ಕೋವಿಡ್‌-19 ಸೋಂಕು ಹರಡದಂತೆ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಅರಿಶಿಣ ಹಾಲಿನ ಜತೆಗೆ ಆಯುರ್ವೇದಿಕ್‌ ಗುಣ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಐದು ವಿವಿಧ ಹಾಲಿನ ಉತ್ಪನ್ನಗಳು ಮತ್ತು ಆರೋಗ್ಯದಾಯಕ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರು(ಆ.01): ಕೋವಿಡ್‌-19 ಸೋಂಕು ಹರಡದಂತೆ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಅರಿಶಿಣ ಹಾಲಿನ ಜತೆಗೆ ಆಯುರ್ವೇದಿಕ್‌ ಗುಣ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಐದು ವಿವಿಧ ಹಾಲಿನ ಉತ್ಪನ್ನಗಳು ಮತ್ತು ಆರೋಗ್ಯದಾಯಕ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಕೆಎಂಎಫ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಬಾಲಚಂದ್ರ ಲ.ಜಾರಕಿಹೊಳಿ ಅವರು ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಈ ಹಿಂದೆ ಕೆಎಂಎಫ್‌ ಅರಿಶಿಣ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಇದೀಗ ನಂದಿನಿ ಗ್ರಾಹಕರಿಗೆ ಸೋಂಕು ತಗಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಯುರ್ವೇದಿಕ್‌ ಗುಣವುಳ್ಳ ಹಾಲನ್ನು ಪರಿಚಯಿಸುತ್ತಿದೆ. ಆಯುರ್ವೇದಿಕ್‌ ಗುಣವುಳ್ಳ ಹಾಲಿನ ಪಾನೀಯಗಳ ಮಾರುಕಟ್ಟೆದರವು 25 ರು.ಗಳಿದ್ದು, ಆರಂಭಿಕ ಕೊಡುಗೆಯಾಗಿ 20 ರು.ನಂತೆ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಂದಿನಿ ತುಳಸಿ ಹಾಲು, ನಂದಿನಿ ಅಶ್ವಗಂಧ ಹಾಲು, ನಂದಿನಿ ಕಾಳು ಮೆಣಸು ಹಾಲು, ನಂದಿನಿ ಲವಂಗ ಹಾಲು, ನಂದಿನಿ ಶುಂಠಿ ಹಾಲು ಮತ್ತು ಸಿರಿಧಾನ್ಯದ ಉತ್ಪನ್ನಗಳಾದ ನಂದಿನಿ ಸಿರಿಧಾನ್ಯ ಸಿಹಿ ಪೊಂಗಲ್‌, ನಂದಿನಿ ಸಿರಿಧಾನ್ಯ ಖಾರ ಪೊಂಗಲ್‌, ನಂದಿನಿ ಸಿರಿಧಾನ್ಯ ಪಾಯಸದ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ವಿವಿಧ ಹಾಲಿನ ಉತ್ಪನ್ನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಲಿವೆ. ಈ ಎಲ್ಲವುಗಳನ್ನು ಸನಾತನ ಆಯುರ್ವೇದ ಔಷಧಗಳಲ್ಲಿ ಬಳಕೆ ಮಾಡಲಾಗಿದ್ದು, ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಂದಿನಿ ಗ್ರಾಹಕರಲ್ಲಿ ಆರೋಗ್ಯ ಉತ್ತಮಗೊಳ್ಳಲು ಪೂರಕವಾಗಲಿವೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಹೇಳಿದರು.