ರಾಜ್ಯದಲ್ಲಿ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಸರ್ಕಾರ ಮತ್ತೆ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಜೂನ್ 21 ರಿಂದ ಜುಲೈ 10ರ ವರೆಗೆ ಈ ಅವಕಾಶ ಲಭ್ಯವಿದ್ದು, ಸಾರ್ವಜನಿಕರು ಆನ್ಲೈನ್ ಅಥವಾ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಜೂ.21ರಿಂದ ಜು.10ರ ವರೆಗೆ ಅವಕಾಶ
ಶೇ.50 ರಿಯಾಯ್ತಿಯಲ್ಲಿ ದಂಡ ಪಾವತಿ
ಬೆಂಗಳೂರು (ಜೂ.5): ರಾಜ್ಯ ವ್ಯಾಪ್ತಿ ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳಿಗೆ ದಂಡ ಪಾವತಿಸಲು ಮತ್ತೆ ಶೇ.50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಜೂನ್ 21ರಿಂದ ಜುಲೈ 10ರ ವರೆಗೆ ದಂಡ ಪಾವತಿಗೆ ಅವಕಾಶ ನೀಡಲಾಗಿದ್ದು, 2026ರ ಮೇ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತು ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50 ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಡಿಸಲಾಗಿದೆ.
ಎಲ್ಲಿ ಪಾವತಿಸಬೇಕು?
ಎಲ್ಲ ಸಂಚಾರ ಪೊಲೀಸ್ ಠಾಣೆಗಳು, ಬೆಂಗಳೂರು ನಗರ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ಗಳಲ್ಲಿ ತೆರಳಿ ದಂಡ ಪಾವತಿಸಬಹುದು. ಅಲ್ಲದೆ, ಆನ್ಲೈನ್ ಮೂಲಕ ಸಹ ಹಳೇ ಪ್ರಕರಣಗಳ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕ ಒನ್, ಅಸ್ರಂ ಆ್ಯಪ್ ಹಾಗೂ ಕೆಎಸ್ಪಿಎಸ್ ಆ್ಯಪ್ ಮೂಲಕ ದಂಡ ಕಟ್ಟಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.


