ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.  ಪ್ರಿಯಾಂಕ್ ಖರ್ಗೆಗೆ ಗೃಹ ಇಲಾಖೆ ಸಿಕ್ಕರೆ, ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವ ಖಾತೆ ನೀವೇ ನೋಡಿ..

ಬೆಂಗಳೂರು(ಜೂ.04): ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟದ ಪ್ರಮುಖ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಆದರೆ, ಖಾತೆ ಹಂಚಿಕೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಪ್ರಮುಖ ಖಾತೆಗಳ ಹಂಚಿಕೆ ವಿವರ ಹೀಗಿದೆ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ - ಹಣಕಾಸು ಮತ್ತು ಉಳಿದ ಎಲ್ಲ ಖಾತೆಗಳು

ಡಿಸಿಎಂ ಡಾ.ಜಿ. ಪರಮೇಶ್ವರ - ಕಂದಾಯ ಮತ್ತು ಯುವ ಸಬಲೀಕರಣ

ಬೈರತಿ ಸುರೇಶ್- ಸಾರಿಗೆ ಇಲಾಖೆ

ರಾಮಲಿಂಗಾರೆಡ್ಡಿ - ಜಲಸಂಪನ್ಮೂಲ

ಶರಣಪ್ರಕಾಶ್ ಪಾಟೀಲ - ವೈದ್ಯಕೀಯ

ಯತೀಂದ್ರ ಸಿದ್ದರಾಮಯ್ಯ - ನಗರಾಭಿವೃದ್ಧಿ

ಎಂ.ಬಿ. ಪಾಟೀಲ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಕೃಷ್ಣಬೈರೇಗೌಡ - ಬೆಂಗಳೂರು ನಗರಾಭಿವೃದ್ಧಿ

ಪ್ರಿಯಾಂಕ್ ಖರ್ಗೆ - ಗೃಹ ಮತ್ತು ಐಟಿಬಿಟಿ

ಕೆ.ಜೆ. ಜಾರ್ಜ್ - ಇಂಧನ ಮತ್ತು ಪ್ರವಾಸೋದ್ಯಮ

ಕೆ.ಹೆಚ್. ಮುನಿಯಪ್ಪ - ಆಹಾರ ಇಲಾಖೆ

ಯು.ಟಿ. ಖಾದರ್ - ಆರೋಗ್ಯ ಇಲಾಖೆ

ಸತೀಶ್ ಜಾರಕಿಹೊಳಿ - ಲೋಕೋಪಯೋಗಿ

ಈಶ್ವರ ಖಂಡ್ರೆ - ಗ್ರಾಮೀಣಾಭಿವೃದ್ಧಿ ಇಲಾಖೆ

ರಾಜೀನಾಮೆಗೆ ಮುಂದಾದ ರಾಮಲಿಂಗಾರೆಡ್ಡಿ

ಇನ್ನು ಜಲಸಂಪನ್ಮೂಲ ಇಲಾಖೆಯನ್ನು ಕೊಟ್ಟಿರುವ ಕಾರಣ ರಾಮಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ನನಗೆ ಇಷ್ಟವಿಲ್ಲದ ಸಾರಿಗೆ ಮತ್ತು ಮುಜರಾಯಿ ಇಲಾಖೆಯನ್ನು ಕೊಡಲಾಗಿತ್ತು. ಆದರೂ ನಾನು ಎರಡೂ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈ ಬಾರಿ ನನಗೆ ನಗರಾಭಿವೃದ್ಧಿಯಂತಹ ದೊಡ್ಡ ಜವಾಬ್ದಾರಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ದೊಡ್ಡ ಖಾತೆಯಾದರೂ ಬೆಂಗಳೂರಿಗೆ ಸಂಬಂಧವೇ ಇಲ್ಲದ ಜಲಸಂಪನ್ಮೂಲ ಖಾತೆಯನ್ನು ನೀಡಿರುವ ಕಾರಣ ರಾಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆ.

ಯತೀಂದ್ರಗೆ ಒಲಿದ ನಗರಾಭಿವೃದ್ಧಿ:

ಮತ್ತೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಹತ್ವದ 'ನಗರಾಭಿವೃದ್ಧಿ' ಖಾತೆ ಸಿಕ್ಕಿರುವುದು ಕುತೂಹಲ ಮೂಡಿಸಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಅತ್ಯಂತ ಪ್ರಭಾವಿ 'ಗೃಹ' ಇಲಾಖೆಯನ್ನು ನೀಡಲಾಗಿದ್ದು, ಬೆಂಗಳೂರು ಅಭಿವೃದ್ಧಿಯ ಹೊಣೆಯನ್ನು ಕೃಷ್ಣಬೈರೇಗೌಡ ಅವರಿಗೆ ವಹಿಸಲಾಗಿದೆ. ಉಳಿದಂತೆ ಕೆಲವರಿಗೆ ಈ ಹಿಂದೆ ನಿರ್ವಹಣೆ ಮಾಡಿದ್ದ ಇಲಾಖೆಗಳನ್ನೇ ವಾಪಸ್ ಕೊಡಲಾಗಿದೆ.