ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಲಬುರಗಿ (ಮಾ.09): ರಾಜ್ಯದಲ್ಲಿ ಈಗಾಗಲೆ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಜನತೆ ನೆಮ್ಮದಿ ಜೀವನ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಸುಮಾರು 1,069.41 ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ತಾಪುರ ಕ್ಷೇತ್ರದಲ್ಲಿಯೇ ಇಂದಿಲ್ಲಿ ಸುಮಾರು 365 ಕೋಟಿ ರು. ಮೊತ್ತದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 2,000 ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲು ತೀರ್ಮಾನ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 330 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. 5,800 ಶಿಕ್ಷಕರ ಭರ್ತಿ ಪ್ರಕ್ರಿಯೆ ನಡೆದಿದೆ. ಜೊತೆಗೆ 2.50 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು. ಸಧ್ಯ 56,000ಕ್ಕೂ ಅಧಿಕ ಖಾಲಿ ಹುದ್ದೆ ತುಂಬಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.
ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಪ್ರತಿ ವರ್ಷ ರೂ 52,000 ಕೋಟಿಗೂ ಅಧಿಕ ಮೊತ್ತ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಖರ್ಚು ಮಾಡುತ್ತಿದೆ. ಹೀಗಂತ ಅಭಿವೃದ್ಧಿ ಕಾರ್ಯ ನಿಂತಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿಯೆ ಕಳೆದ ಎರಡೂವರೆ ವರ್ಷದಲ್ಲಿ 2,000 ಕೋಟಿ ರೂ. ಅನುದಾನ ನೀಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಕ್ಷಮತೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಮಾನತೆ ಮತ್ತು ತತ್ವಾಧಾರಿತ ರಾಜಕಾರಣಿಯನ್ನು ರಾಜ್ಯಕ್ಕೆ ನೀಡಿದಕ್ಕೆ ಮತ್ತವರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಚಿತ್ತಾಪುರ ಕ್ಷೇತ್ರದ ಮಹಾನ್ ಜನತೆಗೆ ಕೃತಜ್ಞತೆಗಳು ಸಲ್ಲಿಸಲು ಬಯಸುತ್ತೇನೆ ಎಂದರು.
ವಿಶ್ವ ಶಾಂತಿಗೆ ಗಾಂಧಿ ತತ್ವ ಮಾದರಿ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಂದು ಕೊಲ್ಲಿ ರಾಷ್ಟçಗಳ ಮಧ್ಯೆ ಯುದ್ದ ನಡೆಯುತ್ತಿದೆ. ಯುದ್ದದಿಂದ ಯಾರಿಗೂ ಒಳ್ಳೆಯದಾಗಲ್ಲ, ಬದಲಾಗಿ ಅಭಿವೃದ್ಧಿಗೆ ಮಾರಕವಾಗಲಿದೆ. ಹಿಂದಿಗಿಂತಲು ಇಂದು ವಿಶ್ವ ಶಾಂತಿಗೆ ಮಹಾತ್ಮ ಗಾಂಧಿ ಅವರ ಅಹಿಂಸೆ ತತ್ವ ಅತ್ಯಗತ್ಯತ್ಯವಿದೆ ಎಂದು ಅವರು ಹೇಳಿದರು.
ಇಙದು ಚಿತ್ತಾಪುರ ಕ್ಷೇತ್ರದಲ್ಲಿ 1,069 ಕೋಟಿ ರೂ. ಕೆಲಸ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಪ್ರಿಯಾಂಕ್ ಖರ್ಗೆ ಇಷ್ಟು ಒಳ್ಳೆ ಕೆಲಸ ಮಾಡಿದ್ರು ವಿರೋಧ ಪಕ್ಷದವರ ಟೀಕೆ ಕಮ್ಮಿಯಾಗಿಲ್ಲ. ಹಿಂದೆ 2008ರಲ್ಲಿ ನಾನು ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾಗಿ ಚಿತ್ತಾಪುರ ಜನರ ಸೇವೆ ಸಲ್ಲಿಸಲು ಕೇವಲ 1 ವರ್ಷ ಮಾತ್ರ ಅವಕಾಶ ಸಿಕ್ಕಿತು. ನಂತರ ದಿಲ್ಲಿ ರಾಜಕಾರಣಕ್ಕೆ ಹೋಗಬೇಕಾಯಿತೆಂದರು. ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಈ ಭಾಗದ ಹಿಂದುಳಿದ ಹಣೆಪಟ್ಟಿ ತೊಲಗಿಸಲು 371ಜೆ ಕಾಯ್ದೆ ಜಾರಿಗೆ ತರಲಾಯಿತು. ಪರಿಣಾಮ ಇಂದಿಲ್ಲಿ ನಮ್ಮ ಯುವಕರು, ಮೆಡಿಕಲ್-ಇಂಜಿನೀಯರಿಂಗ್ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆಂದರು.


