ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಶಾಲೆಯೊಂದರಲ್ಲಿ, ಪರೀಕ್ಷೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ನಂತರ ಆರೋಪಿ ವಿದ್ಯಾರ್ಥಿ ಶಿಕ್ಷಕಿಗೆ ಬೆದರಿಕೆ ಹಾಕಿದ್ದಾನೆ.

ಶಿಕ್ಷಕಿ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ

ಗುರುದೇವೋಭವ ಎಂಬ ಉಕ್ತಿ ಇದೆ. ಹಿಂದೆ ಗುರು ಮುಂದೆ ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ಪಕ್ಕಾ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿಯ ಮೇಲೆಯೇ ವಿದ್ಯಾರ್ಥಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಶಾಲೆಗೆ ತಡವಾಗಿ ಬಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ 12ನೇ ಕ್ಲಾಸ್ ವಿದ್ಯಾರ್ಥಿ ಶಿಕ್ಷಕಿಯ ಮೇಲೆಯೇ ಹಲ್ಲೆ ಮಾಡಿದ್ದಾನೆ. ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಜನವರಿ 24ರಂದು ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕಿ ಮೇಲೆ ಹಲ್ಲೆ ಮಾಡಿದ ಆರೋಪಿ ವಿದ್ಯಾರ್ಥಿಯನ್ನು 18 ವರ್ಷದ ಮೊಹಮ್ಮದ್ ಖಾನ್ ಅನ್ಸಾರಿ ಎಂದು ಗುರುತಿಸಲಾಗಿದೆ.

12 ನೇ ತರಗತಿ ಅಂದರೆ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ ಶಾಲೆಗೆ ಲೇಟಾಗಿ ಬಂದಿದ್ದು, ಇದನ್ನು ಪ್ರಶ್ನೆ ಮಾಡಿದ ಮಹಿಳಾ ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ್ದಾನೆ. ಪಂಚಮಹಲ್ ಜಿಲ್ಲೆಯ ಶೇರಾ ಪಟ್ಟಣದ ಎಸ್‌ಜೆ ದೇವ್ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಪರೀಕ್ಷೆಗೆ ವಿದ್ಯಾರ್ಥಿ ತಡವಾಗಿ ಬಂದಿದ್ದಾನೆ. ಈ ವೇಳೆ ಮಹಿಳಾ ಮೇಲ್ವಿಚಾರಕರು ಏಕೆ ತಡವಾಗಿ ಬಂದಿದ್ದೀರಿ ಎಂದು ಕೇಳಿದಾಗ, ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ ಕೋಪಗೊಂಡಿದ್ದು,. ಮನೆಯಲ್ಲೇ ಯಾರೂ ನನ್ನನ್ನು ಪ್ರಶ್ನಿಸುತ್ತಿಲ್ಲ ಹೀಗಿರುವಾಗ ಪ್ರಶ್ನಿಸಲು ನೀವು ಯಾರು ಎಂದು ಶಿಕ್ಷಕಿಗೆ ಹೇಳಿ ಕೆನ್ನೆಗೆ ಬಾರಿಸಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಈ ವಿಷಯ ಬೆಳಕಿಗೆ ಬಂದಿದ್ದು, ಫೆಬ್ರವರಿ 3 ರಂದು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಪೂರ್ವಜರ ಊರಿಗೆ ಭೇಟಿ ನೀಡಿ ಪೂರ್ವಾಶ್ರಮದ ತಾಯಿಯ ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ

ಸಿಸಿಟಿವಿ ದೃಶ್ಯಾವಳಿಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ ವೇಳೆ ಆರೋಪಿ ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ ಕ್ಲಾಸ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಈ ವೇಳೆ ಶಿಕ್ಷಕಿ ಆತನ ಬಳಿ ಲೇಟಾಗಿ ಬಂದಿರುವುದಕ್ಕೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಆತ ಶಿಕ್ಷಕಿ ಎಂಬುದನ್ನು ನೋಡದೇ ಟೀಚರ್ ಕೆನ್ನೆಗೆ ಬಾರಿಸಿ ಅವರನ್ನು ದೂರ ತಳ್ಳಿದ್ದಾನೆ. ಹೊಡೆತದ ರಭಸಕ್ಕೆ ಶಿಕ್ಷಕಿ ದೂರ ಹೋಗಿ ಮೇಜಿನ ಮೇಲೆ ಬಿದ್ದಿದ್ದಾರೆ. ಕೂಡಲೇ ತರಗತಿಯಲ್ಲಿ ಇದ್ದ ಇತರ ವಿದ್ಯಾರ್ಥಿಗಳು ಎದ್ದು ನಿಂತು ಆರೋಪಿ ಬಳಿ ಬಂದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆಯ ವಿಡಿಯೋ ವೈರಲ್ ಆದ ನಂತರ, ಈ ವಿಷಯದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅದೇ ದಿನ ಆರೋಪಿ ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ ತಂದೆ, ಹಲ್ಲೆಗೊಳಗಾದ ಮಹಿಳಾ ಶಿಕ್ಷಕಿ ಹಾಗೂ ಶಾಲೆಯ ಪ್ರಾಂಶುಪಾಲರಲ್ಲಿ ಕ್ಷಮೆಯಾಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಲಾಸಲ್ಲೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಹತ್ಯೆ: ಅದೇ ಪಿಸ್ತೂಲ್‌ನಿಂದ ಗುಂಡಿಕ್ಕಿಕೊಂಡು ತಾನೂ ಸಾವಿಗೆ ಶರಣಾದ ಕಾನೂನು ವಿದ್ಯಾರ್ಥಿ

ಆದರೆ, ಜನವರಿ 27 ರಂದು ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ ಮತ್ತೆ ತನ್ನ ತಂದೆ ಮತ್ತು ಇತರ 15 ರಿಂದ 20 ಜನರೊಂದಿಗೆ ಶಾಲೆಗೆ ಬಂದು ಶಿಕ್ಷಕಿಗೆ ಮತ್ತೆ ಬೆದರಿಕೆ ಹಾಕಿದ್ದಾನೆ. ನೀವು ನಗರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೀರಿ. ನಾವು ನಿಮ್ಮನ್ನು ಮತ್ತೆ ನೋಡಿಕೊಳ್ಳುತ್ತೇವೆ ಎಂದು ಆತ ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆ ಹಾಕಿದ ಆತ ಪೊಲೀಸರ ವಿಚಾರಣೆ ಸಮಯದಲ್ಲಿ ತಾನು ಶಿಕ್ಷಕಿ ಮತ್ತು ಶಾಲಾ ಸಿಬ್ಬಂದಿಗೆ ಕ್ಷಮೆಯಾಚಿಸಲು ತನ್ನ ಸಹಚರರೊಂದಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 18 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ಶುಕ್ರವಾರ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.