ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವಲಯದ ಚೆನ್ನಂಗಿ ಶಾಖೆಯ ಬಳಿ 8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ಶನಿವಾರ ಉದ್ಯಾನವನದ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗಸ್ತು ತಿರುಗುವ ವೇಳೆ ಚೆನ್ನಂಗಿ ಶಾಖೆಯ ಅಬ್ಬೂರು ಗಸ್ತಿನ ಬಳಿ ಹುಲಿಯ ದೇಹ ಪತ್ತೆಯಾಗಿದೆ.

ಹುಣಸೂರು (ಆ.01): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವಲಯದ ಚೆನ್ನಂಗಿ ಶಾಖೆಯ ಬಳಿ 8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ಶನಿವಾರ ಉದ್ಯಾನವನದ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗಸ್ತು ತಿರುಗುವ ವೇಳೆ ಚೆನ್ನಂಗಿ ಶಾಖೆಯ ಅಬ್ಬೂರು ಗಸ್ತಿನ ಬಳಿ ಹುಲಿಯ ದೇಹ ಪತ್ತೆಯಾಗಿದ್ದು, ಗಡಿ ಅಧಿಪತ್ಯಕ್ಕಾಗಿ ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಾದಾಟದಲ್ಲಿ ಹುಲಿಯ ಮೈಮೇಲೆ ಗಂಭೀರವಾದ ಗಾಯಗಳು ಉಂಟಾಗಿವೆ.

Add Asianetnews Kannada as a Preferred SourcegooglePreferred

ಸ್ಥಳಕ್ಕೆ ಡಿಸಿಎಫ್‌ ಹರ್ಷಕುಮಾರ್‌ ಚಿಕ್ಕನರಗುಂದ, ಎಸಿಎಫ್‌ ಎ.ವಿ. ಸತೀಶ್‌, ಆರ್‌ಎಫ್‌ಒ ಗಣರಾಜ್‌ ಪಟಗಾರ್‌ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಬೋಸ್‌ ಮಾದಪ್ಪ, ವನ್ಯಜೀವಿ ಪರಿಪಾಲಕರಾಗಿ ನಾಮ ನಿರ್ದೇಶನಗೊಂಡಿರುವ ಶರೀನ್‌ ಸುಬ್ಬಯ್ಯ ಸಮ್ಮುಖದಲ್ಲಿ ಇಲಾಖಾ ಪಶುವೈದ್ಯಾಧಿಕಾರಿಗಳಾದ ರಮೇಶ್‌, ವಿ.ಎಸ್‌. ನವೀನ್‌ಕುಮಾರ್‌ ಮೃತಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಹೆಚ್ಚಿನ ಪರೀಕ್ಷೆಗಾಗಿ ಮೃತಹುಲಿಯ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ

ಹುಲಿರಾಯನಿಗಾಗಿ ಅರಣ್ಯಾಧಿಕಾರಿಗಳಿಂದ ಶೋಧ: ಚಿಕ್ಕನಂದಿ ಗ್ರಾಮದಲ್ಲಿ ಹಠಾತ್ತನೆ ಪ್ರತ್ಯಕ್ಷನಾದ ಹುಲಿರಾಯನನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಸೋಮವಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಾಲೂಕಿನ ಹಂಪಾಪುರ ಹೋಬಳಿಯ ಚಿಕ್ಕನಂದಿ- ಚಾಮಳ್ಳಿಹುಂಡಿ ಬಳಿಯ ಮಹದೇಶ್ವರ ದೇವಸ್ಥಾನದ ಬಳಿ ಭಾನುವಾರ ಮುಂಜಾನೆ ದಿಢೀರನೆ ಪ್ರತ್ಯಕ್ಷನಾಗಿದ್ದ ಕಾಡಿನ ರಾಜನನ್ನು ಕಂಡು ಗ್ರಾಮದ ಜನತೆ ತೀವ್ರ ಭಯಭೀತರಾಗಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಕಂಚಮಳ್ಳಿ, ಹತ್ವಾಳು, ದಾಳೇಗೌಡನಹುಂಡಿ ಗ್ರಾಮಗಳ ಜಮೀನನೊಳಗೆ ಹಾಗೂ ಗ್ರಾಮದೊಳಗೆ ಓಡಾಡಿದ ಹುಲಿಯನ್ನು ಕಂಡ ಪ್ರತ್ಯಕ್ಷದರ್ಶಿ ಹನುಮಂತ ಎಂಬ ತೋಟದ ಮಾಣಿ ಕಂಗಾಲಾಗಿ ಕೂಡಲೇ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಹುಲಿ ಸಂಖ್ಯೆಯಲ್ಲಿ ಮತ್ತೆ ಕರ್ನಾಟಕಕ್ಕೆ ನಂ.1 ಪಟ್ಟ?

ನಂತರ ಗ್ರಾಮಸ್ಥರಾದ ಬಾಲು, ಅಯ್ಯ, ರಾಜೇಶ ಮತ್ತು ಜಗದೀಶ ಕಳೆದ 5 ರಿಂದ 6 ವರ್ಷಗಳಿಂದ ಕಾಡಿನರಾಜನನ್ನು ಗಮನಿಸುತ್ತಿದ್ದೇವೆ. ಆದರೆ ಈವರೆಗೆ ಯಾರಿಗೂ ಪ್ರಾಣಹಾನಿ ಮಾಡಿಲ್ಲ. ಆದರೂ ಕ್ರೂರಮೃಗವಾದ್ದರಿಂದ ಸೆರೆ ಹಿಡಿಯುವಂತೆ ಹಂಪಾಪುರ ವ್ಯಾಪ್ತಿಯ ಅರಣ್ಯ ವಲಯ ಸಂರಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ವಲಯಾಧಿಕಾರಿ ಮಧು, ಡಿಸಿಎಫ್‌ ಕಮಲಕರಿಕಾಳನ್‌, ಎಸಿಎಫ್‌ ಕೆ.ಬಿ. ಶಿವರಾಂ, ಆರ್‌ಎಫ್‌ಒ ರಕ್ಷಿತ್‌ ಹಾಗೂ ಅರಣ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಹುಲಿರಾಯನ ಸೆರೆಗೆ ಕೊಡಗು ಜಿಲ್ಲೆಯ ಮತ್ತಿಗುಡಿಯಿಂದ ಮಹೇಂದ್ರ, ಭೀಮ, ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಎಂಬ ಹೆಸರಿನ ಗಜಪಡೆಯನ್ನು ಸೋಮವಾರ ಕರೆಸಿ ನಾಗರಹೊಳೆ ಅಭಯಾರಣ್ಯದ ಅರಣ್ಯಪಶು ವೈದ್ಯರಾದ ಡಾ. ರಮೇಶ್‌ ತಂಡದೊಂದಿಗೆ ಕಾಡಿನರಾಜ ಹುಲಿರಾಯನನ್ನು ಸೆರೆ ಹಿಡಿದು ಕಾಡಿಗೆ ಕಳುಹಿಸಿಕೊಡಲು ತೀವ್ರ ಶೋಧ ನಡೆಸಲಾಗುತ್ತಿದೆ.