Suspected terrorists: ಶಂಕಿತ ಉಗ್ರರ ಮೊಬೈಲ್ ರಹಸ್ಯ ಬೇಧಿಸಲು ಸಿದ್ಧತೆ
ನಗರದಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬಾ (ಎಲ್ಇಟಿ) ಸಂಘಟನೆಯ ಐವರು ಶಂಕಿತ ಉಗ್ರರ ಬಂಧನವಾದ ಬೆನ್ನಲ್ಲೇ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್ನಲ್ಲಿ ಅಡಕವಾಗಿರುವ ‘ರಹಸ್ಯ’ಗಳ ಶೋಧನಾ ಕಾರ್ಯವನ್ನು ಸಿಸಿಬಿ ಆರಂಭಿಸಿದೆ.
ಬೆಂಗಳೂರು (ಜು.23) : ನಗರದಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬಾ (ಎಲ್ಇಟಿ) ಸಂಘಟನೆಯ ಐವರು ಶಂಕಿತ ಉಗ್ರರ ಬಂಧನವಾದ ಬೆನ್ನಲ್ಲೇ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್ನಲ್ಲಿ ಅಡಕವಾಗಿರುವ ‘ರಹಸ್ಯ’ಗಳ ಶೋಧನಾ ಕಾರ್ಯವನ್ನು ಸಿಸಿಬಿ ಆರಂಭಿಸಿದೆ.
ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾಗ ಹೆಬ್ಬಾಳ ಸಮೀಪದ ಸುಲ್ತಾನ್ಪಾಳ್ಯದ ಸೈಯದ್ ಸುಹೇಲ್ಖಾನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಸುಹೇಲ್, ಪುಲಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್.ಟಿ.ನಗರದ ಸೈಯದ್ ಮುದಾಸೀರ್ ಪಾಷ ಬಂಧಿಸಿದ ಪೊಲೀಸರು, ಆರೋಪಿಗಳಿಂದ 7 ನಾಡಾ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಡ್ಯಾಗರ್ ಹಾಗೂ 12 ಮೊಬೈಲ್ಗಳನ್ನು ಜಪ್ತಿ ಮಾಡಿದ್ದರು.
ಬೆಂಗಳೂರು ಸ್ಫೋಟ ಸಂಚು ತನಿಖೆ ಎನ್ಐಎಗೆ ವಹಿಸಿ: ಸಿ.ಟಿ.ರವಿ
ಶಂಕಿತ ಉಗ್ರರಿಂದ ಜಪ್ತಿಯಾದ ಮೊಬೈಲ್ಗಳ ಪರಿಶೀಲನೆಗೆ ಅನುಮತಿ ಕೋರಿ ಸಿಸಿಬಿ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯದ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಶಂಕಿತರ ಉಗ್ರರ ಮೊಬೈಲ್ಗಳನ್ನು ಸೈಬರ್ ಕ್ರೈಂ ತಜ್ಞರ ಸಹಕಾರದಲ್ಲಿ ಸಿಸಿಬಿ ಪರಿಶೀಲನೆ ಶುರು ಮಾಡಿದೆ. ಇದರಿಂದ ಬೆಂಗಳೂರಿನಲ್ಲಿ ಗುಪ್ತವಾಗಿರುವ ಭಯೋತ್ಪಾದಕ ಸಂಘಟನೆ ಚಟುವಟಿಕೆಗಳ ಹಿಂದಿನ ಸಂಪರ್ಕ ಜಾಲದ ಸುಳಿವು ಸಿಗುವ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಧ್ವಂಸಕ ಕೃತ್ಯದ ಪೂರ್ವಸಿದ್ಧತೆ ಮಾಡಿಕೊಂಡಿದ್ದ ಶಂಕಿತ ಉಗ್ರರಿಗೆ ಗ್ರೆನೇಡ್, ವಾಕಿಟಾಕಿ ಸೆಟ್, ಪಿಸ್ತೂಲ್, ಜೀವಂತ ಗುಂಡುಗಳು ಪೂರೈಕೆಯಾಗಿದ್ದವು. ಅಲ್ಲದೆ ಬಂಧಿತರಿಗೆ ಅಪರಿಚಿತ ಮೂಲಗಳಿಂದ ಹಣಕಾಸು ನೆರವು ಸಿಕ್ಕಿತು. ಹೀಗಾಗಿ ಈ ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಎನ್ನಲಾದ ವಿದೇಶದಲ್ಲಿ ಅಡಗಿರುವ ಎಲ್ಇಟಿ ಉಗ್ರ ಮಹಮ್ಮದ್ ಜುನೈದ್ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೇರಳ ಮೂಲದ ಎಲ್ಇಟಿ ಶಂಕಿತ ಉಗ್ರ ನಸೀರ್ ಜೊತೆ ಈಗ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಸಂವಹನಕ್ಕೆ ಕೊಂಡಿಯಾಗಿದ್ದವರು ಯಾರು ಮತ್ತು ಹೇಗೆಲ್ಲ ಮಾತುಕತೆ ನಡೆದಿವೆ ಎಂಬ ವಿಚಾರ ಮೊಬೈಲ್ನಲ್ಲಿ ಅಡಕವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
News Hour: ಬಗೆದಷ್ಟು ಬಯಲಾಗುತ್ತಿದೆ ಬೆಂಗಳೂರು ಉಗ್ರಜಾಲ!
ಸ್ಕ್ರೀನ್ ಲಾಕ್ ಮಾಡಿದ್ದ ಶಂಕಿತರು
ತಮ್ಮ ಮೊಬೈಲ್ಗಳನ್ನು ರಹಸ್ಯ ಸಂಖ್ಯೆ ಬಳಸಿ ಶಂಕಿತ ಉಗ್ರರು ಲಾಕ್ ಮಾಡಿದ್ದಾರೆ. ವಿಚಾರಣೆ ವೇಳೆ ಮೊಬೈಲ್ ಆನ್ಲಾಕ್ ಬಗ್ಗೆ ಅವರು ಬಾಯಿ ಬಿಡುತ್ತಿಲ್ಲ. ಹೀಗಾಗಿ ಸೈಬರ್ ತಜ್ಞರ ನೆರವು ಪಡೆದು ಮೊಬೈಲ್ಗಳನ್ನು ಆನ್ಲಾಕ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.