ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 10 ದಿನದ ಬದಲಾಗಿ 11 ದಿನ ಆಚರಿಸಲಾಗುತ್ತದೆ ಎಂಬ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಈ ಬಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರು (ಜೂ.22): ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 10 ದಿನದ ಬದಲಾಗಿ 11 ದಿನ ಆಚರಿಸಲಾಗುತ್ತದೆ ಎಂಬ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಈ ಬಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. 11 ದಿನ ದಸರಾ ಆಚರಣೆ ಇದೇ ಮೊದಲಲ್ಲ. ಈ ಹಿಂದೆಯೂ 11 ದಿನ ದಸರಾ ಆಚರಣೆ ಮಾಡಿದ್ದೇವೆ. 1920, 1929, 1953, 1963, 1980, 1990, 1998, 2000, 2015, 2016ರಲ್ಲಿ ಕೂಡ 11 ದಿನ ದಸರಾ ಆಚರಣೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೂರ್ಯ ಮತ್ತು ಚಂದ್ರನ ಚಲನೆಯನ್ನು ಆಧರಿಸಿ ದಿನಗಳನ್ನು ನಿಗದಿ ಪಡಿಸಲಾಗಿರುತ್ತದೆ. ಅಂತೆಯೇ ಲೂನಾರ್ ಕ್ಯಾಲೆಂಡರ್ ಮೂಲ ಪಂಚಾಂಗವನ್ನು ಮೈಸೂರು ಅರಮನೆ ಪಾಲಿಸುತ್ತದೆ. ಹಾಗಾಗಿ ದಸರಾ ಆಚರಣೆಗೆ ಯಾವುದೇ ಅಡಚಣೆ ಏನು ಇಲ್ಲ. ಪಂಚಾಂಗ ಹಾಗೂ ಲೂನಾರ್ ಕ್ಯಾಲೆಂಡರ್ ಆಧರಿಸಿ ದಸರಾ ಆಚರಣೆ ಎಂದಿನಂತೆ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
4500 ಎಕರೆ ಖಾತೆ ಬಗ್ಗೆ ರೈತರಿಗೆ ಆತಂಕ ಬೇಡ: ಚಾಮರಾಜನಗರ ತಾಲೂಕಿನ ಕೆಲ ಗ್ರಾಮಗಳಲ್ಲಿನ ಭೂಮಿಯನ್ನು ಖಾತೆ ಮಾಡಿಕೊಡುವ ವಿಷಯದಲ್ಲಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ 2014ರಲ್ಲೇ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೆ, ಜಿಲ್ಲಾಧಿಕಾರಿಗೆ ಆ ಬಗ್ಗೆ ಮಾಹಿತಿ ಇಲ್ಲದಿರಬಹುದು ಎಂದರು.
1951ರಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ಅವರ ಸಹಿ ಇರುವ ನಮ್ಮ ಆಸ್ತಿ ಪಟ್ಟಿಯಲ್ಲಿ 4,500 ಎಕರೆಯೂ ಇದೆ. ಆ ಜಮೀನು ಅರಮನೆ ಹೆಸರಿಗೆ ಬಂದರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ. ನಾವು ಮತ್ತು ಗ್ರಾಮಸ್ಥರು ಕುಳಿತು ಅದನ್ನು ಅವರಿಗೆ ಬಿಟ್ಟು ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು. ಮಹಾರಾಜರು ಆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರೆ ನಾವು ಖಂಡಿತವಾಗಿಯೂ ಅವರನ್ನು ಒಕ್ಕಲೆಬ್ಬಿಸುವುದಿಲ್ಲ. ಗ್ರಾಮಸ್ಥರು ತಮ್ಮ ಬಳಿ ಇರುವ ಉಡುಗೊರೆಯ ದಾಖಲಾತಿಯನ್ನು ಅರಮನೆ ಕಚೇರಿಗೆ ತಲುಪಿಸಲಿ.
ಈ ವಿಷಯ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಅವರೊಡನೆ ಮಾತನಾಡಲು ಪ್ರಯತ್ನ ಪಟ್ಟೆ. ದೂರವಾಣಿ ಕರೆ ಮಾಡಿದ್ದೆ, ಸ್ವೀಕರಿಸಿಲ್ಲ. ಮೇಸೇಜ್ ಕೂಡ ಮಾಡಿದ್ದೆ. ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು. ಗ್ರಾಮಸ್ಥರು ಯಾವುದೇ ಸಂದರ್ಭದಲ್ಲಿ ಆದರೂ ಅರಮನೆ ಕಚೇರಿಗೆ ಗಿಫ್ಟ್ ಕೊಟ್ಟಿರುವ ದಾಖಲೆ ಇದ್ದರೆ ಖಂಡಿತ ಕೊಡಿ. ಯಾರ ಬಳಿಯಾದರೂ ಉಡುಗೊರೆಯಾಗಿ ನೀಡಿದ ಬಗ್ಗೆ ದಾಖಲೆ ಇಲ್ಲದಿದ್ದರೂ ಆತಂಕ ಪಡಬೇಡಿ. ಪರಿಹಾರ ಇರುತ್ತದೆ ಎಂದು ಅವರು ಅಭಯ ನೀಡಿದರು.
