* ಕನ್ನಡ ಸೇರ್ಪಡೆ ಮಾಡದಿದ್ದರೆ ಸಂಸದರ ನೇತೃತ್ವದಲ್ಲಿ ಹೋರಾಟ* ನಾಡಿದ್ದಿನಿಂದ ಸಂಸದರು, ಅಧಿಕಾರಿಗಳಿಗೆ ದೇಶಿ, ವಿದೇಶಿ ಭಾಷೆಗಳ ಕಲಿಕೆ* ಸಂವಿಧಾನದ 8ನೇ ಅನುಚ್ಛೇದದಡಿ ಮಾನ್ಯತೆ ಪಡೆದ ಕನ್ನಡ ಭಾಷೆ  

ಬೆಂಗಳೂರು(ಜೂ.20):  ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಕಲಿಕಾ ಕಾರ್ಯಾಗಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಸಂಸದರ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Add Asianetnews Kannada as a Preferred SourcegooglePreferred

ಶನಿವಾರ ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿಕೆ ಬಿಡುಗಡೆ ಮಾಡಿದ್ದು, ಲೋಕಸಭಾ ಸಚಿವಾಲಯದ ಪಾರ್ಲಿಮೆಂಟರಿ ರೀಸರ್ಚ್‌ ಆಂಡ್‌ ಟ್ರೈನಿಂಗ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಡೆಮಾಕ್ರಸಿ ಸಂಸ್ಥೆಯು ಸಂಸತ್‌ ಸದಸ್ಯರು, ಶಾಸಕರು ಅಧಿಕಾರಿಗಳಿಗಾಗಿ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸುವ ಕಾರ್ಯಾಗಾರ ಹಮ್ಮಿಕೊಂಡಿದೆ. ಅದರಲ್ಲಿ ಜೂನ್‌ 22ರಿಂದ 6 ವಿದೇಶಿ ಮತ್ತು 6 ದೇಶಿ ಭಾಷೆಗಳನ್ನು ಕಲಿಸಲು ನಿರ್ಧರಿಸಿದೆ. ಆದರೆ ಕಲಿಕಾ ಕಾರ್ಯಾಗಾರದಲ್ಲಿ ಗುಜರಾತಿ, ಬಂಗಾಳಿ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಆದ್ಯತೆ ಕೊಟ್ಟು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನವಾದ ಕನ್ನಡ ಭಾಷೆಯನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!

ಸಂವಿಧಾನದ 8ನೇ ಅನುಚ್ಛೇದದಡಿ ಮಾನ್ಯತೆ ಪಡೆದಿರುವ ಕನ್ನಡವನ್ನು ದೇಶೀಯ ಮತ್ತು ವಿದೇಶಿ ಭಾಷೆಗಳ ಕಲಿಕಾ ಕಾರ್ಯಕ್ರಮದ ಪಟ್ಟಿಗೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಅತಿ ಹೆಚ್ಚು ಸಂಸದರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ಕನ್ನಡಿಗರು ಸಂಸದರ ನೇತೃತ್ವದಲ್ಲೇ ಹೋರಾಟ ನಡೆಸಲಿದ್ದಾರೆ. ಹಾಗೆಯೇ ನಮ್ಮ ಸಂಸದರು ಕೂಡ ಒಗ್ಗಟ್ಟಿನಿಂದ ಕಲಿಕಾ ಕಾರ್ಯಾಗಾರದಲ್ಲಿ ಕನ್ನಡ ಸೇರ್ಪಡೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಮನವಿ ಮಾಡಿದ್ದಾರೆ.