ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋವೊಂದು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇದು ಎಐ ತಂತ್ರಜ್ಞಾನದಿಂದ ಸೃಷ್ಟಿಯಾದ ನಕಲಿ ಆಡಿಯೋ ಎಂದು ಜಮೀರ್ ಸ್ಪಷ್ಟನೆ ನೀಡಿದರೆ, ದಾವಣಗೆರೆ ಶಾಸಕ ಸಮರ್ಥ ಶಾಮನೂರು ಹೈಕಮಾಂಡ್ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರು/ದಾವಣಗೆರೆ (ಜೂ.01): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸಿಡಿದಿದೆ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಒಳಗಿನ ಭಿನ್ನಮತವನ್ನು ಬೀದಿಗೆ ತಂದಿದೆ. ಈ ಆಡಿಯೋ ವಿಚಾರವಾಗಿ ದಾವಣಗೆರೆಯ ನೂತನ ಶಾಸಕ ಸಮರ್ಥ ಶಾಮನೂರು ಅವರು ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹೈಕಮಾಂಡ್ ತನಿಖೆಗೆ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಆಡಿಯೋ ವಿವಾದ?

ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟ್ಟರ್) ನಲ್ಲಿ ಸುಮಾರು 3 ನಿಮಿಷ 51 ಸೆಕೆಂಡ್ ಅವಧಿಯ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಇದರಲ್ಲಿ ಜಮೀರ್ ಅಹಮದ್ ಅವರು ತಮ್ಮ ಆಪ್ತ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ, 'ಬಹಳಷ್ಟು ವಾರ್ಡ್‌ಗಳಲ್ಲಿ ಎಸ್‌ಡಿಪಿಐ (ಕುಕ್ಕರ್ ಗುರುತು) ಹವಾ ಇದೆ. ಒತ್ತಾಯಪೂರ್ವಕವಾಗಿ ಯಾರಿಗೂ ಕಾಂಗ್ರೆಸ್‌ಗೆ ವೋಟ್ ಹಾಕಲು ಕರೆಯಬೇಡಿ. ಸಾದಿಕ್ ಪೈಲ್ವಾನ್ ವಾರ್ಡ್‌ನಲ್ಲಿ ಕಾಂಗ್ರೆಸ್‌ಗೆ ಮೈನಸ್ ಆಗಬೇಕು. ಮನೆಯಿಂದ ಹೊರಬಂದವರಿಗೆ ಎಸ್‌ಡಿಪಿಐ ಅಥವಾ ಪಕ್ಷೇತರರಿಗೆ ಮತ ಹಾಕುವಂತೆ ಹೇಳಿ' ಎಂಬ ಅಂಶಗಳಿವೆ. ಇದು ಸ್ವಪಕ್ಷದ ಅಭ್ಯರ್ಥಿಗಳಿಗೇ ಹಿನ್ನಡೆ ಉಂಟುಮಾಡುವ ಷಡ್ಯಂತ್ರ ಎಂಬ ಆರೋಪಕ್ಕೆ ಕಾರಣವಾಗಿದೆ.

ಇದು ಎಐ ಸೃಷ್ಟಿಸಿದ ನಕಲಿ ಆಡಿಯೋ: ಜಮೀರ್ ಸ್ಪಷ್ಟನೆ

ಈ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜಮೀರ್ ಅಹಮದ್ ಖಾನ್, 'ವೈರಲ್ ಆಗಿರುವ ಆಡಿಯೋ ಸಂಪೂರ್ಣ ನಕಲಿ. ಇತ್ತೀಚಿನ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಕಿಡಿಗೇಡಿಗಳು ನನ್ನ ಧ್ವನಿಯನ್ನು ಅನುಕರಿಸಿ ಈ ರೀತಿ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಗೊಂದಲ ಸೃಷ್ಟಿಸಲು ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ಸೈಬರ್ ಠಾಣೆಗೆ ದೂರು ನೀಡುತ್ತೇನೆ. ಯಾವ ತನಿಖೆಗಾದರೂ ನಾನು ಸಿದ್ಧ' ಎಂದು ಸವಾಲು ಹಾಕಿದ್ದಾರೆ.

ಸತ್ಯ ಹೇಗೆ ಷಡ್ಯಂತ್ರವಾಗುತ್ತದೆ? ಸಮರ್ಥ ಶಾಮನೂರು ಪ್ರಶ್ನೆ

ಜಮೀರ್ ಅಹಮದ್ ಅವರ 'ನಕಲಿ ಆಡಿಯೋ' ಹೇಳಿಕೆಗೆ ದಾವಣಗೆರೆಯಲ್ಲಿ ಶಾಸಕ ಸಮರ್ಥ ಶಾಮನೂರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಚುನಾವಣೆ ಸಮಯದಲ್ಲಿ ಇದೆಲ್ಲವೂ 'ಓಪನ್ ಸೀಕ್ರೆಟ್' ಆಗಿತ್ತು. ಸತ್ಯ ಸಂಗತಿಗಳು ಹೊರಬಂದಾಗ ಅದನ್ನು ಷಡ್ಯಂತ್ರ ಎನ್ನುವುದು ಸರಿಯಲ್ಲ. ಪ್ರತಿ ಚುನಾವಣೆಯಲ್ಲಿ ಎ ಟೀಂ, ಬಿ ಟೀಂ ಎಂಬುದು ಇರುತ್ತದೆ. ಆದರೆ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಾಗೂ ಕಾಂಗ್ರೆಸ್‌ಗೆ ವಿರುದ್ಧವಾಗಿ ಮಾತನಾಡಿರುವುದು ಸ್ಪಷ್ಟವಾಗಿದೆ. ಇವರು ಷಡ್ಯಂತ್ರದಿಂದಲೇ ಗೆಲ್ಲಲು ಸಾಧ್ಯ' ಎಂದು ಕಿಡಿ ಕಾರಿದ್ದಾರೆ.

ಫಾರೆನ್ಸಿಕ್ ಲ್ಯಾಬ್‌ಗೆ (FSL) ಕಳುಹಿಸಿ ತನಿಖೆ ಮಾಡಲಿ

ಮುಂದುವರಿದು ಮಾತನಾಡಿದ ಅವರು, 'ನಾನು ರಾಜಕೀಯಕ್ಕೆ ಹೊಸಬನಿರಬಹುದು, ಆರಂಭದಲ್ಲೇ ಈ ರೀತಿ ಬೆನ್ನಿಗೆ ಇರಿಯುವ ಕೆಲಸ ಮಾಡಿದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಎಸ್‌ಡಿಪಿಐ ಮತ್ತು ಪಕ್ಷೇತರರನ್ನು ಜಮೀರ್ ಒಗ್ಗೂಡಿಸಿದ್ದಾರಾ? ಎಲ್ಲರೂ ಒಗ್ಗೂಡಿ ಬರಬೇಕಿತ್ತಲ್ಲವೇ? ಈ ಆಡಿಯೋವನ್ನು ಫಾರೆನ್ಸಿಕ್ ಲ್ಯಾಬ್‌ಗೆ (FSL) ಕಳುಹಿಸಿ ತನಿಖೆ ಮಾಡಲಿ. ಹೈಕಮಾಂಡ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಏನೇ ಷಡ್ಯಂತ್ರ ಮಾಡಿದರೂ ನನ್ನನ್ನು ತಾಯಿ ದುಗ್ಗಮ್ಮನೇ ಕಾಪಾಡಿದಳು' ಎಂದು ಭಾವುಕರಾಗಿ ನುಡಿದರು.