ಬಂಡೀಪುರ ಭೇಟಿ, 15 ಕಿಮೀ ಸಫಾರಿ, ಆಸ್ಕರ್‌ ಗೆದ್ದ ಚಿತ್ರದ ದಂಪತಿಗೆ ಸನ್ಮಾನ, ಹೊಸ ಹುಲಿ ಗಣತಿ ವರದಿ ಬಿಡುಗಡೆ. 

ಮೈಸೂರು/ಚಾಮರಾಜನಗರ(ಏ.09): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಭಾನುವಾರ ಈ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಬಂಡೀಪುರದಲ್ಲಿ 15 ಕಿ.ಮೀ. ಹುಲಿ ಸಫಾರಿ ನಡೆಸಿ, ತರುವಾಯ ಅರಣ್ಯ ಸಿಬ್ಬಂದಿ ಜತೆಗೆ ಸಂವಾದ ನಡೆಸಲಿದ್ದಾರೆ. ನಂತರ, ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿನ ಆನೆಕ್ಯಾಂಪ್‌ಗೆ ತೆರಳಿ, ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಆಸ್ಕರ್‌ ಪ್ರಶಸ್ತಿ ವಿಜೇತ ‘ಎಲಿಫೆಂಟ್‌ ವಿಸ್ಪರರ್ಸ್‌’ ಸಿನಿಮಾದ ನಿಜ ಪಾತ್ರಧಾರಿ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಬಳಿಕ, ಮೈಸೂರಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲೂ ಭಾಗಿಯಾಗಿ, 2022ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಲಿದ್ದಾರೆ.

ಮೋದಿಯವರು ಶನಿವಾರ ರಾತ್ರಿಯೇ ವಿಶೇಷ ವಿಮಾನದಲ್ಲಿ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದು, ನಗರದ ಪ್ರತಿಷ್ಠಿತ ರಾರ‍ಯಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರಿಗೂ ಅವಕಾಶ ನಿರಾಕರಿಸಲಾಗಿದೆ.

ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನಲೆ, ಶಾಪಿಂಗ್ ಮಾಲ್‌ಗೆ ಬೀಗ, ಬಿಗಿ ಪೊಲೀಸ್ ಬಂದೋಬಸ್ತ್!

ಬಂಡೀಪುರದಲ್ಲಿಂದು ಸಫಾರಿ:

ಭಾನುವಾರ ಬೆಳಗ್ಗೆ 6.20ಕ್ಕೆ ಮೈಸೂರಿನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುವ ಮೋದಿ, ಬಂಡೀಪುರಕ್ಕೆ ತೆರಳಿ, ಅಲ್ಲಿನ ಕ್ಯಾಂಪ್‌ನಲ್ಲಿ ಅರಣ್ಯ ಹುತ್ಮಾತರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಮರ್ಪಿಸಲಿದ್ದಾರೆ. ಬಳಿಕ, ಸುಮಾರು 2 ಗಂಟೆ ಕಾಲ 15 ಕಿ.ಮೀ. ಸಫಾರಿ ನಡೆಸಿ, ಅರಣ್ಯ ಅಧಿಕಾರಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ, ಗಡಿಭಾಗದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ ಮೂಲಕ ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿನ ಆನೆಕ್ಯಾಂಪ್‌ಗೆ ತೆರಳಿ, ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಆಸ್ಕರ್‌ ಪ್ರಶಸ್ತಿ ವಿಜೇತ ‘ಎಲಿಫೆಂಟ್‌ ವಿಸ್ಪರರ್ಸ್‌’ ಸಿನಿಮಾದ ನಿಜ ಪಾತ್ರಧಾರಿ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಲಿದ್ದಾರೆ.

Mysuru : ಕೊಳೆತು ನಾರುತ್ತಿದೆ ಲಕ್ಷ್ಮಣತೀರ್ಥ ನದಿ

ಬಳಿಕ, ಮೈಸೂರಿಗೆ ಆಗಮಿಸಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರದಲ್ಲಿ 2022ರ ಹುಲಿ ಸಮೀಕ್ಷಾ ವರದಿ ಹಾಗೂ ಹುಲಿ ಯೋಜನೆಯ 50ನೇ ವರ್ಷಾಚರಣೆ ಅಂಗವಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ. ಬಳಿಕ, 12.40ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಏನೇನು ಕಾರ‍್ಯಕ್ರಮ?

ಬೆಳಗ್ಗೆ 7: ಬಂಡೀಪುರಕ್ಕೆ ಆಗಮನ
7.15: ಹುತಾತ್ಮರ ಸ್ಮಾರಕಕ್ಕೆ ಗೌರವ
7.20: ಕಾಡಿನಲ್ಲಿ 15 ಕಿಮೀ ಸಫಾರಿ
9.35: ಮುದುಮಲೈ ಆನೆಕ್ಯಾಂಪ್‌ಗೆ ಭೇಟಿ, ಬೊಮ್ಮ-ಬೆಳ್ಳಿ ದಂಪತಿಗೆ ಅಭಿನಂದನೆ
11.00: ಮೈಸೂರಲ್ಲಿ ಹುಲಿ ಯೋಜನೆ 50ನೇ ವರ್ಷಾಚರಣೆ ಕಾರ‍್ಯಕ್ರಮದಲ್ಲಿ ಭಾಗಿ
12.40: ಮೈಸೂರಿನಿಂದ ದೆಹಲಿಗೆ