ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ಕುರಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ. ಮಾಲೀಕ ಹುಚ್ಚಪ್ಪ ಮುದ್ದಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ.
ಕುರಿ ಶೆಡ್ಗೆ ಬೆಂಕಿ: 30 ಕುರಿಗಳ ಸಜೀವ ದಹನ:
ಹಾವೇರಿ: ಕುರಿಗಳಿದ್ದ ಶೆಡ್ಗೆ ಬೆಂಕಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿದ್ದ ಶೆಡ್ಗೆ ಆಕ್ಮಸಿಕವಾಗಿ ಬೆಂಕಿ ಬಿದ್ದು 30ಕ್ಕೂ ಹೆಚ್ಚು ಕುರಿಗಳು ಭಸ್ಮವಾಗಿದ್ದು, ಶೆಡ್ ಬಳಿ ಮಾಲೀಕರಿಲ್ಲದಿರುವಾಗಲೇ ಈ ಅನಾಹುತ ಸಂಭವಿಸಿದೆ. ಕುರಿ ಶೆಡ್ ಧಗ ಧಗನೇ ಹೊತ್ತಿ ಉರಿದಿದ್ದು, 30ಕ್ಕೂ ಹೆಚ್ಚು ಕುರಿಗಳು ಸುಟ್ಟು ಕರಕಲಾಗಿರುವೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಸುಟ್ಟು ಕರಕಲಾದ ಕುರಿಗಳ ದೇಹ ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ.
ಹುಚ್ಚಪ್ಪ ಮುದ್ದಿ ಎಂಬುವರಿಗೆ ಸೇರಿದ ಕುರಿಗಳು ಇವಾಗಿವೆ. ಮಾಲೀಕ ಹುಚ್ಚಪ್ಪ ಅವರು ಅನಾರೋಗ್ಯಕ್ಕೀಡಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಈ ಬೆಂಕಿ ದುರಂತ ಸಂಭವಿಸಿದ್ದು, ಕುರಿಗಳು ಸಜೀವ ದಹನಗೊಂಡಿವೆ. ಕುರಿಗಳಿದ್ದ ಶೆಡ್ ಕೂಡ ಬೆಂಕಿಗಾಹುತಿಯಾಗಿದೆ. ಬೆಂಕಿಯಿಂದಾಗಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ದುರಂತದಲ್ಲಿ ಕುರಿಗಳನ್ನು ಕಳೆದುಕೊಂಡ ರೈತನಿಗೆ ಸರ್ಕಾರ ಸೂಕ್ತವಾದ ಪರಿಹಾರ ನೀಡುವಂತೆ ಸ್ಥಳೀಯ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸೋಮವಾರಪೇಟೆ: ಮನೆಯಲ್ಲಿ ಆಕಸ್ಮಿಕ ಬೆಂಕಿ: ಒಂದು ಕಾಲು ಕಳೆದುಕೊಂಡಿದ್ದ ಯೋಧ ಹೊರ ಬಾರಲಾಗದೇ ಸಜೀವ ದಹನ


