Social Media Angry On Kerala Man compenssation  ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು (ಫೆ.20): ಕಾಡಾನೆ ದಾಳಿ ನಡೆದಿದ್ದು ಕೇರಳದಲ್ಲಿ, ಮೃತಪಟ್ಟ ವ್ಯಕ್ತಿ ಕೇರಳದವನು. ಆದರೆ, ಪರಿಹಾರ ನೀಡಿದ್ದು ರಾಜ್ಯ ಸರ್ಕಾರ. ಬರೋಬ್ಬರಿ 15 ಲಕ್ಷ ರೂಪಾಯಿ ಪರಿಹಾರ ರಾಜ್ಯ ಸರ್ಕಾರ ಘೋಷಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಕಳೆದ ವರ್ಷದ ನವೆಂಬರ್‌ನಲ್ಲಿ ವಿದ್ಯುತ್‌ ತಂತಿ ತಗುಲಿ ಪುಟ್‌ಪಾತ್‌ನಲ್ಲೇ ಹೆಣವಾದ ತಾಯಿಮಗುವಿಗೆ ರಾಜ್ಯ ಸರ್ಕಾರ ಕೇವಲ 5 ಲಕ್ಷ ಪರಿಹಾರ ನೀಡಿತ್ತು. ಆದರೆ, ಈಗ ಕಾಡಾನೆ ದಾಳಿಯಿಂದ ಮೃತಪಟ್ಟ ಬೇರೆ ರಾಜ್ಯ ವ್ಯಕ್ತಿಗೆ ತನ್ನ ಖಜಾನೆ ತೆರೆದಿರುವುದು ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹೋಪ್‌ಫಾರ್ಮ್‌ ಜಂಕ್ಷನ್‌ ಬಳಿಯ ನಿವಾಸಿ 23 ವರ್ಷದ ಸೌಂದರ್ಯ ಹಾಗೂ ಆಕೆಯ 9 ತಿಂಗಳ ಹೆಣ್ಣುಮಗು ಬೆಸ್ಕಾಂನ ನಿರ್ಲಕ್ಷ್ಯದಿಂದಾಗಿ ಫುಟ್‌ಪಾತ್‌ನಲ್ಲಿಯೇ ಸುಟ್ಟುಕರಕಲಾಗಿದ್ದರು. ಆದರೆ, ಈ ಬಡಪಾಯಿಗಳ ಸಾವಿಗೆ ಬರೀ 5 ಲಕ್ಷ ಪರಿಹಾರ ಕೊಟ್ಟು ಬೆಸ್ಕಾಂ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಸರ್ಕಾರ ಕೈತೊಳೆದುಕೊಂಡಿತ್ತು. ಆದರೆ, ಇಂದು ಕಾಂಗ್ರೆಸ್‌ನ ವಯನಾಡ್‌ ಸಂಸದ ರಾಹುಲ್‌ ಗಾಂಧಿ ಆನೆ ತುಳಿತಕ್ಕೆ ಒಳಗಾಗಿ ಸಾವು ಕಂಡ ಕುಟುಂಬದವರ ಭೇಟಿ ಮಾಡಿದ್ದೇ ತಡ, ರಾಜ್ಯ ಸರ್ಕಾರ ಆತನ ಕುಟುಂಬಕ್ಕೆ 15 ಲಕ್ಷ ಘೋಷಣೆ ಮಾಡಿ ಬಿಟ್ಟಿದೆ. ರಾಜಕೀಯ ವಲಯ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲೂ ಇದು ಆಕ್ರೋಶಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

'ನಮ್ಮ ಕರ್ನಾಟಕದಲ್ಲೂ ಅಮ್ಮ-ಮಗಳು ಎಲೆಕ್ಟ್ರಿಕ್‌ ಶಾಕ್‌ನಿಂದ ಸತ್ತಾಗ ಕೇವಲ 5 ಲಕ್ಷ ಕೊಡಲಾಗಿತ್ತು. ಆದರೆ, ಕೇರಳ ವ್ಯಕ್ತಿಗೆ ಇದೇ ಕಾಂಗ್ರೆಸ್‌ ಸರ್ಕಾರ 15 ಲಕ್ಷ ಕೊಟ್ಟಿದೆ' ಎಂದು ಅರುಣ್‌ ಕುಮಾರ್‌ ಗೌಡ ಎನ್ನುವವರು ಟೀಕೆ ಮಾಡಿದ್ದಾರೆ. 'ಕನ್ನಡಿಗರನ ಬೆವರು ಹರಿಸಿದ ತೆರಿಗೆ ಕೇಂದ್ರ ಕೊಡಲ್ಲ ಅಂತ ಬೊಬ್ಬೆ ಹಾಕುವ ಸರ್ಕಾರ , ಕೇರಳದಲ್ಲಿ ಆನೆತುಳಿತಕ್ಕೆ ಯಾರೋ ಸತ್ತರೆ , ತಕ್ಷಣ 15 ಲಕ್ಷ ಪರಿಹಾರ ಕೊಡುತ್ತೆ. ಏಕೆಂದರೆ ವಯನಾಡ್ ಸಂಸದನ ಮುಂದೆ ಇಡೀ ಕರ್ನಾಟಕದ ಸರ್ಕಾರ ಮಂಡಿಯೂರಿ ಕೂರುತ್ತೆ.. ಅವ ಹೇಳಿದನಂತೆ.. ಇವರು ಕೊಟ್ಟರಂತೆ.. ಅಷ್ಟು ದರ್ದಿದ್ದರೆ ಸ್ವಂತ ದುಡ್ಡು ಕೊಡಿ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ನಮ್ಮ ರಾಜ್ಯದ ತೆರಿಗೆ ಹಣ ಕೇರಳ ರಾಜ್ಯದ ಪಾಲು. ಕೇರಳ ನಮ್ಮ ರಾಜ್ಯದ ಜೊತೆ ವಿಲೀನ ಆಯ್ತಾ ಅಥ್ವಾ ಕೇರಳ ಸರ್ಕಾರ ದಿವಾಳಿ ಆಯ್ತಾ!? ನಮ್ಮ ರಾಜ್ಯದ ರೈತರಿಗೆ ಪರಿಹಾರ ಎಲ್ಲಿ!? ರಾಜ್ಯದ ನೀರು ತಮಿಳುನಾಡಿನ ಪಾಲು, ರಾಜ್ಯದ ಹಣ ಕೇರಳದ ಪಾಲು, ಸರ್ಕಾರದ ಆದೇಶಗಳು ಮಣಿವಣ್ಣನ್ ಪಾಲು' ಎಚ್‌ಎನ್‌ ಚೆಲುವೇಗೌಡ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ನಮ್ಮ ತೆರಿಗೆ ಕೇರಳದ ಹಕ್ಕು.. ರಾಜ್ಯದಲ್ಲಿ ರೈತರು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಂಡ್ರೆ, 5 ಲಕ್ಷ ಪರಿಹಾರದ ಹಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಹೇಳಿಕೆ ನೀಡುವ ಮೂರೂ ಬಿಟ್ಟಿರೋ ರಾಜಕಾರಣಿಗಳು ಪಕ್ಕದ ರಾಜ್ಯದಲ್ಲಿ ವ್ಯಕ್ತಿ ಸತ್ತರೆ 15 ಲಕ್ಷ ಪರಿಹಾರ ಕೊಡುತ್ತದೆ. ಇದನ್ನು ನಾನು ಧೈರ್ಯವಾಗಿ ಪ್ರಶ್ನೆ ಮಾಡ್ತೇನೆ. ಇದು ಯಾವ ನ್ಯಾಯ' ಎಂದು ರವೀರ್‌ ರೆಡ್ಡಿ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

;ಗುಲಾಮಗಿರಿಯ ಪರಾಕಾಷ್ಟೆ. ರಾಹುಲ್ ಗಾಂಧಿ ತನ್ನ ಜೇಬಿನಿಂದ ಕೊಡಲಿ. ಕರ್ನಾಟಕ ಜನರಿಂದ ಸಂಗ್ರಹಿಸಿದ ಹಣವನ್ನು ಏಕೆ ಕೊಡಬೇಕು? ಇಷ್ಟಕ್ಕೂ ಅವ್ನು ಆಯ್ಕೆ ಆಗಿರುವುದು ಕೇರಳದಿಂದ' ಎಂದು ಎಸ್‌ ಆರ್‌ ಶ್ರೀರಾಮ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. 'ಕರ್ನಾಟಕ - ಕೆರಳ - ತಮಿಳುನಾಡು ವಲಯಗಳಲ್ಲಿ ಆನೆ ಕಾರಿಡಾರ್ ಇದೆ. ಆನೆಗಳು ಎಲ್ಲಾ ಕಡೆ ಓಡಾಡುತ್ತವೆ. ಅದು ಕೆರಳದಲ್ಲಿದ್ದಾಗ ಮನುಷ್ಯನ ಜೊತೆ ಮುಖಾಮುಖಿಯಾಗಿ ಮನುಷ್ಯ ಮರಣ ಹೊಂದಿದರೆ. ಅದು ಕರ್ನಾಟಕದ ಆನೆ ಕೊಂದಿರೊದು ಅದಕ್ಕೆ ಕರ್ನಾಟಕ ಪರಿಹಾರ ಕೊಡಬೇಕಾ ಅಂತೀರಾ,? ಆ ತರಹ ಅರಣ್ಯ ಇಲಾಖೆಯ ಯಾವ ಕಾನೂನಿನಲ್ಲಿ ತಿಳಿಸಿದ್ದಾರೆ"ಎಂದು ಸತ್ಯನಾಥ್‌ ಎನ್ನುವವರು ಪ್ರಶ್ನೆ ಮಾಡಿದ್ದಾರೆ.

'ಆನೆ ದಾಳಿಯಿಂದ ರಾಜ್ಯದ ವ್ಯಕ್ತಿ ಸತ್ರೆ 5 ಲಕ್ಷ, ಕೇರಳ ವ್ಯಕ್ತಿ ಸತ್ತರೆ 15 ಲಕ್ಷ..' ರಾಜ್ಯ ಸರ್ಕಾರದ ವಿರುದ್ಧ ನಾಯಕರ ಕಿಡಿ!

ಈ ಹಿಂದೆ ಸಚಿವ ಶಿವಾನಂದ್‌ ಪಾಟೀಲ್‌ ಅವರ ಹೇಳಿಕೆಯನ್ನೂ ಉಲ್ಲೇಖಿಸಿ ರಾಜ್ಯ ಸರ್ಕಾರವನ್ನು ಟೀಕೆ ಮಾಡಿದ್ದಾರೆ. 'ರೈತರಿಗೆ ಪರಿಹಾರ ಹಣ ನೀಡಲು ಶುರು ಮಾಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ' ಎಂದಿದ್ದರು. ಇದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈಗ ಇದೇ ರೈತ ದುಡಿದ ದುಡ್ಡಿನಲ್ಲಿ ಕಟ್ಟಿದ ತೆರಿಗೆಯ ಹಣವನ್ನು ಪರ ರಾಜ್ಯದ ವ್ಯಕ್ತಿಗೆ ಪರಿಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಕಾಡಾನೆ ದಾಳಿಗೆ ಕೇರಳ ವ್ಯಕ್ತಿ ಬಲಿ , ಕರ್ನಾಟಕದಿಂದ 15 ಲಕ್ಷ ಪರಿಹಾರ! ದಾಳಿ ಮಾಡಿದ ಆನೆ ನಿಜವಾಗ್ಲೂ ನಮ್ಮ ರಾಜ್ಯದ್ದಾ?