ಬಿಎಸ್‌ಎನ್‌ಎಲ್, ನಷ್ಟ ತಗ್ಗಿಸುವ ಉದ್ದೇಶದಿಂದ ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ವಿಆರ್‌ಎಸ್ ಆರಂಭಿಸಿದೆ. ಸುಮಾರು 70 ಸಾವಿರದಿಂದ 80 ಸಾವಿರ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ನವದೆಹಲಿ (ನ.07): ತೀವ್ರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್), ನಷ್ಟ ತಗ್ಗಿಸುವ ಉದ್ದೇಶದಿಂದ ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಆರಂಭಿಸಿದೆ. ಸುಮಾರು 70 ಸಾವಿರದಿಂದ 80 ಸಾವಿರ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದ್ದು, ಇದರಿಂದ ವೇತನದ ಖರ್ಚಿನಲ್ಲಿ ಸುಮಾರು 7 ಸಾವಿರ ಕೋಟಿ ರು.ನಷ್ಟು ಕಂಪನಿಗೆ ಉಳಿತಾಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವೆಂಬರ್ 4 ರಿಂದಲೇ ವಿಆರ್‌ಎಸ್ ಯೋಜನೆಗೆ ಚಾಲನೆ ನೀಡಲಾಗಿದ್ದು, ಆಸಕ್ತ ನೌಕರರು ಡಿಸೆಂಬರ್ 3 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಎಸ್‌ಎನ್ ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರ್ವಾರ್ ಹೇಳಿದ್ದಾರೆ. 

50 ವರ್ಷ ವಯಸ್ಸು ದಾಟಿದ ನೌಕರರು ವಿಆರ್‌ಎಸ್‌ಗೆ ಅರ್ಹರು ಎಂದು ‘ಬಿಎಸ್ ಎನ್‌ಎಲ್ ವಿಆರ್‌ಎಸ್ ಯೋಜನೆ-2019’ ಹೇಳುತ್ತದೆ. ಬಿಎಸ್‌ಎನ್‌ಎಲ್ 1.50 ಲಕ್ಷ ನೌಕರರನ್ನು ಹೊಂದಿದ್ದು ಸ್ವಯಂ ನಿವೃತ್ತರಾಗಲು 1 ಲಕ್ಷ ನೌಕರರು ಅರ್ಹರಾಗಿದ್ದಾರೆ.

20 ಸಾವಿರ ಕೋಟಿ ಕೊಡದ ಬಿಎಸ್ಸೆನ್ನೆಲ್‌ಗೆ ‘ದಿವಾಳಿ’ ಸಂಕಷ್ಟ...

ಏನಿದು? :ವಿಆರ್‌ಎಸ್ ಪಡೆದವರಿಗೆ ಈವರೆಗೆ ಸೇವೆ ಸಲ್ಲಿಸಿದ ಪ್ರತಿ ವರ್ಷದ 35 ದಿನದ ವೇತನ ಹಾಗೂ ಇನ್ನೂ ಬಾಕಿ ಇರುವ ಪ್ರತಿ ಸೇವಾ ವರ್ಷದ 25 ದಿನದ ವೇತನವನ್ನು ಪರಿಹಾರವಾಗಿ ನೀಡಲಾಗುತ್ತದೆ. ಎಂಟಿಎನ್‌ಎಲ್‌ನಿಂದಲೂ: ಇನ್ನು ಮುಂಬೈ ಹಾಗೂ ದಿಲ್ಲಿಯಲ್ಲಿರುವ ಬಿಎಸ್ಸೆನ್ನೆಲ್‌ನ ಸೋದರ ಸಂಸ್ಥೆ ಮಹಾನಗರ ಸಂಚಾರ ನಿಗಮ ನಿಯಮಿತ (ಎಂಟಿಎನ್‌ಎಲ್) ಡಿ. 3 ರವರೆಗೆ ತನ್ನ ನೌಕರರಿಗೆ ವಿಆರ್‌ಎಸ್ ಯೋಜನೆ ಜಾರಿಗೊಳಿಸಿದೆ. 

ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್‌ಗಳನ್ನು ವಿಲೀನ ಮಾಆಡಿ ಈ ಕಂಪನಿಗಳ ಪುನಶ್ಚೇತನಕ್ಕೆ ಕಳೆದ ತಿಂಗಳು ಕೇಂದ್ರ ಸರ್ಕಾರ 69 ಸಾವಿರ ಕೋಟಿ ರು. ಪ್ಯಾಕೇಜ್ ಪ್ರಕಟಿಸಿತ್ತು ಹಾಗೂ ವಿಆರ್‌ಎಸ್ ಯೋಜನೆ ಜಾರಿಗೆ ನಿರ್ಧರಿಸಿತ್ತು.