ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಕೇಸ್‌ ಹಿನ್ನೆಲೆ| ಎಸ್‌ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿ| ಚಾಕು, ಮಚ್ಚುಗಳು ಪತ್ತೆ|ಈ ರೀತಿ ಮಾರಕಾಸ್ತ್ರ ಪತ್ತೆ 2ನೇ ಸಲ| ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌ ಜಪ್ತಿ|ಸಿಎಎ, ಮೋದಿ, ಶಾ ವಿರೋಧಿ ಫಲಕ ವಶಕ್ಕೆ|

ಬೆಂಗಳೂರು(ಸೆ.02): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್‌ಡಿಪಿಐ ಪಕ್ಷದ 3 ಕಚೇರಿಗಳ ಮೇಲೆ ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಹತ್ವದ ದಾಖಲೆಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಮಾರಕಾಸ್ತ್ರ ಜಪ್ತಿ ಆಗುತ್ತಿರುವುದು 2ನೇ ಸಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲಸೂರು ಗೇಟ್‌, ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕೆ.ಜಿ.ಹಳ್ಳಿಯಲ್ಲಿರುವ ಎಸ್‌ಡಿಪಿಐ ಕಚೇರಿಗಳಲ್ಲಿ ಶೋಧ ನಡೆದಿದೆ. ಈ ವೇಳೆ ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್‌ಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕೆ.ಜಿ.ಹಳ್ಳಿ ಕಚೇರಿಯಲ್ಲಿ ಚಾಕು ಹಾಗೂ ಮಚ್ಚುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

‘ಗಲಭೆ ಸಂಬಂಧ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಎಸ್‌ಡಿಪಿಐ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲೆಗಳು ಲಭಿಸಿವೆ’ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಗಲಭೆಗೆ ಬಳಸಿದ್ದ ಮಾರಕಾಸ್ತ್ರ ಗೋದಾಮಿಯಲ್ಲಿ ಜಪ್ತಿ

ಇತ್ತೀಚಿಗೆ ನಡೆದ ಗಲಭೆ ಪ್ರಕರಣದ ಹಿಂದೆ ಎಸ್‌ಡಿಪಿಐ ಪಾತ್ರದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ, ಆ ಪಕ್ಷದ ಬೆಂಗಳೂರು ಘಟಕದ ಕಾರ್ಯದರ್ಶಿ ಮುಜಾಮಿಲ್‌ ಪಾಷ, ಪುಲಿಕೇಶಿ ನಗರದ ಕ್ಷೇತ್ರದ ಅಧ್ಯಕ್ಷ ಅಯಾಜ್‌ ಸೇರಿದಂತೆ ಮತ್ತಿತರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಮೊದಲು ಸಹ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯ ಎಸ್‌ಡಿಪಿಐ ಕಚೇರಿಗಳ ಮೇಲೆ ಕಾರ್ಯಾಚರಣೆ ನಡೆಸಿದ ಮಾರಕಾಸ್ತ್ರಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದರು. ಇದೀಗ ಎರಡನೇ ಬಾರಿಗೆ ದಾಳಿ ನಡೆದಿದ್ದು, ಈಗಲೂ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಸಿಸಿಬಿಯ ಎಸಿಪಿಗಳಾದ ಜಗನ್ನಾಥ್‌ ರೈ, ಗೌತಮ್‌ ಕುಮಾರ್‌ ಹಾಗೂ ವೇಣುಗೋಪಾಲ್‌ ನೇತೃತ್ವದ ತಂಡಗಳು, ಬೆಳಗ್ಗೆ 11 ಗಂಟೆ ಸುಮಾರಿಗೆ ದಾಳಿ ನಡೆಸಿದ್ದವು. ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದು ಹೇಳಿಕೆ ಪಡೆದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳ ಸಮಕ್ಷಮದಲ್ಲಿ ಪಂಚನಾಮೆ ಮಾಡಿಸಿದ್ದಾರೆ.

ಸಿಎಎ ವಿರೋಧಿ ಭಿತ್ತಿ ಪತ್ರಗಳು

ಎಸ್‌ಡಿಪಿಐ ಕಚೇರಿಗಳ ದಾಳಿ ವೇಳೆ ಪೌರತ್ವ ತಿದ್ದುಪಡಿ ವಿರೋಧಿ ಭಿತ್ತಿ ಪತ್ರಗಳು, ಕರಪತ್ರಗಳು, ಪುಸಕ್ತಗಳು ಹಾಗೂ ಕಾನೂನು ಬಾಹಿರ ಕೃತ್ಯ ತಡೆ ಕಾಯ್ದೆ (ಯುಎಪಿಎ) ಬಗ್ಗೆ ಕೃತಿಗಳು ಜಪ್ತಿಯಾಗಿವೆ. ಹಾಗೆಯೇ ಸಿಎಎ ಸಂಬಂಧ ಮಂಗಳೂರು, ದೆಹಲಿಯ ಜಾಮೀಯಾ ಸೇರಿದಂತೆ ಮತ್ತಿತರೆಡೆ ನಡೆದಿದ್ದ ಪ್ರತಿಭಟನೆಗಳ ಭಿತ್ತಿಪತ್ರಗಳು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರೋಧಿಸುವ ಕೆಲವು ಫಲಕಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.