ಬೆಂಗಳೂರಿನ ಆನೇಕಲ್ ಬಳಿಯ ಸೂರ್ಯನಗರದಲ್ಲಿ 76,000 ಆಸನ ಸಾಮರ್ಥ್ಯದ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ಪೂರ್ಣಗೊಂಡರೆ, ಇದು ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಇದರೊಂದಿಗೆ ವಸತಿ ಯೋಜನೆಗಳಿಗೂ ಚಾಲನೆ ನೀಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಆನೇಕಲ್ ತಾಲೂಕು ಸೂರ್ಯನಗರ 4ನೇ ಹಂತದಲ್ಲಿ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ನಿರ್ಮಿಸಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

Add Asianetnews Kannada as a Preferred SourcegooglePreferred

‘ನಮ್ಮ ಮನೆ’ ಯೋಜನೆಯಡಿ ನಿವೇಶನಗಳು ಹಂಚಿಕೆಗೆ ಚಾಲನೆ, ‘ಸೂರ್ಯ ಶೈನ್’ ಮತ್ತು ‘ಸೂರ್ಯ ಡಿವೈನ್’ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂಮಾಲೀಕರಿಗೆ ಸಾಂಕೇತಿಕವಾಗಿ ನಿವೇಶನಗಳ ಹಂಚಿಕೆ, ಲಾಟರಿ ಮುಖಾಂತರ ಸಾರ್ವಜನಿಕ ಅರ್ಜಿದಾರರಿಗೆ ನಿವೇಶನಗಳನ್ನು ಇದೇ ವೇಳೆ ಹಂಚಿಕೆ ಮಾಡಲಾಗುತ್ತದೆ ಎಂದು ಕೆಎಚ್‌ಬಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಇನ್ನಿತರ ಗಣ್ಯರು ಉಪಸ್ಥಿತರಿರುವರು.

ಬೃಹತ್‌ ಕ್ರೀಡಾಂಗಣ

76,000 ಸೀಟುಗಳ ಸಾಮರ್ಥ್ಯದ ನೂತನ ಕ್ರೀಡಾಂಗಣವೂ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರಲಿದೆ. ಸ್ಟೇಡಿಯಂನ ಆಸನಗಳ ವಿನ್ಯಾಸವನ್ನು ಅಮೆರಿಕದ ಪ್ರಸಿದ್ಧ ಟೆಕ್ಸಾಸ್‌ನ ಎಟಿ ಆ್ಯಂಡ್‌ ಟಿ ಸ್ಟೇಡಿಯಂ ಹಾಗೂ ಲ್ಯೂಕಾಸ್ ಆಯಿಲ್ ಸ್ಟೇಡಿಯಂ ಮಾದರಿಯಿಂದ ಪ್ರೇರಣೆ ಪಡೆದು ರೂಪಿಸಲಾಗುತ್ತಿದೆ. ಸ್ಟೇಡಿಯಂನ ಮುಂಭಾಗದ ವಿನ್ಯಾಸ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ಕ್ರಿಕೆಟ್ ಇತಿಹಾಸ ಬಿಂಬಿಸಲಿದೆ. ಜೊತೆಗೆ ದಿಗ್ಗಜ ಆಟಗಾರರ ನೆನಪಿಗಾಗಿ ‘ಹಾಲ್ ಆಫ್ ಫೇಮ್’ ಕೂಡ ಇರಲಿದೆ.

ಎರಡನೇ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೊಳ ಮತ್ತು ಬೃಹತ್ ಸಮಾವೇಶ ಸಭಾಂಗಣ ನಿರ್ಮಾಣವಾಗಲಿದ್ದು, ಇದನ್ನು ಕೆಎಚ್‌ಬಿ ಸೂರ್ಯ ಕ್ರೀಡಾಗ್ರಾಮ ಎಂದು ಕರೆಯಲಾಗುತ್ತದೆ. ಈ ಸ್ಟೇಡಿಯಂ ಪೂರ್ಣಗೊಂಡರೆ, ಅಹಮದಾಬಾದ್‌ನ ಮೋದಿ ಸ್ಟೇಡಿಯಂ ನಂತರ ಭಾರತದ ಎರಡನೇ ಅತಿ ದೊಡ್ಡ ಹಾಗೂ ವಿಶ್ವದ ಪ್ರಮುಖ ಬೃಹತ್ ಕ್ರಿಕೆಟ್ ಕ್ರೀಡಾಂಗಣಗಳ ಪಟ್ಟಿಗೆ ಸೇರಲಿದೆ. ಬೊಮ್ಮಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಹತ್ತಿರವಿರುವುದರಿಂದ ಇದು ಬೆಂಗಳೂರಿನ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ದಿಕ್ಸೂಚಿಯಾಗಲಿದೆ.

80000 ಆಸನಗಳು, ದೇಶದಲ್ಲೇ ನಂಬರ್‌ 2

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸೂರ್ಯನಗರ 4ನೇ ಹಂತದಲ್ಲಿ ಗೃಹಮಂಡಳಿಯಿಂದ ನಿರ್ಮಾಣ. 76000ದಿಂದ 80000 ಆಸನ ಸಾಮರ್ಥ್ಯ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ (1.32 ಲಕ್ಷ ಸೀಟು) ನಂತರ ದೇಶದ 2ನೇ ಅತಿದೊಡ್ಡ ಕ್ರೀಡಾಂಗಣ ಎಂಬ ಹಿರಿಮೆ.

ಅಮೆರಿಕದ ಎಟಿ ಅಂಡ್‌ ಟಿ ಸ್ಟೇಡಿಯಂ ಪ್ರೇರಣೆ

ಅಮೆರಿಕದ ಟೆಕ್ಸಾಸ್‌ನಲ್ಲಿರುವ ಅತ್ಯಂತ ಪ್ರಸಿದ್ಧ ಎಟಿ ಅಂಡ್‌ ಟಿ ಸ್ಟೇಡಿಯಂ ಹಾಗೂ ಲ್ಯೂಕಾಸ್‌ ಆಯಿಲ್‌ ಸ್ಟೇಡಿಯಂಗಳ ಮಾದರಿಯಿಂದ ಪ್ರೇರಣೆ ಪಡೆದು ರಾಜ್ಯದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ

ಕರ್ನಾಟಕದ ಪರಂಪರೆ, ಕ್ರಿಕೆಟ್‌ ಇತಿಹಾಸ ಶೋ

ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣದ ಮುಂಭಾಗದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕ್ರಿಕೆಟ್‌ನ ಇತಿಹಾಸ ವಿನ್ಯಾಸ. ದಿಗ್ಗಜ ಆಟಗಾರರ ನೆನಪಿಗಾಗಿ ‘ಹಾಲ್ ಆಫ್ ಫೇಮ್’

2ನೇ ಹಂತದಲ್ಲಿ ಇನ್ನಷ್ಟು ಕ್ರೀಡಾಂಗಣ ನಿರ್ಮಾಣ

ಮೊದಲ ಹಂತದಲ್ಲಿ ಕ್ರಿಕೆಟ್‌ ಸ್ಟೇಡಿಯಂ. 2ನೇ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೊಳ ಹಾಗೂ ಬೃಹತ್‌ ಸಮಾವೇಶ ಸಭಾಂಗಣ ನಿರ್ಮಾಣ. ಇದಕ್ಕೆ ಕೆಎಚ್‌ಬಿ ಸೂರ್ಯ ಕ್ರೀಡಾಗ್ರಾಮ ಎಂದು ನಾಮಕರಣ

ಶಂಕುಸ್ಥಾಪನೆ ವೇಳೆ ನಿವೇಶನಗಳ ಹಂಚಿಕೆ

ಕ್ರಿಕೆಟ್‌ ಸ್ಟೇಡಿಯಂ ಶಂಕುಸ್ಥಾಪನೆ ವೇಳೆ ಗೃಹಮಂಡಳಿಯ ನಿವೇಶನಗಳು ‘ನಮ್ಮ ಮನೆ’ ಯೋಜನೆಯಡಿ ಹಂಚುವುದಕ್ಕೆ ಚಾಲನೆ. ಜತೆಗೆ ‘ಸೂರ್ಯ ಶೈನ್’ ಮತ್ತು ‘ಸೂರ್ಯ ಡಿವೈನ್’ ವಸತಿ ಸಮುಚ್ಚಯ ನಿರ್ಮಾಣಕ್ಕೆ ಚಾಲನೆ. ವಸತಿ ಯೋಜನೆಗೆ ಭೂಮಿ ನೀಡಿದ ಭೂಮಾಲೀಕರಿಗೆ ಸಾಂಕೇತಿಕವಾಗಿ ನಿವೇಶನಗಳ ಹಂಚಿಕೆ, ಲಾಟರಿ ಮುಖಾಂತರ ಸಾರ್ವಜನಿಕ ಅರ್ಜಿದಾರರಿಗೆ ನಿವೇಶನಗಳು ಇದೇ ವೇಳೆ ಹಂಚಿಕೆ.

ಎಲ್ಲಿ? ಯಾವಾಗ? ಶಂಕು ಯಾರಿಂದ?

ಬೆಂಗಳೂರಿನ ಆನೇಕಲ್‌ ತಾಲೂಕಿನ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದ 4ನೇ ಹಂತದಲ್ಲಿರುವ, ಬೊಮ್ಮಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಹತ್ತಿರವಿರದಲ್ಲಿರುವ ಇಂಡ್ಲವಾಡಿ ಗ್ರಾಮದಲ್ಲಿ. ಇಂದು ಬೆಳಗ್ಗೆ 11 ಗಂಟೆಗೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಸೇರಿ ಇನ್ನಿತರ ಗಣ್ಯರು ಭಾಗಿ.