Asianet Suvarna News Asianet Suvarna News

ವಿಜಯಪುರ ಜಿಲ್ಲೆಯೇ 6 ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಸೂಕ್ತ: ಉನ್ನತ ಸಮಿತಿ ವರದಿ

ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ಆರು ಕೈಗಾರಿಕಾ ವಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅತ್ಯುತ್ತಮ ಅವಕಾಶಗಳಿವೆ ಎಂದು ಉನ್ನತ ಮಟ್ಟದ ಸಮಿತಿಯೊಂದು ಹೇಳಿದೆ.

Vijayapur district is suitable for development of 6 industrial zones High level committee report sat
Author
First Published Nov 9, 2023, 5:57 PM IST

ಬೆಂಗಳೂರು (ನ.09): ವಿಜಯಪುರ ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮಶಿನರಿ ಮತ್ತು ಎಕ್ವಿಪ್ಮೆಂಟ್, ನಾನ್-ಮೆಟಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸ್ಯುಟಿಕಲ್ಸ್, ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು ಮತ್ತು ವಿಶೇಷ ಅಲಾಯ್ ಹಾಗೂ ಲೋಹೋತ್ಪನ್ನಗಳ ತಯಾರಿಕೆ ಹೀಗೆ ಒಟ್ಟು ಆರು ಕೈಗಾರಿಕಾ ವಲಯಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಅತ್ಯುತ್ತಮ ಅವಕಾಶಗಳಿವೆ ಎಂದು ಉನ್ನತ ಮಟ್ಟದ ಸಮಿತಿಯೊಂದು ಹೇಳಿದೆ.

ಈ ಸಂಬಂಧದ ಪ್ರಾಥಮಿಕ ವರದಿಯನ್ನು ಗುರುವಾರ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಸಲ್ಲಿಸಿದೆ. ಏಕಸ್ ಎಸ್ಇಜೆಡ್ ಮತ್ತು ದೆಹಲಿಯ ಸಿಬಿಆರ್ ಇ ಸಂಸ್ಥೆಯ ಪ್ರತಿನಿಧಿಗಳು ಈ ವರದಿಯನ್ನು ಸಿದ್ಧಪಡಿಸಿದ್ದಾರೆ. ವರದಿ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು, `ನಮ್ಮಲ್ಲಿ ಎಲ್ಲ ಉದ್ಯಮಗಳೂ ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡಿವೆ. ಆದರೆ ಬಿಯಾಂಡ್ ಬೆಂಗಳೂರು ಉಪಕ್ರಮದಡಿ ರಾಜಧಾನಿಯ ಆಚೆಗೂ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಹೇರಳ ಅವಕಾಶಗಳಿವೆ. ವಿಜಯಪುರ ಜಿಲ್ಲೆಯಲ್ಲಂತೂ ನೀರು, ವಿದ್ಯುತ್ ಮತ್ತು ಜಮೀನಿನ ಲಭ್ಯತೆಗೆ ಸಮಸ್ಯೆ ಇಲ್ಲ. ಇದರ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಯ ಗುರಿಯೂ ಇದೆ ಎಂದರು.

ಕಾಂತರಾಜ್ ವರದಿ ಜಾತಿ ಜನಗಣತಿಯೇ ಅಲ್ಲ: ರಾಜಕಾರಣದಲ್ಲಿ ಭರ್ಜರಿ ಟ್ವಿಸ್ಟ್ ಕೊಟ್ಟ ಸಚಿವ ಶಿವರಾಜ್‌ ತಂಗಡಗಿ

ವರದಿಯಲ್ಲಿ ಗುರುತಿಸಿರುವ 6 ವಲಯಗಳಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳನ್ನೂ ಹೇಳಲಾಗಿದೆ. ಇವರನ್ನೆಲ್ಲ ಕರೆಸಿ, ಮುಂದಿನ ಹೆಜ್ಜೆಗಳನ್ನು ಇಡಲಾಗುವುದು. ಒಟ್ಟಿನಲ್ಲಿ ವಿಜಯಪುರವನ್ನು ರಾಜ್ಯದ ಪ್ರಮುಖ ಕೈಗಾರಿಕಾ ತಾಣವನ್ನಾಗಿ ಮಾಡಲಾಗುವುದು. ಈ ಅಧ್ಯಯನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸಿರು ನಿಶಾನೆ ತೋರಿಸಿದ್ದರು. ಈ ಕಂಪನಿಗಳು ಉತ್ತಮ ರಸ್ತೆ, ನೀರು, ವಿದ್ಯುತ್, ಕೌಶಲ ಕೇಂದ್ರಗಳು, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಬಂದರುಗಳ ಲಭ್ಯತೆ ಮುಂತಾದ ಮೂಲಸೌಕರ್ಯಗಳನ್ನು ನಮ್ಮಿಂದ ಕೋರಿವೆ. ಇವುಗಳನ್ನು ಒದಗಿಸಲು ಸರಕಾರವು ತ್ವರಿತ ಗತಿಯಲ್ಲಿ ಕೆಲಸ ಮಾಡಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಂಡವಾಳ ಹರಿವು ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳ ಸಾಧ್ಯವಾಗಲಿದೆ ಎಂದು ಪಾಟೀಲ ಹೇಳಿದರು.

ಇಂಧನ ಕ್ಷೇತ್ರದ ಸಾಧನ-ಸಲಕರಣೆಗಳ ತಯಾರಿಕೆಯಲ್ಲಿ ವಿಕ್ರಂ ಸೋಲಾರ್, ವೋಲ್ಟಾಸ್, ಶ್ನೀಡರ್ ಎಲೆಕ್ಟ್ರಿಕ್, ಸಾಲಾಸರ್ ಟೆಕ್ನೋ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಗಳನ್ನು ಗುರುತಿಸಲಾಗಿದೆ. ಹಾಗೆಯೇ ಲೋಹೋತ್ಪನ್ನಗಳ ವಲಯದಲ್ಲಿ ಟಾಟಾ ಸ್ಟೀಲ್, ಜಿಂದಾಲ್, ಮಶಿನರಿಯಲ್ಲಿ ಎಬಿಬಿ, ಮುಕುಂದ್ ಬಜಾಜ್ ಮತ್ತು ಸೀಮನ್ಸ್, ನ್ಯೂಟ್ರಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಇಮಾಮಿ, ಹಿಮಾಲಯ ವೆಲ್ನೆಸ್, ನೋವಸ್ ಲೈಫ್ ಸೈನ್ಸಸ್ ಮತ್ತು ಝೋಯಿಕ್ ಫಾರ್ಮಸುಟಿಕಲ್ಸ್ ಕಂಪನಿಗಳನ್ನು ಪರಿಗಣಿಸಲಾಗಿದೆ ಎಂದು ನುಡಿದರು.

ಬೆಂಗಳೂರು ಸುರಂಗ ರಸ್ತೆ ನಿರ್ಮಿಸದಂತೆ ಸಂಸದ ತೇಜಸ್ವಿ ಸೂರ್ಯ ಮನವಿ: ಡಿಕೆಶಿ ಕನಸಿನ ಯೋಜನೆಗೆ ಕೊಳ್ಳಿ!

ಈ ಸಂದರ್ಭದಲ್ಲಿ ಏಕಸ್ ಇನ್ಫ್ರಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಎಸ್ ಅಣ್ಣಪ್ಪ, ಸಿಬಿಆರ್.ಇ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಸೌರವ್ ಹಾಜ್ರಾ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಇದ್ದರು. ಇನ್ನು ನೂತನ ಸರಕಾರದಲ್ಲಿ ಕೈಗಾರಿಕಾ ಇಲಾಖೆಯ ಸಚಿವ ಹುದ್ದೆ ಸ್ವೀಕರಿಸಿದ ಕೆಲದಿನಗಳಲ್ಲೇ ತಮ್ಮ ತವರು ಜಿಲ್ಲೆಯನ್ನು ಕೈಗಾರಿಕಾ ದೃಷ್ಟಿಯಿಂದಲೂ ಮುಂಚೂಣಿಗೆ ತರುವ ಉದ್ದೇಶದಿಂದ ಸಿಬಿಆರ್ ಇ ಸಂಸ್ಥೆಗೆ ವರದಿ ನೀಡುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios