ಹುಬ್ಬಳ್ಳಿ ಧಾರವಾಡ ಮಧ್ಯೆ ಜೂನ್ 19ರಿಂದ  ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಅಂದರೆ ನಾಳೆಯಿಂದ ನೈರುತ್ಯ ರೈಲ್ವೆಯಿಂದ  8 ಬೋಗಿಗಳನ್ನು ಹೊಂದಿರುವ  ಸೆಮಿ ಹೈ ಸ್ಪಿಡ್‌ ರೈಲು ಟ್ರಯಲ್  ರನ್ ನಡೆಯಲಿದೆ.

ಹುಬ್ಬಳ್ಳಿ (ಜೂ.18): ಹುಬ್ಬಳ್ಳಿ ಧಾರವಾಡ ಮಧ್ಯೆ ಜೂನ್ 19ರಿಂದ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಅಂದರೆ ನಾಳೆಯಿಂದ ನೈರುತ್ಯ ರೈಲ್ವೆಯಿಂದ ಟ್ರಯಲ್ ರನ್ ನಡೆಯಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಸಂಚಾರಕ್ಕೆ ಜೂ. 26ರಂದು ಚಾಲನೆ ದೊರೆಯಲಿದೆ. ಇದಕ್ಕಾಗಿ ನೈರುತ್ಯ ರೈಲ್ವೆ ವಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ. 8 ಬೋಗಿಗಳನ್ನು ಹೊಂದಿರುವ ಇದು ಸೆಮಿ ಹೈ ಸ್ಪಿಡ್‌ ರೈಲು!

ಜೂನ್ 19ರಿಂದ ಒಟ್ಟು 1 ವಾರಗಳ ಕಾಲ ಟ್ರಯಲ್ ರನ್ ನಡೆಯಲಿದೆ. ಜೂನ್ 26 ಕ್ಕೆ ಅಧಿಕೃತ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ನಾಳೆ ಎಂಟು ಭೋಗಿಗಳ ವಂದೇ ಭಾರತ್ ರೈಲಿಗೆ ಚಾಲನೆ ಸಿಗಲಿದ್ದು, ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 5:45 ಕ್ಕೆ ಬೆಂಗಳೂರಿನಿಂದ ಹೊರಟು- ಮದ್ಯಾಹ್ನ 12:40ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮದ್ಯಾಹ್ನ1:15 ಹೊರಟು ರಾತ್ರಿ 8:10 ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈರುತ್ಯ ರೈಲ್ವೆ ಪಿಆರ್ ಓ ಅನಿಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.31ರವರೆಗೆ ಕೊಂಕಣ ರೈಲು ಮಾರ್ಗದಲ್ಲಿನ ಎಲ್ಲಾ ರೈಲಿನ ವೇಳಾಪಟ್ಟಿ ಬದಲಾವಣೆ, ಯಾವೆಲ್ಲ ಜಿಲ್ಲೆಯಲ್ಲಿದೆ ಕೊಂಕಣ ರೈಲು

ಈ ರೈಲು ಈಗಾಗಲೇ ಬೆಂಗಳೂರು ತಲುಪಿದ್ದು, ಈ ವರೆಗೆ ಬೆಂಗಳೂರಿಂದ ಅರಸಿಕೇರಿವರೆಗೆ ಪ್ರಾಯೋಗಿಕ ಸಂಚಾರ ಕೂಡ ನಡೆಸಲಾಗಿದೆ. ಅರಸಿಕೇರಿಯಿಂದ ಧಾರವಾಡವರೆಗೂ ಪ್ರಾಯೋಗಿಕ ಸಂಚಾರ ನಡೆಸುವುದಷ್ಟೇ ಬಾಕಿ. ಇದು ಪೂರ್ಣಗೊಂಡ ಬಳಿಕ ರೈಲಿನ ಟಿಕೆಟ್‌ ದರ, ಸರಿಯಾದ ಸಮಯ ನಿಗದಿ ಮಾಡಲಾಗುವುದು. ಅದಕ್ಕೆ ಇನ್ನೆರಡು ದಿನ ಬೇಕಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ವೇಳಾಪಟ್ಟಿಅಂತಿಮವಾಗಲಿದೆ. ಬೆಂಗಳೂರು, ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ. ಧಾರವಾಡ ಬೆಂಗಳೂರು ಮಧ್ಯೆ ಪ್ರಯಾಣಕ್ಕೆ ಎಲ್ಲ ರೈಲುಗಳಲ್ಲಿ ಕನಿಷ್ಠವೆಂದರೆ 9 ಗಂಟೆ ಬೇಕಾಗುತ್ತದೆ. ಆದರೆ, ವಂದೇ ಭಾರತ್‌ ರೈಲಿನ ಸಂಚಾರದಿಂದ ಕನಿಷ್ಠವೆಂದರೂ 2ರಿಂದ 2.30 ಗಂಟೆಯ ಸಮಯ ಉಳಿತಾಯವಾಗುವುದು ಗ್ಯಾರಂಟಿ ಎಂದು ಹೇಳಲಾಗಿದೆ.

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್

ಸೆಮಿ ಹೈಸ್ಪೀಡ್‌ ರೈಲು:
ಗಂಟೆಗೆ 160 ಕಿಲೋ ಮೀಟರ್‌ ಸ್ಪೀಡ್‌ ಸಂಚರಿಸುವ ಈ ರೈಲು ‘ಸೆಮಿ ಹೈಸ್ಪೀಡ್‌’ ರೈಲೆಂದು ಗುರುತಿಸಿಕೊಳ್ಳುತ್ತದೆ. ಈ ವರೆಗೆ ದೇಶದಲ್ಲಿ ಚಾಲನೆ ಸಿಕ್ಕಿರುವ 19 ವಂದೇ ಭಾರತ್‌ ರೈಲುಗಳು 16 ಬೋಗಿಗಳನ್ನು ಹೊಂದಿವೆ. ಆದರೆ, ಧಾರವಾಡ - ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್‌ ರೈಲು ಎಂಟು ಬೋಗಿಗಳನ್ನು ಮಾತ್ರ ಹೊಂದಲಿದೆ. ಇತ್ತೀಚೆಗಷ್ಟೇ ಇಲ್ಲಿನ ಕಾಮಗಾರಿ ಮುಗಿದಿರುವುದರಿಂದ ಬರೀ 8 ಬೋಗಿಗಳನ್ನು ಮಾತ್ರ ಹೊಂದಿದೆ. ತದನಂತರ ದಿನಕಳೆದಂತೆ ಪ್ರಯಾಣಿಕರ ಸಂಖ್ಯೆ ಹಾಗೂ ಸಾಮರ್ಥ ನೋಡಿಕೊಂಡು ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.

ವಂದೇ ಭಾರತ್‌ ಎಕ್ಸಪ್ರೆಸ್‌ ಗಂಟೆಗೆ 160 ಕಿಮೀ ರೋಮಾಂಚಕ ಉನ್ನತ ವೇಗವನ್ನು ಹೊಂದಿದ್ದರೂ, ಧಾರವಾಡ- ಬೆಂಗಳೂರು ಮಾರ್ಗದಲ್ಲಿ ಅದರ ನಿರೀಕ್ಷಿತ ಸರಾಸರಿ ವೇಗ ಗಂಟೆಗೆ 70.54 ಕಿಮೀ ವೇಗದಲ್ಲಿ ಮಾತ್ರ ಓಡಲಿದೆ. ಗರಿಷ್ಠ ಎಂದರೆ ಪ್ರತಿಗಂಟೆಗೆ 110 ಕಿಮೀ ಸಂಚರಿಸಬಹುದು. ಏಕೆಂದರೆ ಈ ಮಾರ್ಗದಲ್ಲಿನ ತಿರುವುಗಳಿಂದ 160 ಕಿಮೀ ಸಂಚರಿಸುವುದು ಅಸಾಧ್ಯದ ಮಾತು ಎಂದು ಹೇಳಲಾಗುತ್ತದೆ.

ಆಸನವೆಷ್ಟು?:
ಎಂಟು ಕೋಚ್‌ಗಳಲ್ಲಿ ಒಟ್ಟು 530 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಐದು ಚೇರ್‌ ಕಾರ್‌ಗಳಲ್ಲಿ 3+2 ಮಾದರಿಯಲ್ಲಿ 390 ಆಸನ, ಎಕ್ಸಿಕ್ಯೂಟಿವ್‌ ಕ್ಲಾಸ್‌ ಕೋಚ್‌ 2+2 ಮಾದರಿಯಲ್ಲಿ 52 ಆಸನ ಮತ್ತು ಹೆಚ್ಚುವರಿ 88 ಆಸನಗಳ ವ್ಯವಸ್ಥೆ ಎಂಟು ಬೋಗಿಗಳು ಹೊಂದಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಾರದಲ್ಲಿ ಆರುದಿನ ಸಂಚಾರ:
ರೈಲು ವಾರದಲ್ಲಿ ಆರು ದಿನಗಳ ವರೆಗೆ ಮಾತ್ರ ಈ ರೈಲು ಓಡಾಡಲಿದೆ. ಒಂದು ದಿನ ರೈಲಿನ ನಿರ್ವಹಣೆ ನಡೆಯಲಿದೆ. ಅದನ್ನು ಬೈಯಪ್ಪನಹಳ್ಳಿ ರೈಲ್ವೆ ವರ್ಕಶಾಪನಲ್ಲಿ ನಿರ್ವಹಣಾ ಕಾರ್ಯ ನಡೆಯಲಿದೆ.