ಪಂಚಮಸಾಲಿ 2ಎಗೆ ಸೇರಿಸಿದರೆ ಇತರರಿಗೆ ಅನ್ಯಾಯ!
ಪಂಚಮಸಾಲಿ 2ಎಗೆ ವಿರೋಧ| 2ಎ ಮೀಸಲಾತಿ ಪಟ್ಟಿಯಲ್ಲಿ 410 ಜಾತಿಗಳಿವೆ| ಪಂಚಮಸಾಲಿ ಸೇರಿಸಿದರೆ ಇತರರಿಗೆ ಅನ್ಯಾಯ| ಹಲವು ಜಾತಿಗಳಿಂದ ಹಿಂ. ಆಯೋಗಕ್ಕೆ ಮನವಿ
ಬೆಂಗಳೂರು(ಫೆಎ. 16): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ‘ಪ್ರವರ್ಗ 2ಎ’ ಅಡಿ ಮೀಸಲಾತಿ ಸೌಲಭ್ಯ ನೀಡುವುದಕ್ಕೆ ಇದೇ ಪ್ರವರ್ಗದಡಿ ಬರುವ ಇತರೆ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ 2 ಎ’ ಅಡಿ ಸೇರ್ಪಡೆ ಮಾಡಬೇಕೆಂದು ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿರುವ ಇತರೆ ಜಾತಿಗಳು, ಪ್ರವರ್ಗ 2ಎ ಪಟ್ಟಿಯಲ್ಲಿ 410ಕ್ಕೂ ಹೆಚ್ಚು ಜಾತಿಗಳು ಸೇರಿವೆ. ಈ ವರ್ಗಕ್ಕೆ ಪ್ರಸ್ತುತ ಶೇ.15ರಷ್ಟುಮಾತ್ರ ಮೀಸಲಾತಿ ಸೌಲಭ್ಯವಿದೆ. ಹೀಗಿರುವಾಗ ಪಂಚಮಸಾಲಿ ಲಿಂಗಾಯತ ಸಮುದಾಯದವರು ಇದೇ ಪ್ರವರ್ಗದಡಿ ಮೀಸಲಾತಿಗೆ ಮನವಿ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡಿದಲ್ಲಿ ಇದೇ ಪ್ರವರ್ಗದಲ್ಲಿರುವ ಇತರೆ ಜಾತಿಗಳಿಗೆ ಅನ್ಯಾಯವಾಗಲಿದೆ. ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಪ್ರಬಲರಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ಪ್ರವರ್ಗ 2ಎಗೆ ಸೇರಿಸಬಾರದು ಎಂದು ಕೋರಿದ್ದಾರೆ. ಈ ಕುರಿತು ಹಲವು ಜಾತಿಗಳ ಮುಖಂಡರು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆಂದು ಆಯೋಗದ ಉನ್ನತ ಮೂಲಗಳು ತಿಳಿಸಿವೆ.
ಮೀಸಲಾತಿಗಾಗಿ ಹೋರಾಟ: ಸಮುದಾಯ, ಸ್ವಾಮೀಜಿಗಳಿಗೆ ಹೊಸ ಭರವಸೆ ಕೊಟ್ಟ ಸಿಎಂ
ಮತ್ತೊಂದು ದಿನಾಂಕ ನಿಗದಿ ಮಾಡಿ ನೋಟಿಸ್:
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ‘ಪ್ರವರ್ಗ 2ಎ’ ಸೇರಿಸಲು ಕೋರಿರುವ ಅರ್ಜಿ ಸಂಬಂಧ ಫೆ.12ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದರೆ, ಅರ್ಜಿದಾರರ ಪರವಾಗಿ ಯಾವುದೇ ಪ್ರತಿನಿಧಿ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ದಿನಾಂಕ ನಿಗದಿ ಮಾಡಿ ನೋಟಿಸ್ ಜಾರಿ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
2021ರ ಡಿ.9ರಂದು ಕೂಡಲ ಸಂಗಮದ ಪಂಚಮಸಾಲಿ ಲಿಂಗಾಯತ ಮಠದ ಮಠಾಧೀಶ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಖುದ್ದು ಭೇಟಿ ನೀಡಿ ಪಂಚಮಸಾಲಿ ಲಿಂಗಾಯತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಲಭ್ಯವಾಗಬೇಕು. ಹೀಗಾಗಿ ಈ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಮನವಿ ಸಲ್ಲಿಸಿದ್ದರು. ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಂದು ದಿನಾಂಕ ನಿಗದಿಪಡಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುವುದು ಎಂದಿದ್ದಾರೆ.
ಪಂಚಮಸಾಲಿ ಮೀಸಲಾತಿಗೆ ಅವಸರ ಮಾಡುವ ಅಗತ್ಯ ಇಲ್ಲ: ಸಚಿವ ಪಾಟೀಲ್
ಮನವಿ ಬಂದಿದೆ
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಇದೇ ಪ್ರವರ್ಗದಲ್ಲಿರುವ ವಿವಿಧ ಜಾತಿಗಳಿಂದ ಮನವಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಜಯಪ್ರಕಾಶ್ ಹೆಗ್ಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎಗೆ ಸೇರಿಸುವಂತೆ ಕೋರಿ ಮನವಿ ಸಲ್ಲಿಸಿದ್ದೇವೆ. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಆಯೋಗದಿಂದ ನೋಟಿಸ್ ನೀಡಲಾಗಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಾಂಕದಂದು ನಮ್ಮ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗಲಿದ್ದಾರೆ.
- ಬಸವ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಮಠ