ತಮಿಳುನಾಡಿನಿಂದ ಮತ್ತೆ ಕಾವೇರಿ ನೀರು ಕ್ಯಾತೆ, ಸುಪ್ರೀಂ ಕೋರ್ಟ್ಗೆ ಹೊಸ ಅರ್ಜಿ!
ಕಾವೇರಿ ನದಿ ನೀರಿನ ಎಷ್ಟು ಪ್ರಮಾಣ ಬೆಂಗಳೂರು ನಗರಕ್ಕೆ ಬಳಕೆಯಾಗುತ್ತಿದೆ? ಇದು ತಮಿಳುನಾಡು ಸರ್ಕಾರದ ಹೊಸ ವಾದ. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ನವದೆಹಲಿ(ಜ.31): ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಭುಗಿಲೇಳುವ ಎಲ್ಲಾ ಸಾಧ್ಯತೆ ಇದೆ. ಇದೀಗ ತಮಿಳುನಾಡು ಮತ್ತೆ ಕಾವೇರಿ ನೀರು ಕ್ಯಾತೆ ತೆಗೆದಿದೆ. ಹೊಸ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು, ಕಾವೇರಿ ನದಿ ನೀರಿನ ಜೊತೆಗೆ ಮೇಕೆದಾಟು ಯೋಜನೆಗೆ ತಡೆಯೊಡ್ಡಲು ಮಾಸ್ಟರ್ ಪ್ಲಾನ್ ಮಾಡಿದೆ. ಈ ಬಾರಿ ತಮಿಳುನಾಡು ಕಾವೇರಿಯಿಂದ ಬೆಂಗಳೂರು ನಗರಕ್ಕೆ ಬಳಕೆಯಾಗುವ ನೀರಿನ ಪ್ರಮಾಣವೆಷ್ಟು ಅನ್ನೋದನ್ನು ಪ್ರಶ್ನಿಸಿದೆ. ಬೆಂಗಳೂರಿಗೆ ಬಳಕೆಯಾಗುವ ನೀರಿನ ಪ್ರಮಾಣವನ್ನು ಲೆಕ್ಕಹಾಕಲು ತಮಿಳುನಾಡು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಗ್ರಹಿಸಿದೆ.
ಕಾವೇರಿ ನದಿ ನೀರಿನ ಬಹುಪಾಲು ಬೆಂಗಳೂರಿಗೆ ಪೊರೈಕೆಯಾಗುತ್ತಿದೆ. ಇದರ ನಿಖರ ಪ್ರಮಾಣವೆಷ್ಟು? ಈ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿಕ್ಕೆ ಸೂಚನೆ ನೀಡಲು ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಮೂಲಕ ಕಾವೇರಿ ನದಿ ನೀರನ್ನು ಕರ್ನಾಟಕ ಅಸಮರ್ಪಕವಾಗಿ ಬಳಕೆ ಮಾಡುತ್ತಿದೆ. ಜೊತೆಗ ಸಿಂಹಪಾಲನ್ನು ಕೃಷಿ ಚಟುವಟಿಕೆ ಬದಲು ನಗರಕ್ಕೆ ಬಳಕೆ ಮಾಡುತ್ತಿದೆ ಅನ್ನೋದನ್ನು ಬಿಂಬಿಸಲು ಹೊರಟಿದೆ. ಇಷ್ಟೇ ಅಲ್ಲ ಇದೇ ವಿಚಾರ ಮುಂದಿಟ್ಟುಕೊಂಡು ಮೇಕೆದಾಟು ಯೋಜನೆಗೆ ತಡೆಯೊಡ್ಡಲು ತಮಿಳುನಾಡು ಮುಂದಾಗಿದೆ.
ಮಹದಾಯಿ: ಕರ್ನಾಟಕದ ಡಿಪಿಆರ್ಗೆ ಕೇಂದ್ರ ಒಪ್ಪಿಗೆ; ಅಮಿತ್ ಶಾಗೆ ಗೋವಾ ಸಿಎಂ ದೂರು
ಕಾವೇರಿ ನದಿ ನೀರನ್ನು ಬೆಂಗಳೂರು ಬಳಕೆಗೆ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಮೇಕೆದಾಟು ಯೋಜನೆಯ ಅಗತ್ಯವಿಲ್ಲ. ತಮಿಳುನಾಡಿಗೆ ನೀರಿನ ಸಂಕಷ್ಟ ಹೆಚ್ಚಿಸುವ ಮೇಕೆದಾಟು ಯೋಜನೆ ಅವೈಜ್ಞಾನಿಕ ಎಂದು ಬಿಂಬಿಸಲು ತಮಿಳುನಾಡು ಹೆಜ್ಜೆ ಇಟ್ಟಿದೆ. ಇತ್ತೀಚಗೆ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಿಗ ಅಧಿಕಾರದ ಬಗ್ಗೆ ಪ್ರಶ್ನಿಸಿತ್ತು. ಮೇಕೆದಾಟು ಯೋಜನೆ ಪರಿಶೀಲನೆ ನಡೆಸುವ ಅಧಿಕಾರ ಪ್ರಾಧಿಕಾರಕ್ಕೆ ಹೇಗೆ ಸಿಕ್ಕಿದೆ ಎಂದು ಕೇಳಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಮೇಕೆದಾಟು ಸೇರಿ ಕಾವೇರಿ ನದಿ ಪಾತ್ರದ ಯೋಜನೆಗಳ ಪರಿಶೀಲನೆ ನಡೆಸುವ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ವ್ಯಾಪ್ತಿಗೆ ಬರುವುದಿಲ್ಲ, ಒಂದು ವೇಳೆ ಪ್ರಾಧಿಕಾರ ಪರಾಮರ್ಶೆ ನಡೆಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಚ್ಗೆ ಆಕ್ಷೇಪಣೆ ಸಲ್ಲಿಸಿತ್ತು.
ತಮಿಳುನಾಡಿನ ಕಾವೇರಿ ಹೆಚ್ಚುವರಿ ನೀರು ಯೋಜನೆ ಆಕ್ಷೇಪಿಸಿ ಸಲ್ಲಿಸಿದ್ದ ಕರ್ನಾಟಕ ಅರ್ಜಿ ವಿಚಾರಣೆ ಮುಂದೂಡಿಕೆ!
ಮೇಕೆದಾಟು ಯೋಜನೆಗೆ ತಡೆ ಕೋರಿ ತಮಿಳುನಾಡು ಸುಪ್ರೀಂಕೋರ್ಟಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಗೆ ಬಂದಿದ್ದು, ಆಗ ಸಾಲಿಸಿಟರ್ ಜನರಲ್ ಅವರ ಅಭಿಪ್ರಾಯದಂತೆ ಸಿಡಬ್ಲ್ಯುಎಂಎ ಮೇಕೆದಾಟು ಯೋಜನೆಯನ್ನು ಪರಾಮರ್ಶಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತಮಿಳುನಾಡು ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸುಮಾರು 155 ಪುಟಗಳ ವರದಿಯನ್ನು ಸುಪ್ರೀಂ ಕೋರ್ಚ್ಗೆ ಸಲ್ಲಿಸಲಾಗಿತ್ತು.