ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದ ಮೇಲೆ  ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಹತ್ವದ ಆಡಿಯೋ ಸಾಕ್ಷ್ಯವನ್ನು ಸಲ್ಲಿಸುವ ಮುನ್ನವೇ ಈ ಬಂಧನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬೆಂಗಳೂರು (ಫೆ.21): ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಅವರ ಫೋಟೋ ಮತ್ತು ಆಡಿಯೋ ಎಡಿಟ್ ಮಾಡಿ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ಡಿಜಿಟಲ್ ಪುರಾವೆಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ಈ ಬಂಧನ ಕೇವಲ ಅಪಪ್ರಚಾರದ ಮಾಡಿದನೆಂಬ ಆರೋಪಕ್ಕಷ್ಟೇ ಸೀಮಿತವೇ ಅಥವಾ ಇದರ ಹಿಂದೆ ದೊಡ್ಡ ಮಟ್ಟದ ಹುನ್ನಾರವಿದೆಯೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ.

Add Asianetnews Kannada as a Preferred SourcegooglePreferred

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ ಸಾಕ್ಷಿ!

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆಯ ಆಡಿಯೋ ಮತ್ತು ಇತರ ಮಹತ್ವದ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಬೆಳಗ್ಗೆಯೇ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಕೃಷ್ಣ, ಮಧ್ಯಾಹ್ನದ ವೇಳೆಗೆ ಕೋರ್ಟ್ ಆವರಣ ತಲುಪುವ ಮುನ್ನವೇ ಸಿಸಿಬಿ ಪೊಲೀಸರ ಕೈಗೆ ಸಿಲುಕಿದ್ದಾರೆ. ಇದು ಕಾಕತಾಳೀಯವೋ ಅಥವಾ ವ್ಯವಸ್ಥಿತ ಸಂಚೋ ಎಂಬ ಸಂಶಯ ದಟ್ಟವಾಗಿದೆ.

ಕೋರ್ಟ್ ನೀಡಿದ್ದ ಗಡುವು, ತನಿಖೆಯ ಆದೇಶದ ಭೀತಿ?

ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರಿಂದ (ಲೋಕಾಯುಕ್ತ ಪೊಲೀಸರಿಂದ) ಆಕ್ಷೇಪಣೆ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಇಂದು ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಿತ್ತು. ಒಂದು ವೇಳೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸದಿದ್ದರೆ, ದೂರುದಾರರಾದ ಸ್ನೇಹಮಯಿ ಕೃಷ್ಣ ಅವರ ಹೇಳಿಕೆಯನ್ನು ಪರಿಗಣಿಸಿ ತನಿಖೆಗೆ ಆದೇಶ ಮಾಡುವುದಾಗಿ ಕೋರ್ಟ್ ತಿಳಿಸಿತ್ತು. ಆದರೆ ಕೋರ್ಟ್‌ನಿಂದ ಆದೇಶ ಹೊರಬೀಳುವ ಮೊದಲೇ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಕುತೂಹಲ ಮೂಡಿಸಿದೆ.

ಆಡಿಯೋ ಸಾಕ್ಷಿ ತಡೆಯಲು ನಡೆದಿದೆಯೇ ಹುನ್ನಾರ?

ಡಿಬಿ ನಟೇಶ್ ವಿರುದ್ಧದ ಆಡಿಯೋ ಕೋರ್ಟ್ ಕೈ ಸೇರುವುದನ್ನು ತಡೆಯಲು ಈ ಬಂಧನ ನಡೆದಿದೆಯೇ? ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸುವ ಮೂಲಕ ಅವರ ಬಳಿ ಇದ್ದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಸಿಸಿಬಿ, ಆ ಆಡಿಯೋ ನ್ಯಾಯಾಲಯದ ಮುಂದೆ ಬರದಂತೆ ತಡೆಯುವ ಹುನ್ನಾರ ನಡೆಸಿದೆಯೇ ಎಂಬ ಆರೋಪಗಳು ಕೇಳಿಬರುತ್ತಿವೆ.

YouTube video player