ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಸರ್ಕಾರಕ್ಕೆ ಚಾಟಿ ಬೀಸುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಹೇಳಿದ್ದಾರೆ.

ಬೆಂಗಳೂರು (ಮಾ.05): ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಬಜೆಟ್‌ ಅಧಿವೇಶನದಲ್ಲಿ ಜನರ ಸಮಸ್ಯೆಗಳು, ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು, ಡ್ರಗ್ಸ್‌ ಹಾವಳಿ, ವರ್ಗಾವಣೆ ದಂಧೆ, ಪೊಲೀಸ್‌ ಇಲಾಖೆಯ ಭ್ರಷ್ಟಾಚಾರ, ಅಭಿವೃದ್ಧಿ ಸ್ಥಗಿತ, ಅನುದಾನ ನೀಡದಿರುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತೆ ಸೂಚಿಸಿದ್ದಾರೆ.

ರಾಜ್ಯದ ವಿತ್ತೀಯ ಹೊಣೆಗಾರಿಕೆ, ಸಾಲ ಭಾರ ಏರಿಸುತ್ತಿರುವುದು, ಆರ್ಥಿಕ ಇಲಾಖೆ ಹಳಿ ತಪ್ಪಿರುವುದು, ಬಂಡವಾಳ ಆಸ್ತಿ ಸೃಷ್ಟಿಸದಿರುವುದು, ದಾಖಲೆ ಮಟ್ಟದಲ್ಲಿ ಸಂಗ್ರಹವಾಗುವ ತೆರಿಗೆ ಹಣ, ಗುತ್ತಿಗೆದಾರರಿಗೆ ಬಿಲ್‌ ಬಾಕಿ ವಿಚಾರ ಸೇರಿ ಹಲವು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಹೇಳಿದ್ದಾರೆ.

ಅಂತೆಯೇ ಮೈತ್ರಿ ಪಕ್ಷ ಬಿಜೆಪಿ ಜೊತೆಗೆ ವಿಶ್ವಾಸದಿಂದ ಇರಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಅಧಿವೇಶನದಲ್ಲಿ ಒಟ್ಟಾಗಿ ಸರ್ಕಾರದ ವೈಫಲ್ಯಗಳು, ಜನ ವಿರೋಧಿ ನೀತಿಗಳ ಬಗ್ಗೆ ಅಧಿವೇಶನದಲ್ಲಿ ಹೋರಾಟ ಮಾಡುವಂತೆ ಸೂಚಿಸಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಜೆಡಿಎಸ್‌ನ ಬಹುತೇಕ ಶಾಸಕರು, ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಎಂಎಲ್ಸಿ ತಿಪ್ಪೇಸ್ವಾಮಿ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.

ಎಲ್ಲ ಸರ್ಕಾರಗಳಲ್ಲೂ ಫೋನ್‌ ಟ್ಯಾಪಿಂಗ್‌ ಸಾಮಾನ್ಯ

ಎಲ್ಲಾ ಸರ್ಕಾರಗಳಲ್ಲೂ ಫೋನ್‌ ಟ್ಯಾಪಿಂಗ್‌ ನಡೆಯುವುದು ಸರ್ವೆ ಸಾಮಾನ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಮಾಡಲ್ಲ. ನಾನು ಪತಿವ್ರತೆ ಎಂದು ಹೇಳುತ್ತಿರಬೇಕು ಅಷ್ಟೇ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಸಿದ್ದರಾಮಯ್ಯಗೆ ಟಾಂಗ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಮಾಧ್ಯಮ ಮಿತ್ರರು ಫೋನ್‌ ಟ್ಯಾಪಿಂಗ್‌ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ್ದೆ. ಕದ್ದು ಮುಚ್ಚು ಮಾತಾಡಿಲ್ಲ. ಹಿಂದಿನಿಂದ ಎಲ್ಲಾ ಸರ್ಕಾರಗಳಲ್ಲೂ ನಿರಂತರವಾಗಿ ಫೋನ್‌ ಟ್ಯಾಪಿಂಗ್‌ ನಡೆದುಕೊಂಡು ಬಂದಿದೆ. ಈಗಿನ ರಾಜ್ಯ ಸರ್ಕಾರದಲ್ಲೂ ನಡೆಯುತ್ತಿದೆ ಎಂದು ಹೇಳಿದ್ದೇನೆ ಎಂದರು.

ನಾನು ಎರಡು ಬಾರಿ ಸಿಎಂ ಆಗಿದ್ದವನು. ಸಿಎಂ ಮಟ್ಟದಲ್ಲಿ ಫೋನ್‌ ಟ್ಯಾಪಿಂಗ್‌ ಮಾಡುವುದಿಲ್ಲ. ಅವರ ಬಳಿ ಇರುವ ಇಂಟೆಲಿಜೆನ್ಸ್‌ ಅಧಿಕಾರಿಗಳು ಕೆಲ ಪ್ರಕರಣಗಳು, ಕೆಲ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ಅನುಮತಿ ಪಡದೇ ಫೋನ್‌ ಟ್ಯಾಪಿಂಗ್‌ ಮಾಡುವುದು ಸರ್ವೆಸಾಮಾನ್ಯ. ಈ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೇನೆ. ಸಿದ್ದರಾಮಯ್ಯ ಫೋನ್‌ ಟ್ಯಾಪಿಂಗ್‌ ಮಾಡುತ್ತಿದ್ದಾರೆ ಎಂದು ನಾನು ಹೇಳಿಲ್ಲ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.