Asianet Suvarna News Asianet Suvarna News

Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ. ಈ ಅಕ್ಷರ ಜಾತ್ರೆಯ ಅಧ್ಯಕ್ಷನಾಗಿರುವುದು ತಮ್ಮ ಸಾಹಿತ್ಯ ತಪಸ್ಸಿನ ಫಲವಾಗಿದೆ ಎಂದು ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ದೊಡ್ಡರಂಗೇಗೌಡ ಬಣ್ಣಿಸಿದರು. 

Prof Doddarangegowda Talks Over Haveri Kannada Sahitya Sammelana gvd
Author
First Published Jan 6, 2023, 7:43 AM IST

ಹಾವೇರಿ (ಜ.06): ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ. ಈ ಅಕ್ಷರ ಜಾತ್ರೆಯ ಅಧ್ಯಕ್ಷನಾಗಿರುವುದು ತಮ್ಮ ಸಾಹಿತ್ಯ ತಪಸ್ಸಿನ ಫಲವಾಗಿದೆ ಎಂದು ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ದೊಡ್ಡರಂಗೇಗೌಡ ಬಣ್ಣಿಸಿದರು. ಗುರುವಾರ ಸಂಜೆ ಪುರ ಪ್ರವೇಶ ಮಾಡಿದ ವೇಳೆ ಜಿಲ್ಲಾಡಳಿತದಿಂದ ಸನ್ಮಾನ ಸ್ವೀಕರಿಸಿ, ಬಳಿಕ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾವೇರಿ ನೆಲವು ಕವಿ ಸರ್ವಜ್ಞ ಹಾಡಿದ, ಕನಕದಾಸರು ನಡೆದಾಡಿದ ನೆಲ. ಗಳಗನಾಥರಂಥವರಿಗೆ ರಂಗಭೂಮಿಕೆಯಾಗಿದೆ. ಸಾಕಷ್ಟು ವಿರೋಧಗಳ ನಡುವೆಯೂ ದಾರ್ಶನಿಕರು ಸಾಹಸ ತೋರಿದ ನೆಲದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. 

ಹಾವೇರಿ ನೆಲ, ಜಲದಲ್ಲಿ ತನ್ನದೇ ವಿಶೇಷತೆ ಇದೆ. ಈ ಹಿಂದೆ ತಾವು ಶರೀಫರ ಸಮಾಧಿಯನ್ನು ನೋಡಲು ಹಾವೇರಿಗೆ ಬಂದಿದ್ದನ್ನು, ನಿಮ್ಮ ಅಗಾಧ ಸಾಹಿತ್ಯದ ಒಂದು ಸಣ್ಣ ಕಿಡಿಯು ನನಗೂ ತಾಗಲಿ ಎಂದು ಶರೀಫರಲ್ಲಿ ಸಂಕಲ್ಪ ಮಾಡಿಕೊಂಡಿದ್ದನ್ನು ಸ್ಮರಿಸಿದರು. ಗ್ರಾಮೀಣ ಭಾಗದಲ್ಲಿನ ಸಂತೆಗಿರುವ ಮಹತ್ವವೇ ಅಕ್ಷರ ಜಾತ್ರೆಗೂ ಇದೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ ಸಮ್ಮಿಲನವಾಗಲಿದೆ. ಇದು ಓದುಗರ ಸಮ್ಮೇಳನ. ಎಷ್ಟೋ ಜನರು ಕವಿಗಳನ್ನು ನೋಡಲಿಕ್ಕೆ, ಕವಿಗಳೊಂದಿಗೆ ಮಾತನಾಡಲು ಬರುತ್ತಾರೆ. ಇಂತಹ ಕನ್ನಡಾಭಿಮಾನಿಗಳ ಪ್ರೀತಿಯನ್ನು ವರ್ಣಿಸಲು ಆಗದು ಎಂದು ಅವರು ತಿಳಿಸಿದರು.

Kannada Sahitya Sammelana: 3 ದಿನಗಳ ಹಾವೇರಿ ಅಕ್ಷರ ಜಾತ್ರೆಗೆ ನಾಳೆ ಚಾಲನೆ

ಮರಾಠಿಗರಿಗೆ ತಿಳಿ ಹೇಳಬೇಕು: ಬೆಳಗಾವಿ ನಮ್ಮದು ಅನ್ನುವ ಮರಾಠಿ ಜನರ ತಪ್ಪು ತಿಳಿವಳಿಕೆ ಕಂಡು ಅವರಿಗೆ ತಿಳಿ ಹೇಳಬೇಕು ಅನಿಸುತ್ತದೆ. ಕನ್ನಡಿಗರ ನೆಲವಾಗಿರುವ ಬೆಳಗಾವಿಯನ್ನು ಬಿಟ್ಟುಕೊಟ್ಟರೆ ನಮ್ಮ ವ್ಯಕ್ತಿತ್ವ ಮಾರಿಕೊಂಡ ಹಾಗೆ ಎಂದು ಗಡಿ ತಗಾದೆಯ ಬಗೆಗಿನ ತಮ್ಮ ನಿಲುವನ್ನು ಅವರು ಪ್ರಕಟಿಸಿದರು. ಕಾಸರಗೋಡು ಕೇರಳ ಗಡಿಯ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವಿದೆ. ಆದರೆ, ಅಲ್ಲಿ ಕನ್ನಡ ಬೋಧಿಸಲು ಕನ್ನಡ ಅಧ್ಯಾಪಕರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾನು ಕನ್ನಡಪಂಥೀಯ: ಪರ್ಯಾಯ ಸಾಹಿತ್ಯ ಸಮಾವೇಶವಿರಲಿ, ಇನ್ನಾವುದೇ ಕಾರ್ಯಕ್ರಮವಿರಲಿ ಅದನ್ನು ಮಾಡಲು ಅವರಿಗೆ ಎಲ್ಲ ರೀತಿಯ ಹಕ್ಕಿದೆ. ಭಿನ್ನ ಅಭಿಪ್ರಾಯ ಹೊಂದಿದವರು ಸಹ ನಮ್ಮೊಂದಿಗೆ ಬರಬೇಕು. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿ ಅವನ್ನು ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ನಾನು ಮನವಿ ಮಾಡುತ್ತೇನೆ. ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಬಗ್ಗೆ ತಮಗೆ ಹೆಮ್ಮೆ ಮತ್ತು ಗೌರವ ಇದೆ. ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ ಎಂದು ದೊಡ್ಡರಂಗೇಗೌಡ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Haveri: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಭಕ್ಷ್ಯ ಭೋಜನ: ಈಗಾಗಲೇ ಸಿಹಿ ತಿಂಡಿ ತಯಾರಿ

ಸಾಹಿತ್ಯ ಸಮ್ಮೇಳನದಲ್ಲಿ ಇಂದಿನ ಕಾರ್ಯಕ್ರಮಗಳು
ಧ್ವಜಾರೋಹಣ: ಬೆಳಗ್ಗೆ 7ರಿಂದ 7-30: ಧ್ವಜಾರೋಹಣ ಕಾರ್ಯಕ್ರಮ.

ಮೆರವಣಿಗೆ: ಬೆಳಗ್ಗೆ 7-30ರಿಂದ 10-30ರ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ.

ಸಮಾರಂಭ ಉದ್ಘಾಟನೆ: ಬೆಳಗ್ಗೆ 10-30ಕ್ಕೆ ಸಿಎಂ ಬೊಮ್ಮಾಯಿ ಅವರಿಂದ ಸಮ್ಮೇಳನ ಉದ್ಘಾಟನೆ. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರಿಂದ ಭಾಷಣ.

ಗೋಷ್ಠಿಗಳು-ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ
ಗೋಷ್ಠಿ-1: ಮಧ್ಯಾಹ್ನ 2ರಿಂದ 4ರ ವರೆಗೆ, ಸಾಮರಸ್ಯದ ಭಾವ-ಕನ್ನಡದ ಜೀವ. ಚಿತ್ರದುರ್ಗ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ.

ಗೋಷ್ಠಿ 2​:ಸಂಜೆ 4ರಿಂದ 6ರ ವರೆಗೆ, ಕವಿಗೋಷ್ಠಿ.

ಸಾಧಕರಿಗೆ ಸನ್ಮಾನ: ಸಂಜೆ 6 ರಿಂದ 7

ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು.

ವೇದಿಕೆ-2 ಪಾಪು-ಚಂಪಾ ವೇದಿಕೆ ಹೆಳವನಕಟ್ಟೆಗಿರಿಯ ಮಹಾಮಂಟಪ:

ಗೋಷ್ಠಿ-1-ಹಾವೇರಿ ಜಿಲ್ಲಾ ದರ್ಶನ, ಮಧ್ಯಾಹ್ನ 2ರಿಂದ 4 ಗಂಟೆವರೆಗೆ

ಗೋಷ್ಠಿ-2 ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆ, ಸಂಜೆ 4ರಿಂದ 5 ಗಂಟೆವರೆಗೆ, ಗೋಷ್ಠಿ-3-ಕನ್ನಡ ದಿಗ್ಗಜರು, ಸಂಜೆ 5ರಿಂದ 7 ಗಂಟೆವರೆಗೆ.

ವೇದಿಕೆ-3 ಶ್ರೀ ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆ

ಗೋಷ್ಠಿ-1: ಶತಮಾನ-ಪುರುಷರು ಈ ಮಹನೀಯರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ, 2ರಿಂದ 3-30

ಗೋಷ್ಠಿ-2: ಸಂಕೀರ್ಣ ಗೋಷ್ಠಿ, ಮಧ್ಯಾಹ್ನ 3-30ರಿಂದ 5-15ರ ವರೆಗೆ

ಗೋಷ್ಠಿ-3: ಬೆಳ್ಳಿತೆರೆ-ಕಿರುತೆರೆ, ಸಂಜೆ 5.15ರಿಂದ 7 ಗಂಟೆವರೆಗೆ

ಸಂಜೆ 7ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Follow Us:
Download App:
  • android
  • ios