ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ, ಸಿರಾಜ್ ದಾವಣಗೆರೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಆಡಿಯೋ ನಕಲಿಯಾಗಿದ್ದು, ತಮ್ಮ ತೇಜೋವಧೆ ಮಾಡಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

ದಾವಣಗೆರೆ (ಜೂ.01): ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಪ್ರಕರಣ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಸುಳ್ಳು ಆಡಿಯೋ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಸಿರಾಜ್ ಅವರು ದಾವಣಗೆರೆಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೇಜೋವಧೆಯ ಹುನ್ನಾರ:

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್, "ನಾನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ನಾಮನಿರ್ದೇಶಿತ ಸದಸ್ಯನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ, ರಾಜಕೀಯ ದುರುದ್ದೇಶದಿಂದ ನಮ್ಮನ್ನು ಗುರಿಯಾಗಿಸಿಕೊಂಡು ಈ ನಕಲಿ ಆಡಿಯೋ ಸೃಷ್ಟಿಸಲಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಧ್ವನಿ ಸೃಷ್ಟಿ ಆರೋಪ:

ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ತನ್ನದಲ್ಲ ಎಂದು ಸ್ಪಷ್ಟಪಡಿಸಿದ ಸಿರಾಜ್, "ನನ್ನ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ನಡುವಿನ ಬಾಂಧವ್ಯವನ್ನು ಹಾಳು ಮಾಡಲು ಮತ್ತು ಸಾರ್ವಜನಿಕವಾಗಿ ನಮ್ಮ ಗೌರವಕ್ಕೆ ಧಕ್ಕೆ ತರಲು ಯಾರೋ ಕಿಡಿಗೇಡಿಗಳು ತಂತ್ರಜ್ಞಾನ ಬಳಸಿ ಸುಳ್ಳು ಧ್ವನಿಯನ್ನು ಸೃಷ್ಟಿಸಿದ್ದಾರೆ. ದೂರವಾಣಿ ಮೂಲಕ ಚರ್ಚಿಸಿದಂತೆ ಬಿಂಬಿಸಲಾಗಿರುವ ಈ ಆಡಿಯೋ ಸಂಪೂರ್ಣ ಸೃಷ್ಟಿತವಾದದ್ದು," ಎಂದು ತಿಳಿಸಿದರು.

ಕಠಿಣ ಕ್ರಮಕ್ಕೆ ಆಗ್ರಹ:

ರಾಜಕೀಯ ಲಾಭಕ್ಕಾಗಿ ಇಂತಹ ನೀಚ ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಿರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಈಗಾಗಲೇ ಇದನ್ನು ಎಐ (AI) ಸೃಷ್ಟಿತ ನಕಲಿ ಆಡಿಯೋ ಎಂದು ಹೇಳಿದ್ದು, ಈಗ ಸಿರಾಜ್ ಕೂಡ ಅಧಿಕೃತವಾಗಿ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ದಾವಣಗೆರೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದ ಅಸಲಿಯತ್ತು ತಿಳಿಯಲು ತನಿಖೆ ಆರಂಭಿಸಿದ್ದಾರೆ.