ಯಲಹಂಕದ ಖಾಸಗಿ ಶಾಲೆಯೊಂದರಲ್ಲಿ 2 ನಿಮಿಷ ತಡವಾಗಿ ಬಂದ ಒಂದನೇ ತರಗತಿ ಮಕ್ಕಳಿಗೆ ಪ್ರಾಂಶುಪಾಲರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಈ ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಶ್ನಿಸಿದ ಪೋಷಕರಿಗೆ ಪ್ರಾಂಶುಪಾಲೆ ಉಡಾಫೆ ಉತ್ತರ ನೀಡಿದ್ದಾರೆ.

ಬೆಂಗಳೂರು (ಮಾ.15): 1ನೇ ಹಾಗೂ ಇತರ ತರಗತಿಗಳ ಸುಮಾರು ಐದಾರು ವಿದ್ಯಾರ್ಥಿಗಳು ಶಾಲೆಗೆ 2 ನಿಮಿಷ ತಡವಾಗಿ ಬಂದಿದ್ದಕ್ಕೆ 2 ತಾಸುವರೆಗೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆಗೆ ಗುರಿಪಡಿಸಿರುವ ಘಟನೆ ಯಲಹಂಕದ ಅಟ್ಟೂರು ಲೇಔಟ್‌ನ ಖಾಸಗಿ ಶಾಲೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಶಾಲೆಯ ಪ್ರಾಂಶುಪಾಲರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇತ್ತೀಚೆಗೆ 1ನೇ ತರಗತಿ ಮತ್ತು ಇತರ ತರಗತಿಗಳ ಸುಮಾರು ಐದಾರು ಮಕ್ಕಳು ಶಾಲೆಗೆ ತಡವಾಗಿ ಬಂದಿದ್ದಾರೆ. ಈ ವೇಳೆ ಅವರನ್ನು ತರಗತಿಗೆ ಸೇರಿಸಿಕೊಳ್ಳದೇ ಬಿಸಿಲಿನಲ್ಲಿ 2 ತಾಸು ನಿಲ್ಲಿಸಲಾಗಿದೆ. ಈ ವೇಳೆ ಮಕ್ಕಳು ಬೇಸರ, ನೋವಿನಿಂದ ಹೊರಗೆ ನಿಂತಿರುವುದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು ಈ ವಿಡಿಯೋ ವೈರಲ್ ಆಗಿದೆ.

ಉಡಾಫೆ ಉತ್ತರ ನೀಡಿದ ಪ್ರಾಂಶುಪಾಲೆ:

ಮಕ್ಕಳಿಗೆ ಬಿಸಿಲಿನಲ್ಲಿ ನಿಲ್ಲಿಸಿರುವುದು ತಪ್ಪು ಎನ್ನುವುದಾದರೆ ಇನ್ನು ಮುಂದೆ ಮಕ್ಕಳಿಗೆ ದೈಹಿಕ ಶಿಕ್ಷಣ ತರಗತಿಯೇ ತೆಗೆದುಕೊಳ್ಳುವುದಿಲ್ಲ. ಬಿಸಿಲಿನಲ್ಲಿ ಆಟವಾಡುವಾಗ ಮಕ್ಕಳಿಗೆ ಬಿಸಿಲು ತಾಗುವುದಿಲ್ಲವೇ? ಎಂದು ಪ್ರಾಂಶುಪಾಲೆ ವಿದ್ಯಾರ್ಥಿಗಳ ಪಾಲಕರಿಗೆ ಪ್ರಶ್ನಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ನೀಡಿರುವ ಶಿಕ್ಷೆಯನ್ನು ದೈಹಿಕ ಶಿಕ್ಷಣ ಕ್ಲಾಸಿಗೆ ಹೋಲಿಸಿದ್ದಾರೆ.

ಕನ್ನಡ ಅಗತ್ಯವಿಲ್ಲ ಎಂದ ಪ್ರಾಂಶುಪಾಲೆ!

ಮಕ್ಕಳಿಗೆ ಶಿಕ್ಷಿಸಿರುವುದನ್ನು ಪ್ರಶ್ನಿಸಿಲು ಹೋದ ಪಾಲಕರೊಂದಿಗೆ ಶಾಲೆಯ ಪ್ರಾಂಶುಪಾಲೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪಾಲಕರೊಬ್ಬರು ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಾರೆ. ಅದಕ್ಕೆ, ‘ನಾಟ್ ರಿಕ್ವೈಯರ್ಡ್’ ಎಂದು ಪ್ರಾಂಶುಪಾಲೆ ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ. ಇವರ ವರ್ತನೆಗೆ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.