ಬೆಂಗಳೂರಿನ ಮಲ್ಲಸಂದ್ರದಲ್ಲಿ ಖಾಸಗಿ ಬಿಲ್ಡರ್‌ಗೆ ನಕಲಿ ಪಿಐಡಿ ಸಂಖ್ಯೆ ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿ ಪಶ್ಚಿಮ ವಲಯದ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎನ್.ಆರ್.ರಮೇಶ್ ನೀಡಿದ ದೂರಿನ ಅನ್ವಯ, 48 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು (ಫೆ.14) ನಗರದ ಮಲ್ಲಸಂದ್ರ ಗ್ರಾಮದಲ್ಲಿ ಖಾಸಗಿ ಬಿಲ್ಡರ್‌ ಸತೀಶ್ ಸಿ.ಜೆ. ಎಂಬುವರ ಮಾಲೀಕತ್ವದ ಸ್ವತ್ತುಗಳಿಗೆ ನಕಲಿ ಪಿಐಡಿ ಸಂಖ್ಯೆಯನ್ನು ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ ಜಿಬಿಎ ಪಶ್ಚಿಮ ನಗರ ಪಾಲಿಕೆಯ ನಾಲ್ವರು ಅಧಿಕಾರಿಗಳಿಗೆ ಹೆಚ್ಚುವರಿ ಆಯುಕ್ತರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶ್ಚಿಮ ನಗರ ಪಾಲಿಕೆ ವಲಯ-1ರ ಉಪ ಆಯುಕ್ತ ಅಬ್ದುಲ್ ರಬ್, ಜಂಟಿ ಆಯುಕ್ತೆ ಆರತಿ ಆನಂದ, ವಾರ್ಡ್ 198ರ ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ಹಾಗೂ ಕಂದಾಯ ಪರಿವೀಕ್ಷಕ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 48 ತಾಸುಗಳ ಒಳಗೆ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗೆ ಶಿಫಾರಸು ಮಾಡಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬಿಡಿಎ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್‌ನ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರ ಗ್ರಾಮದಲ್ಲಿನ ಚೆನ್ನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ 10.20 ಎಕರೆ ಜಾಗಕ್ಕೆ ಆರೋಪಿತ ಅಧಿಕಾರಿಗಳು ಲಂಚ ಪಡೆದು ನಕಲಿ ಪ್ರಾಪರ್ಟಿ ಐಡೆಂಟಿಫಿಕೇಶನ್ ನಂಬರ್ (ಪಿಐಡಿ) ನೀಡಿದ್ದಾರೆ. ಪಿಐಡಿ ಸಂಖ್ಯೆ ಆಧಾರದ ಮೇಲೆ ಎ ಖಾತಾ ಮಾಡಿಕೊಟ್ಟಿದ್ದಾರೆ. ಈ ಕಾನೂನುಬಾಹಿರ ಕೆಲಸಕ್ಕೆ ಕೋಟ್ಯಂತರ ರು. ಲಂಚ ಪಡೆದಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಲೋಕಾಯುಕ್ತ ಸಂಸ್ಥೆ ಹಾಗೂ ಜಿಬಿಎಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

YouTube video player