ಕೆಎಎಸ್ 384 ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಒಂದೇ ಕೊಠಡಿಯಿಂದ 12 ಮಂದಿ ಉತ್ತೀರ್ಣರಾದ ಹಾಗೂ ಒಂದೇ ಕುಟುಂಬದವರು ಆಯ್ಕೆಯಾಗಿದ್ದಾರೆ ಎಂಬ ಆರೋಪ  ತಳ್ಳಿಹಾಕಲಾಗಿದೆ, 

ಬೆಂಗಳೂರು (ಮಾ.6): ಕೆಎಎಸ್ 384 ಹುದ್ದೆಗಳ ಮುಖ್ಯ ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ. ಅಕ್ರಮ ನಡೆದಿಲ್ಲ. ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಆಕೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಗುರುವಾರ ವರದಿ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಮುಖವಾಗಿ, ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಉತ್ತೀರ್ಣರಾಗಿ 1:3 ಅನುಪಾತದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಆರೋಪವಿತ್ತು. ಈ ಕುರಿತು ಪರಿಶೀಲನೆ ನಡೆಸಲಾಗಿ 1 ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 12 ಜನ ಉತ್ತೀರ್ಣರಾಗಿರುವುದು ಕಂಡು ಬಂದಿದೆ. ಈ ಕೊಠಡಿಯ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಅದೇ ರೀತಿ ಇನ್ನೆರೆಡು ಕೊಠಡಿಗಳಲ್ಲಿ 10 ಮತ್ತು 11 ಜನ, ಇನ್ನೆರೆಡು ಕೊಠಡಿಗಳಲ್ಲಿ ತಲಾ 7 ಜನ ಉತ್ತೀರ್ಣರಾಗಿದ್ದಾರೆ. ಎಲ್ಲಾ ಕೊಠಡಿಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಅಕ್ರಮ ಕಂಡು ಬಂದಿಲ್ಲ. ದೋಷರಹಿತವಾಗಿ ಪರೀಕ್ಷೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದೇ ಕುಟುಂಬದವರು ಉತ್ತೀರ್ಣ ಆಗಿಲ್ಲ:

ಇನೀಷಿಯಲ್ ಅಥವಾ ಉಪ ನಾಮ ಒಂದೇ ಇರುವ ನಾಲ್ವರು ಒಂದೇ ಕುಟುಂಬದವರಾಗಿದ್ದು, ಅವರು ಉತ್ತೀರ್ಣರಾಗಿದ್ದಾರೆ ಎಂದು ಜಾಲತಾಣದಲ್ಲಿ ಆರೋಪಿಸಲಾಗಿತ್ತು. ಅದನ್ನು ಪರಿಶೀಲಿಸಿದಾಗ ಅವರಾರು ಒಂದೇ ಕುಟುಂಬದವರಲ್ಲ ಎಂದು ಖಚಿತವಾಗಿದೆ. ಈ ರೀತಿಯ ಎರಡು ಆರೋಪಗಳನ್ನು ಮಾಡಲಾಗಿದ್ದು, ಪರಿಶೀಲನೆ ವೇಳೆ ಅವರಾರೂ ಒಂದೇ ಕುಟುಂಬದವರಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಪರೀಕ್ಷೆ ಹಿಂದಿನ ದಿನ ರಾತ್ರಿವರೆಗೂ ಹಾಲ್‌ಟಿಕೆಟ್ ನೀಡಿರುವ ಕುರಿತು ಪರಿಶೀಲಿಸಲಾಗಿದ್ದು, ನ್ಯಾಯಾಲಯದ ಸೂಚನೆಯಂತೆ ಹಾಲ್‌ಟಿಕೆಟ್ ವಿತರಿಸಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯಾರೊಬ್ಬರೂ ದೂರು, ಸಾಕ್ಷಿ ನೀಡಿಲ್ಲ:

ಅಕ್ರಮ ನಡೆದಿದೆ ಎಂದು ಜಾಲತಾಣಗಳಲ್ಲಿ ದೂರಲಾಗಿದೆ. ಆದರೆ, ಅಕ್ರಮ ನಡೆದಿದೆ ಎನ್ನುವುದಕ್ಕೆ ಯಾರೊಬ್ಬರೂ ಯಾವುದೇ ಸಾಕ್ಷಿಯನ್ನು ಕೆಪಿಎಸ್ಸಿಗೆ ನೀಡಿಲ್ಲ. ದೂರನ್ನೂ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸಾಕ್ಷಿ ಸಮೇತ ದೂರು ನೀಡಿದರೆ ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೇಸರ ವ್ಯಕ್ತಪಡಿಸಿದ ಅಭ್ಯರ್ಥಿ

ನಾನು ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದೇನೆ. ಉಪನಾಮ ಒಂದೇ ಇದೆ ಎಂಬ ಕಾರಣಕ್ಕೆ ನನ್ನ ಹೆಸರನ್ನು ಜಾಲತಾಣಗಳಲ್ಲಿ ಹರಿಬಿಟ್ಟು ಅಕ್ರಮದ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂಬ ಬೇಸರವನ್ನು ಕೆಪಿಎಸ್‌ಸಿ ಕಾರ್ಯದರ್ಶಿಯವರ ಬಳಿ ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ. ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ದೂರುಗಳ ಕುರಿತು ಮುಖ್ಯ ಕಾರ್ಯದರ್ಶಿಯವರಿಗೆ ವರದಿ ನೀಡಲಾಗಿದೆ.

ಕೆ. ಜ್ಯೋತಿ, ಕಾರ್ಯದರ್ಶಿ, ಕೆಪಿಎಸ್‌ಸಿ