ಉತ್ತರ ಕನ್ನಡದ ಹಳಿಯಾಳದಲ್ಲಿ ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ, ಶಿಕ್ಷಕರೊಬ್ಬರು ತಮ್ಮ ಮಗನಿಗೆ ಅಕ್ರಮವಾಗಿ ಉತ್ತರ ಹೇಳಿಕೊಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಪರೀಕ್ಷೆಯನ್ನು ರದ್ದುಗೊಳಿಸಿ, ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ (ಡಿ.13):: ಕೇಂದ್ರ ನವೋದಯ ಶಾಲೆಯ 6ನೇ ತರಗತಿ ಪ್ರವೇಶಾತಿ ಪರೀಕ್ಷೆಯಲ್ಲಿ ಕರ್ತವ್ಯ ನಿರತನಲ್ಲದ ಶಾಲಾ ಶಿಕ್ಷಕನೊಬ್ಬ ತನ್ನ ಮಗನಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಿಕೊಡುತ್ತಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ನವೋದಯ ಪ್ರವೇಶ ಪರೀಕ್ಷೆ: ಶಿಕ್ಷಕನಿಂದಲೇ ಮೋಸ!

ಶಾಲೆಯ ಶಿಕ್ಷಕನಾದ ಚರ್ಚಿಲ್ ಸಂತಾನ್ ದಾಲ್ಮೆಟ್ ಎಂಬಾತನು ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿನ ಸೂಪರ್ವೈಸರ್ ಜೊತೆ ಕೈಜೋಡಿಸಿ ತನ್ನ ಮಗನಿಗೆ ಉತ್ತರಗಳನ್ನು ಹೇಳಿಕೊಡುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ಪರೀಕ್ಷೆಯು ನವೋದಯ ಶಾಲೆಗೆ 5ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ನಡೆಯುತ್ತಿತ್ತು. ಡ್ಯೂಟಿ ಇಲ್ಲದಿದ್ದರೂ ಶಿಕ್ಷಕ ಚರ್ಚಿಲ್ ಪರೀಕ್ಷಾ ಕೇಂದ್ರದಲ್ಲಿ ಈ ರೀತಿ ಮೋಸ ಮಾಡುತ್ತಿರುವುದು ಇತರ ವಿದ್ಯಾರ್ಥಿಗಳ ಪೋಷಕರ ಕಣ್ಣಿಗೆ ಬಿದ್ದಿದೆ.

ಪೋಷಕರಿಂದ ಆಕ್ರೋಶ :
ಶಿಕ್ಷಕ ಚರ್ಚಿಲ್ನ ಈ ವರ್ತನೆಯಿಂದ ಇತರ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪ್ರಮೋದ್ ಮಹಾಲೆ ಅವರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ.
ಇದೇ ವೇಳೆ, ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ನ ಮೇಲೆ ಬಡ್ಡಿ ವ್ಯವಹಾರ ನಡೆಸುತ್ತಿರುವುದು ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿರುವ ಕುರಿತು ಕೂಡ ಸ್ಥಳೀಯರು ದೂರು ನೀಡಿದ್ದಾರೆ.
ಪರೀಕ್ಷೆ ರದ್ದುಗೊಳಿಸುವಂತೆ ಪೋಷಕರು ಒತ್ತಾಯ:
ಈ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ, ಈ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅಕ್ರಮದಲ್ಲಿ ಭಾಗಿಯಾದ ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಬಿಇಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.


