Asianet Suvarna News Asianet Suvarna News

Raita Ratna Award 2022: ತಿರುಮಲೇಶ್ವರ ಭಟ್ಟರ ಪ್ರಯೋಗಶೀಲ ಕೃಷಿ

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಸುಳ್ಯ ತಾಲೂಕು, ಕೊಡಿಯಾಲ ಗ್ರಾಮದ ಪ್ರಯೋಗಶೀಲ ಕೃಷಿಕ ತಿರುಮಲೇಶ್ವರ ಭಟ್‌ ಕುರಿಯಾಜೆ ಅವರಿಗೆ ಸಂದಿದೆ. ಸಾಧಕ ರೈತರಿಗೆ ಗೌರವ ಸಮರ್ಪಣೆ.

Raita Ratna Award 2022 Farming category winner Tirumaleshwar Bhat Kuriyaje from Dakshina Kannada gvd
Author
Bangalore, First Published Apr 20, 2022, 10:37 PM IST

ಚಿತ್ರಾ ಸಿ.ಆರ್‌.

ಮನೆಯಂಗಳ, ತೋಟವನ್ನೇ ಕೃಷಿಯ ಪ್ರಯೋಗಶಾಲೆ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ತಿರುಮಲೇಶ್ವರ ಭಟ್‌ ಕುರಿಯಾಜೆ. ಇವರ ಅಂಗಳಕ್ಕೆ ಅಡಿ ಇಟ್ಟರೆ ಭಟ್ಟರ ಕೃಷಿಯ ಝಲಕ್‌ ಕಾಣ ಸಿಗುತ್ತದೆ. ಇಲ್ಲಿನ ಅತ್ಯಾಕರ್ಷಕ ಉದ್ಯಾನದಿಂದ ಇವರ ಮನೆ ಜನಾಕರ್ಷಣೀಯ ಕೇಂದ್ರವಾಗಿದೆ.

ಹತ್ತನೇ ತರಗತಿ ಓದಿದ ವ್ಯಕ್ತಿಯೊಬ್ಬರು ದೇಶ- ವಿದೇಶ ಸುತ್ತಿ ಅಲ್ಲಿ ಬೆಳೆಯುವ ಹಣ್ಣಿನ ಗಿಡಗಳು, ವಾಣಿಜ್ಯ ಬೆಳೆಯನ್ನು ತನ್ನ ಮನೆಯಂಗಳದಲ್ಲಿ ಬೆಳೆದು, ಉದ್ಯಾನವನ್ನೇ ಮಾಡಿರುವುದು ಸಣ್ಣ ಸಾಧನೆಯಲ್ಲ. ಕೃಷಿ ಪರಂಪರೆಯಲ್ಲಿ ಬೆಳೆದು ಬಂದ ಭಟ್ಟರು, ಕೃಷಿಯಲ್ಲಿ ಆಧುನಿಕತೆ, ಹೊಸತನವನ್ನು ರೂಢಿಸಿಕೊಂಡವರು. ಇದೀಗ ಸರಿಯಾದ ಆರೈಕೆ ಮಾಡಿದರೆ ನಮ್ಮ ಮಣ್ಣಿನಲ್ಲೂ ಹೊರ ರಾಜ್ಯ, ಹೊರ ದೇಶಗಳ ಹಣ್ಣನ್ನು ಬೆಳೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಮನೆಯವರು ಸಾಥ್‌ ನೀಡಿದ್ದು, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಉದ್ಯೋಗ ತೊರೆದು ಬಂದಿರುವ ಇವರ ಪುತ್ರ ವಿಜಯೇಶ್ವರ ಭಟ್‌ ತಂದೆಯ ಹಾದಿಯನ್ನೇ ಹಿಡಿದ್ದಾರೆ.

Raita Ratna Award 2022: ರೈತರಿಗಾಗಿ ಕೃಷಿ ಯಂತ್ರೋಪಕರಣ ನಿರ್ಮಿಸುವ ಎನ್‌.ಕೆ. ಆಕಾಶ್‌

ತಿರುಮಲೇಶ್ವರ ಭಟ್ಟರು ರೂಪಿಸಿರುವ ಖಾಸಗಿ ಗಾರ್ಡನ್‌ನಲ್ಲಿ ಹಲವು ವೈವಿಧ್ಯಗಳಿವೆ. ವಿವಿಧ ಜಾತಿಯ ಆರ್ಕಿಡ್‌ಗಳು, ಅಂಥೋರಿಯಂ, ಕ್ಯಾಕ್ಟಸ್‌ ಅಥವಾ ಕಳ್ಳಿ ಗಿಡ ಇತ್ಯಾದಿ ಅಲಂಕಾರಿಕ ಗಿಡಗಳು ಮೈದಳೆದಿವೆ. ಇವರು ಕೇರಳ, ಉತ್ತರ ಭಾರತ, ಮಲೇಷಿಯಾ, ಥಾಯ್ಲೆಂಡ್‌, ನೇಪಾಳಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಕಂಡ ಸುಂದರ ಗಿಡಗಳನ್ನ ತರುತ್ತಿದ್ದರು. ಹೀಗೆ ಸಂಗ್ರಹಿಸಿದ ಗಿಡಗಳಿಂದ ಇವರ ಮನೆಯಂಗಳ ಅಪರೂಪದ ಗಾರ್ಡನ್‌ ಸ್ವರೂಪ ಪಡೆದಿದೆ. ಸುಮಾರು 250ಕ್ಕೂ ಅಧಿಕ ಕ್ಯಾಕ್ಟಸ್‌ ಗಿಡಗಳಿವೆ. ಗಾರ್ಡನ್‌ನಲ್ಲಿ ತಾವರೆ ಕೊಳ, ಕಾವೇರಿ ದೇವಿಯ ಮೂರ್ತಿ, ವಿವಿಧ ರೀತಿಯ ಮೂರ್ತಿಗಳು, ಆಕರ್ಷಕ ವಿನ್ಯಾಸದಲ್ಲಿ ರೂಪಿಸಿರುವ ವಿವಿಧ ತಳಿಯ ಅಲಂಕಾರಿಕ ಗಿಡಗಳು ಮನಸೆಳೆಯುತ್ತವೆ. ಮನಮೋಹಕವಾದ ಕಲ್ಲುಗಳ ಸಂಗ್ರಹ ಈ ಗಾರ್ಡನ್‌ನ ಮತ್ತೊಂದು ವೈಶಿಷ್ಟ್ಯ.

ಗ್ರಾಮೀಣ ಭಾಗದಲ್ಲಿರುವ ಅಪರೂಪದ ಈ ಉದ್ಯಾವನವನ್ನು ನೋಡಲು,ಸುತ್ತಲಿನ ಜನರು ತಿರುಮಲೇಶ್ವರ ಭಟ್‌ ಅವರ ಮನೆಗೆ ಬರುತ್ತಿರುತ್ತಾರೆ. ಭಟ್ಟರು ಕಳೆದ 20 ವರ್ಷಗಳಿಂದ ಈ ತೋಟಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಸ್ವತಃ ತಾವೇ ಗಿಡಗಳಿಗೆ ಹೊಸರೂಪ ನೀಡಿದ್ದಾರೆ. ಗಿಡಗಳ ಕಟ್ಟಿಂಗ್‌ಗಾಗಿ ಗಾರ್ಡನ್‌ ತಜ್ಞರನ್ನು ಅವಲಂಬಿಸದೇ, ತಮ್ಮಿಷ್ಟದ ಕಲ್ಪನೆಯ ರೂಪ ಕೊಟ್ಟಿದ್ದಾರೆ. ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

200ಕ್ಕೂ ಅಧಿಕ ಹಣ್ಣಿನ ಗಿಡಗಳು: ರಂಬುಟಾನ್‌, ಮ್ಯಾಂಗೊಸ್ಟಿನ್‌, ಡುರಿಯಾನೋ, ಲಾಂಗಾನ್‌ ಹೀಗೆ ಸುಮಾರು 200ಕ್ಕೂ ಅಧಿಕ ದೇಶ ವಿದೇಶಗಳ ಅಪರೂಪದ ಹಣ್ಣುಗಳನ್ನು ಇವರು ಬೆಳೆದಿದ್ದಾರೆ. ಸುಮಾರು 20 ಬಗೆಯ ಹಲಸು ಹಾಗೂ 20 ಬಗೆಯ ತಳಿಯ ಮಾವಿನ ಮರಗಳು ಇವರಲ್ಲಿವೆ. ಸಾವಿರ ಕದಳಿ ಬಾಳೆ ವಿಶೇಷವಾದದ್ದು. ಇಂಡೋನೇಶಿಯಾದಿಂದ ವಿಭಿನ್ನ ತಳಿಯ ಬಾಳೆ ಗಿಡವನ್ನು ತಂದು ಫಲ ಕಂಡಿದ್ದಾರೆ. ಅಡಕೆ ತೆಂಗು, ಬಾಳೆ, ಕಾಳುಮೆಣಸು, ರಬ್ಬರ್‌ ಬೆಳೆದಿದ್ದಾರೆ. ದೇಸಿ ಗೋ ಸಾಕಣೆ, ತೋಟದಲ್ಲಿ ನೀರಿಂಗಿಸುವಿಕೆ ಹೀಗೆ 8 ಎಕರೆ ತೋಟದಲ್ಲಿ ಮಿಶ್ರ ಬೆಳೆಗಳ ಮಾದರಿ ಕೃಷಿ ಇವರದ್ದು.

ಅಡಕೆಯಲ್ಲಿ ಹೊಸ ಪ್ರಯೋಗ: ಅಡಕೆ ಗಿಡಗಳನ್ನು 9x9 ಅಡಿ ಅಂತರದ ಗುಂಡಿಗಳಲ್ಲಿ ನೆಡುವುದು ಸಾಮಾನ್ಯ. ಆದರೆ ಇವರು 30 ಅಡಿ ಅಂತರದಲ್ಲಿ ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ನಾಲ್ಕು ಅಡಿ ಆಳ ಮತ್ತು ಅಗಲದ ಗುಂಡಿ ತೋಡಿ ಮೂರು ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ಅಡಕೆ ಗಿಡಗಳ ಮಧ್ಯದಲ್ಲಿರುವ ಅಂತರದ ಜಾಗದಲ್ಲಿ ಹಲವಾರು ವಿದೇಶಿ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಇವೆಲ್ಲವೂ ಫಲ ನೀಡುತ್ತಿವೆ. ಮಳೆ ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನೂ ಕಾಪಾಡಿಕೊಂಡಿದ್ದಾರೆ. ಇವರ ಈ ಸಾಧನೆಗೆ ರಾಜ್ಯ ಕೃಷಿ ಪಂಡಿತ, ತಾಲೂಕು ಕೃಷಿ ಪಂಡಿತ ಪ್ರಶಸ್ತಿ, ಕೃಷಿ ರತ್ನ ಪ್ರಶಸ್ತಿ, ಕೃಷಿ ಕಂಠೀರವ ಪ್ರಶಸ್ತಿ, ದ.ಕ. ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಅರಸಿ ಬಂದಿವೆ.

Raita Ratna 2022: ಯುವಕರಿಗೆ ಕೃಷಿಯ ದಾರಿ ತೋರಿದ ಗಣೇಶ್‌ ಖಾರ್ವಿ

ರೈತರತ್ನ ಪ್ರಶಸ್ತಿ ಖುಷಿ ಕೊಟ್ಟಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯೇ ವಿಶೇಷವಾಗಿದೆ. ಎಲ್ಲ ಕ್ಷೇತ್ರಗಳಿಗೂ ಪ್ರಾಧಾನ್ಯತೆ ನೀಡಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ರೀತಿ ಪ್ರಶಸ್ತಿ ನೀಡಿ ಗುರುತಿಸಿದಾಗ ಅದು ಯುವಜನಾಂಗಕ್ಕೆ ಸ್ಫೂರ್ತಿ ನೀಡಿ ಅವರು ಕೃಷಿಯಲ್ಲಿ ತೊಡಗುವಂತೆ ಪ್ರೇರೇಪಿಸಿದರೆ ನಮ್ಮ ಸಾಧನೆ- ನಿಮ್ಮ ಈ ಕಾರ್ಯ ಎರಡೂ ಸಾರ್ಥಕವಾಗುತ್ತದೆ.
-ತಿರುಮಲೇಶ್ವರ ಭಟ್‌ ಕುರಿಯಾಜೆ

"

Follow Us:
Download App:
  • android
  • ios