ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಮುಖ್ಯಮಂತ್ರಿಗಳ ಭೇಟಿ ಬಳಿಕ ತಿಳಿಸಿದ್ದಾರೆ. ಹೀಗಾಗಿ ಹಾಲಿನ ದರ ಸದ್ಯಕ್ಕೆ ಏರಿಕೆಯಾಗುವ ಆತಂಕವಿಲ್ಲ ಎನ್ನಲಾಗಿದೆ.

ಬೆಂಗಳೂರು (ಜೂ.23): ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಮುಖ್ಯಮಂತ್ರಿಗಳ ಭೇಟಿ ಬಳಿಕ ತಿಳಿಸಿದ್ದಾರೆ. ಹೀಗಾಗಿ ಹಾಲಿನ ದರ ಸದ್ಯಕ್ಕೆ ಏರಿಕೆಯಾಗುವ ಆತಂಕವಿಲ್ಲ ಎನ್ನಲಾಗಿದೆ.

ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು: ಕೆಎಂಎಫ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭೀಮನಾಯ್ಕ್‌ ಮತ್ತು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಭೀಮ ನಾಯ್ಕ್‌ ಅವರು, ರಾಜ್ಯ ಸರ್ಕಾರ ಹಾಲು ಉತ್ಪಾದಕರ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ಲೀಟರ್‌ಗೆ 5 ರು. ನೀಡುತ್ತಿದೆ. ಇನ್ನು 2 ರು.ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಪ್ರಸ್ತುತ ಎಲ್ಲ ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 5 ರು.ಬೆಲೆ ಹೆಚ್ಚಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ವಿದ್ಯುತ್‌ ದರ ಏರಿಕೆ ವಿರುದ್ಧ ಧರಣಿ: ಅರ್ಧ ರಾಜ್ಯದಲ್ಲಿ ವಾಣಿಜ್ಯೋದ್ಯಮ ಬಂದ್‌

ಕೆಎಂಎಫ್‌ ಹಿರಿಯರ ಶ್ರಮದಿಂದ ಈ ಮಟ್ಟಕ್ಕೆ ಬೆಳೆದು ನಿಂತಿದೆ. ನಂದಿನಿ ರಾಷ್ಟ್ರ ಮಟ್ಟದ ಬ್ರಾಂಡ್‌ ಆಗಿದ್ದು, ಖಾಸಗಿಯವರಿಗೆ ಸ್ಪರ್ಧೆ ನೀಡುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಸರ್ಕಾರದ ಮಾರ್ಗದರ್ಶನದ ಜೊತೆಗೆ ರೈತರು, ಗ್ರಾಹಕರ ಸಹಕಾರ ಪಡೆದು ಕೆಎಂಎಫ್‌ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕೆಲ ತಿಂಗಳಿನಿಂದ ರಾಸುಗಳಿಗೆ ಚರ್ಮಗಂಟು ರೋಗ ಬಂದಿದ್ದರಿಂದ ಹಾಲು ಉತ್ಪಾದನೆ ಕಡಿಮೆಯಾಗಿತ್ತು. ಹೀಗಾಗಿ ತುಪ್ಪದ ಕೊರತೆಯೂ ಹೆಚ್ಚಾಗಿತ್ತು. ಈಗ ಮಳೆಗಾಲ ಆರಂಭಗೊಂಡಿದ್ದು ಹಸಿರು ಮೇವು ಯಥೇಚ್ಛವಾಗಿ ಸಿಗುವುದರಿಂದ ಹಾಲಿನ ಉತ್ಪಾದನೆ ಜಾಸ್ತಿಯಾಗಲಿದೆ ಎಂದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ರಾಜ್ಯದಲ್ಲಿ ಖಾಸಗಿ ಹಾಲು ಸಂಸ್ಥೆಗಳು ರೈತರಿಂದ ಹೆಚ್ಚು ಹಣ ಕೊಟ್ಟು ಹಾಲು ಖರೀದಿ ಮಾಡುತ್ತಿವೆ. ಹೀಗಾಗಿ ನಾವು ಕೂಡ ಹೈನುಗಾರರಿಗೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಹಾಗಾಗಿ ಹಾಲು ಉತ್ಪಾದಕರಿಗೆ ನೀಡುವ ಮೊತ್ತ ಏರಿಕೆಗೆ ಚಿಂತನೆ ನಡೆಸಲಾಗಿದೆ. ರೈತರಿಂದ ಖರೀದಿಸುವ ಹಾಲಿನ ದರ ಏರಿಕೆಗೆ ಚಿಂತನೆ ನಡೆದಿದ್ದು ರೈತರಿಗೆ ಹೆಚ್ಚಿನ ಲಾಭ ನೀಡುವ ಕಡೆಗೆ ಗಮನ ಹರಿಸುತ್ತೇವೆ. ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಗ್ರಾಹಕರು ಖರೀದಿಸುವ ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ತಿಳಿಸಿದರು.

ವಿಲೀನ ಎಂದವರು ಹುಚ್ಚರಿದ್ದಂತೆ: ಅಮೂಲ್‌ ಜತೆಗೆ ನಂದಿನಿ ವಿಲೀನ ಎಂಬ ಸುದ್ದಿ ಸುಳ್ಳು. ಈ ರೀತಿ ಹೇಳಿಕೆ ಕೊಡುವವರು ಹುಚ್ಚರಿದ್ದಂತೆ. ಮುಕ್ತ ಮಾರುಕಟ್ಟೆಯಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಿ ಮಾರಾಟ ಮಾಡಬಹುದು. ಅದೇ ರೀತಿ ನಂದಿನಿ ಬೇರೆ ಬೇರೆ ರಾಜ್ಯದಲ್ಲೂ ಮಾರಾಟ ಮಾರಾಟವಾಗುತ್ತಿದೆ. ಗುಣಮಟ್ಟಇದ್ದರೆ ಮಾತ್ರ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ರಾಜಣ್ಣ ಹೇಳಿದರು.

ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್‌ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ

ಪ್ರತಿ ದಿನ ಗರಿಷ್ಠ 94.20 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ದಿನ ಒಂದಕ್ಕೆ ಗರಿಷ್ಠ ಒಂದು ಕೋಟಿ ಲೀಟರ್‌ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಹಾಗೆಯೇ ರೈತರಿಗೆ ಹೈನುಗಾರಿಕಾ ಸೌಲಭ್ಯಕ್ಕೆ ವಾರ್ಷಿಕವಾಗಿ 233 ಕೋಟಿ ರು.ಗಳ ಧನಸಹಾಯ ಮಾಡುತ್ತಿದ್ದು, ಅದನ್ನು 300 ಕೋಟಿ ರು.ಗಳಿಗೆ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ಲೀಟರ್‌ ಹಾಲಿನ ಸಂಸ್ಕರಣಾ ಸಾಮರ್ಥ್ಯಕ್ಕೆ ತಲುಪುವ ಗುರಿ ಹೊಂದಲಾಗಿದೆ ಎಂದು ಹೇಳಿದರು.