ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿನಂತೆ ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳವೊಂದು ಪುಟ್ಟ ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಅಣ್ಣನ ಮಗನನ್ನೇ ಚಿಕ್ಕಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಅಮ್ಮನ ರಕ್ಷಣೆಗೆ ಬಂದ ಮಗನನ್ನೇ ಚಾಕುವಿನಿಂದ ಇರಿದು ಕೊಂದ ಚಿಕ್ಕಪ್ಪ

ರಾಯಚೂರು: ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿನಂತೆ ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳವೊಂದು ಪುಟ್ಟ ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಅಣ್ಣನ ಮಗನನ್ನೇ ಚಿಕ್ಕಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆಸ್ತಿಗೆ ಸಂಬಂಧಿಸಿದಂತೆ ಅತ್ತಿಗೆಯ ಜೊತೆ (ಅಣ್ಣನ ಹೆಂಡತಿ) ಜೊತೆ ಮೈದುನ ಜಗಳಕ್ಕೆ ಬಂದಿದ್ದಾನೆ. ಚಾಕು ಹಿಡಿದುಕೊಂಡು ಅತ್ತಿಗೆಗೆ ಇರಿಯಲು ಬಂದಾಗ ಅಣ್ಣನ ಮಗ ತನ್ನ ತಾಯಿಯ ರಕ್ಷಣೆಗೆ ಎದುರು ಹೋಗಿದ್ದು, ಈ ವೇಳೆ ಚಾಕು ಬಾಲಕನಿಗೆ ಇರಿಯಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಬಾಲಕನ ತಾಯಿ ತೀವ್ರ ಆಘಾತಗೊಂಡಿದ್ದು, ಮಗನ ಕಳೆದುಕೊಂಡು ಗೋಳಾಡುತ್ತಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

4 ಎಕರೆ ಭೂಮಿಗಾಗಿ ರಕ್ತಪಾತ; ದಾಯಾದಿಗಳ ಜಗಳಕ್ಕೆ ಬಲಿಯಾದ 12 ವರ್ಷದ ಬಾಲಕ

ಮೃತಪಟ್ಟ ಬಾಲಕನನ್ನು 12 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತಾಯಿ ಅಮೃತಾಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜ್ ಆಸ್ತಿಗಾಗಿ ಅಣ್ಣನ ಮಗನನ್ನೇ ಕೊಲೆ ಮಾಡಿದ ಆರೋಪಿ. ಅಮೃತಾ ಪತಿ ಸಿದ್ಧಪ್ಪ ಹಾಗೂ ಆರೋಪಿ ಬಸವರಾಜ್ ಅಣ್ಣ ತಮ್ಮಂದಿರಾಗಿದ್ದಾರೆ. ಇವರಿಬ್ಬರ ಮಧ್ಯೆ ಪಿತ್ರಾರ್ಜಿತವಾಗಿ ಬಂದ 4 ಎಕರೆ ಕೃಷಿ ಭೂಮಿಯ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿದ್ದು, ಗಲಾಟೆ ನಡೆದಿತ್ತು.

ಅತ್ತಿಗೆಯ ಮೇಲೆ ಹಲ್ಲೆ, ಅಣ್ಣನ ಮಗನ ಹತ್ಯೆಗೈದ ಪಾಪಿ ಬಸವರಾಜ

ಇದೇ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ಸಿದ್ದಪ್ಪ ಮನೆಯಲ್ಲಿ ಇಲ್ಲದ ವೇಳೆ ತಮ್ಮ ಬಸವರಾಜ್ ಜಗಳ ತೆಗೆದಿದ್ದಾನೆ. ಅತ್ತಿಗೆ ಅಮೃತಾ ಜೊತೆ ಜಗಳ ಮಾಡುತ್ತಾ ಅತ್ತಿಗೆಗೆ ಚಾಕು ಇರಿದಿದ್ದಾನೆ. ಈ ಗಲಾಟೆ ವೇಳೆ ಅಮೃತಾ ಪುತ್ರ ನಾಗರಾಜ್ ಅಮ್ಮನ ರಕ್ಷಣೆಗೆ ಬಂದಿದ್ದು, ಆತನಿಗೂ ಚಿಕ್ಕಪ್ಪ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಅಮ್ಮನ ರಕ್ಷಣೆಗೆ ಹೋದ ಮಗ ಜೀವ ಬಿಟ್ಟಿದ್ದಾನೆ. ಘಟನೆಯ ಬಳಿಕ ಆರೋಪಿ ಬಸವರಾಜ್ ಪರಾರಿಯಾಗಿದ್ದು, ಮಗನ ಕಳೆದುಕೊಂಡ ಅಮ್ಮನ ಗೋಳಾಟ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಹೊರಬರಲು ದರ್ಶನ್ ಕಸರತ್ತು: ದರ್ಶನ್‌ ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ?