ‘ಇ-ಗ್ರೀವಿಯೆನ್ಸ್‌ ಪೋರ್ಟಲ್‌’ ಮುಖಾಂತರ ತಿಳಿಸಬಹುದು. ವಕೀಲರು ತಮ್ಮ ಕುಂದುಕೊರತೆ ಬಗ್ಗೆ ಸಂಘದ ಗಮನಕ್ಕೆ ತಂದಲ್ಲಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಅಡ್ವೊಕೇಟ್‌ ಜನರಲ್‌ ಪ್ರಭುಲಿಂ ಕೆ.ನಾವದಗಿ, ಬೆಂಗಳೂರು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios