ರಮೇಶ್ ನನ್ನ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್
ಆತ ಆಪ್ತ ಸಹಾಯಕನಾಗಿಯಷ್ಟೇ ಕೆಲಸ ಮಾಡುತ್ತಿದ್ದ| ರಮೇಶ್ ನನ್ನ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್
ಬೆಂಗಳೂರು[ಅ.14]: ನಮ್ಮ ವ್ಯವಹಾರವನ್ನು ಆಪ್ತ ಸಹಾಯಕ ರಮೇಶ್ ನೋಡಿಕೊಳ್ಳುತ್ತಿದ್ದರು ಎಂಬುದು ಸುಳ್ಳು. ಒಬ್ಬ ಆಪ್ತ ಸಹಾಯಕ ವ್ಯವಹಾರ ನೋಡಿಕೊಳ್ಳಲು ಆಗುತ್ತದೆಯೇ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಭಾನುವಾರ ಸದಾಶಿವನಗರ ದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅವರನ್ನು ವಿಚಾರಣೆಗಾಗಿ ಐಟಿ ಅಧಿಕಾರಿಗಳು ಕರೆದುಕೊಂಡು ಹೊರಗೆ ಹೋದರು. ಎಲ್ಲಿ ಹೋದರು, ಏನು ವಿಚಾರಣೆ ಮಾಡಿದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.
'ರಮೇಶ್ ಸಾವಿಗೆ ವಿತ್ತ ಸಚಿವೆ ಕಾರಣ, ರಾಜ್ಯಕ್ಕೆ ಬಂದ್ರೆ ಬಹಿಷ್ಕಾರ'
ವಿಚಾರಣೆ ಬಳಿಕ, ವಿಚಾರಣೆ ಮುಗಿದಿದ್ದು ಮನೆಗೆ ಹೋಗುತ್ತಿರುವುದಾಗಿ ರಮೇಶ್ ಕರೆ ಮಾಡಿ ಮನೆಗೆ ಹೋಗಿ ಬರುತ್ತೀನಣ್ಣ ಎಂದಿದ್ದ. ಅದೇ ರಮೇಶ್ನ ಕೊನೆ ಮಾತು ಎಂದು ನೋವು ತೋಡಿಕೊಂಡರು.
ಆಪ್ತ ಸಹಾಯಕನಾಗಿದ್ದ ರಮೇಶ್ ತುಂಬಾ ಒಳ್ಳೆಯ ಹುಡುಗ ಹಾಗೂ ಪ್ರಾಮಾಣಿಕ. ನಮ್ಮ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ವಿಚಾರಣೆ ಆಗುತ್ತಿದ್ದಾಗ ಎರಡು ದಿನ ರಮೇಶ ಹಾಗೂ ಕೇಶವ ಇಬ್ಬರೂ ನಮ್ಮ ಮನೆಯಲ್ಲೇ ಇದ್ದರು. ಆದಾಯ ತೆರಿಗೆ ಅಧಿಕಾರಿಗಳು ರಮೇಶ್ ಅವರನ್ನು ಕರೆದುಕೊಂಡು ಹೋದ ಬಳಿಕವೂ ಧೈರ್ಯ ವಾಗಿರು ಏನೂ ಆಗುವುದಿಲ್ಲ ಎಂದು ಹೇಳಿದ್ದೆ. ರಮೇಶ್ ನಮ್ಮ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದನೇ ಹೊರತು ಬೇರೆನೂ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏನು ಪ್ರಶ್ನೆ ಕೇಳಿದರು ಎಂಬುದು ಗೊತ್ತಿಲ್ಲ. ಒಬ್ಬ ಆಪ್ತ ಸಹಾಯಕ ವ್ಯವಹಾರ ನೋಡಿಕೊಳ್ಳುತ್ತಾನೆ ಎಂದರೆ ನಂಬುವುದಕ್ಕೆ ಆಗುತ್ತದೆಯೇ ಎಂದು ಹೇಳಿದರು.
ರಮೇಶ ಆತ್ಮಹತ್ಯೆ ಪ್ರಕರಣ ತಿರುಗಿಸೋ ಹುನ್ನಾರ: ಶೆಟ್ಟರ್