ಏ.1ರಿಂದ ವೇತನ ಏರಿಕೆ ಜಾರಿ, ನೌಕರರಿಗೆ ಮಾತು ನೀಡಿದ್ದಂತೆಯೇ ಕ್ರಮ ಕೈಗೊಂಡಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು(ಮಾ.05): ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ (ಎನ್ಎಚ್ಎಂ) ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಆದೇಶ ಹೊರಡಿಸಿದ್ದು, ಆದೇಶವು ಬರುವ ಏ.1ರಿಂದ ಅನ್ವಯವಾಗಲಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಹಾಗೂ ಕಾಯಂ ಮಾಡುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ಅವರ ಅಹವಾಲು ಆಲಿಸಿದ್ದ ಆರೋಗ್ಯ ಸಚಿವರ ಡಾ.ಕೆ. ಸುಧಾಕರ್ ಅವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಎನ್ಎಚ್ಎಂ ಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು.
Chikkaballapur: ನೇಕಾರರ ಶ್ರೇಯೋಭಿವೃದ್ಧಿಗೆ ಬಿಜೆಪಿ ಬದ್ಧ: ಸಚಿವ ಸುಧಾಕರ್
ಇದರಂತೆ ಆರೋಗ್ಯ ಇಲಾಖೆಯು ಆದೇಶ ಹೊರಡಿಸಿದ್ದು, ಕೆಲಸಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ 20 ಸಾವಿರ ರು.ಗಿಂತ ಕಡಿಮೆ ಸಂಭಾವನೆ ಹೊಂದಿರುವ ನೌಕರರಿಗೆ ಶೇ.15ರಷ್ಟುವೇತನ ಹೆಚ್ಚಳ ಮಾಡಲಾಗುವುದು. 5 ವರ್ಷಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ ಎನ್ಎಚ್ಎಂ ಮೆಡಿಕಲ್ ಅಧಿಕಾರಿಗಳಿಗೆ (ಎಂಬಿಬಿಎಸ್, ಆಯುಷ್, ಆರ್ಬಿಎಸ್ಕೆ, ದಂತವೈದ್ಯ ಸರ್ಜನ್ಗಳು) ಕೂಡ ಅಷ್ಟೇ ಪ್ರಮಾಣದ (ಶೇ.15) ವೇತನ ಹೆಚ್ಚಳ ಮಾಡಲಾಗಿದೆ.
ಉಳಿದಂತೆ ಎನ್ಎಚ್ಎಂ ಗುತ್ತಿಗೆ ತಜ್ಞರಿಗೆ, 3-5 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.5, 5-10 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.10, 10 ವರ್ಷಕ್ಕೂ ಅಧಿಕ ಕಾಲ ಸೇವೆಯಲ್ಲಿರುವವರಿಗೆ ಶೇ.15 ರಷ್ಟುಸಂಭಾವನೆ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಮಾತು ನೀಡಿದ್ದಂತೆಯೇ ಕ್ರಮ ಕೈಗೊಂಡಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ ಎಂದು ಸಚಿವ ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
