ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ನೀರಾವರಿ ನಿಗಮಗಳ ಕಚೇರಿ ಸ್ಥಳಾಂತರಕ್ಕೆ ರೈತರು ಒತ್ತಾಯಿಸಿದ್ದಾರೆ. ಹಿಂದಿನ ಸರ್ಕಾರಗಳು ಆದೇಶ ಹೊರಡಿಸಿದ್ದರೂ, ಅಧಿಕಾರಿಗಳ ತಪ್ಪು ಮಾಹಿತಿ ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.14): ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್), ಕೃಷ್ಣಾಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕಚೇರಿಗಳನ್ನು ಬೆಂಗಳೂರಿಂದ ಉತ್ತರ ಕರ್ನಾಟಕದ ಭಾಗಕ್ಕೆ ಸ್ಥಳಾಂತರ ಮಾಡುವ ಕುರಿತು ಸರ್ಕಾರದ ಮೇಲೆ ಒತ್ತಡ ಹಾಕದ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಡಳಿತರೂಢ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳಿಗೆ ರೈತರ ಮೇಲೆ ಕಾಳಜಿ ಇಲ್ಲವಾಗಿದೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಭಾಗಕ್ಕೆ ನೀರಾವರಿ ನಿಗಮ ಕಚೇರಿಗಳು ಸ್ಥಳಾಂತರವಾದರೆ ರೈತರಿಗೆ ಅನುಕೂಲವಾಗಲಿದೆ. ರೋಗ, ಅಸ್ಥಿರ ಹವಾಮಾನ, ಬೆಲೆ ಕುಸಿತ ಸೇರಿ ಇತರ ಸಮಸ್ಯೆಗಳಿಂದ ತೊಂದರೆಯಾಗುತ್ತಿದೆ. ಉತ್ತರ ಕರ್ನಾಟಕದ ಭಾಗದ ಶಾಸಕರು, ಸಂಸದರು ಮತ್ತು ಆಡಳಿತ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಈಗಿನ ಸರ್ಕಾರವು ನೀರಾವರಿ ನಿಗಮದ ಪ್ರಾದೇಶಿಕ ಕಚೇರಿಗಳ ಸ್ಥಳಾಂತರಕ್ಕೆ ಇಚ್ಛಾಶಕ್ತಿ ತೋರಬೇಕೆಂದು ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘ ಸೇರಿ ನೂರಾರು ರೈತರು ಒತ್ತಾಯಿಸಿದ್ದಾರೆ.

ನೀರಾವರಿ ನಿಗಮದ ಕಚೇರಿ ಸ್ಥಳಾಂತರ ಆಗಿಲ್ಲ

ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎನ್‌ಎನ್‌ಎಲ್ ಹಾಗೂ ಕೆಬಿಜೆಎನ್‌ಎಲ್ ಪ್ರಾದೇಶಿಕ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇದುವರೆಗೆ ಸ್ಥಳಾಂತರವಾಗಿಲ್ಲ. ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆ ಭಾಗದ ಜನರಿಗೆ ಆಡಳಿತ ಕಾರ್ಯಗಳು ಹತ್ತಿರವಾಗಲು ಕೃಷ್ಣಾಭಾಗ್ಯ ಜಲ ನಿಗಮದ ಕಚೇರಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಪ್ರಾದೇಶಿಕ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, 2019ರ ಜ.10ರಂದು ಆದೇಶ ಹೊರಡಿಸಿದ್ದರು.

ಕೋರ್ಟ್‌ನ ದಿಕ್ಕು ತಪ್ಪಿಸಿದ ನೀರಾವರಿ ನಿಗಮದ ಅಧಿಕಾರಿಗಳು

ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ 2022ರಲ್ಲಿ 3 ಬಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ನೀರಾವರಿ ನಿಗಮಗಳ ಸ್ಥಳಾಂತರಕ್ಕೆ ಆದೇಶ ಹೊರಡಿಸಿದ್ದರು. ಆದರೆ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಕೃಷ್ಣಾಭಾಗ್ಯ ಜಲಾಶಯ ನಿಗಮವನ್ನು 2021ರಲ್ಲೇ ಅಲಮಟ್ಟಿಗೆ ಸ್ಥಳಾಂತರವಾಗಿದೆ ಎಂದು 2024ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ, ಎರಡು ನೀರಾವರಿ ನಿಗಮಗಳ ಸ್ಥಳಾಂತರಕ್ಕೆ ಸರ್ಕಾರದಿಂದ ಇದುವರೆಗೆ ಸೂಚನೆ ಬಂದಿಲ್ಲ ಎಂದು ಮಾಹಿತಿ ಹಕ್ಕು ಅರ್ಜಿಗೆ ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ.

3 ವರ್ಷದಿಂದ ನೀರಾವರಿ ಯೋಜನೆ ಮಾಡಿಲ್ಲ

ಕರ್ನಾಟಕ ನೀರಾವರಿ ನಿಗಮ, ಕೃಷ್ಣಾಭಾಗ್ಯ ಜಲ ನಿಗಮದ ಬೆಂಗಳೂರಿಂದ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವೆ. ಈ ಬಗ್ಗೆ ಹೋರಾಟ ಸಹ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವ ಕೆಲಸವಾಗಬೇಕು. ಆ ಭಾಗದಲ್ಲೇ ಅತಿ ಹೆಚ್ಚು ಜಿಲ್ಲೆಗಳು ಹಿಂದುಳಿದಿವೆ. ರೈತ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರವು ಉತ್ತರ ಕರ್ನಾಟವನ್ನು ನಿರ್ಲಕ್ಷ್ಯಿಸಿದೆ. 3 ವರ್ಷದಿಂದ ಯಾವುದೇ ನೀರಾವರಿ ಯೋಜನೆಗಳನ್ನು ಮಾಡಿಲ್ಲ. ಇದೀಗ ಬರಗಾಲ ಎದುರಾಗಿದೆ. ಜಲಾಶಯಗಳ ಹೂಳು ಎತ್ತುವ ಕೆಲಸವನ್ನು ಸರ್ಕಾರ ಮಾಡಬೇಕು.

- ಆರ್.ಅಶೋಕ್. ಪ್ರತಿಪಕ್ಷದ ನಾಯಕ