ನಮ್ಮೂರಿನ ಶಾನುಭೋಗರು ಕೆಳಜಾತಿಯ ಕುರುಬರು ಲಾಯರ್‌ ಓದಬಾರದು ಎಂದಿದ್ದರು, ಆದ್ರೂ ಲಾಯರ್‌ ಓದಿದೆ. ಇಲ್ಲದಿದ್ದರೆ ಲಾಯರ್‌ ಇಲ್ಲ, ಮುಖ್ಯಮಂತ್ರಿಯೂ ಆಗ್ತಿರಲಿಲ್ಲ.

ಮೈಸೂರು (ಆ.12): ನಮ್ಮೂರಿನ ಶ್ಯಾನುಭೋಗರಾಗಿದ್ದ ಚನ್ನಪ್ಪಯ್ಯ ಕೆಳ ಜಾತಿಯವರು ಲಾಯರ್ ಆಗುವುದು ಬೇಡ ಅಂತಿದ್ದರು. ಆಗ, ನಮ್ಮಪ್ಪನಿಗೆ ಕುರುಬರು ಲಾಯರ್‌ ಓದಬಾರದು ಎಂದು ಹೇಳಿದ್ದರಿಂದ, ನನಗೆ ಲಾಯರ್‌ ಓದಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿದ್ದರೆ ನಾನು ಲಾಯರ್‌ ಆಗುತ್ತಿರಲಿಲ್ಲ, ಸಿಎಂ ಕೂಡ ಆಗುತ್ತಿರಲಿಲ್ಲ. ಎಲ್ಲ ಕಾಲದಲ್ಲಿಯೂ ಪಟ್ಟಭದ್ರ ಹಿತಶತ್ರುಗಳು ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Add Asianetnews Kannada as a Preferred SourcegooglePreferred

ಮೈಸೂರು ಬಾರ್‌ ಅಸೋಸಿಯೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮೈಸೂರು ಬಾರ್ ಅಸೋಸಿಯೇಷನ್ ಸೆಕ್ರೆಟರಿ ಆಗಿದ್ದೆನು. ಹೊಸದಾಗಿ ನಾನು ಲಾಯರ್ ಆಗಿದ್ದಾಗ ಹಿರಿಯರು ನ್ಯಾಯ ಕೊಡಿಸಲು ಕಥೆ ಹೇಳುತ್ತಿದ್ದರು. ಆಗ ಕಕ್ಷಿದಾರರ ಮುಂದೆ ಹಿರಿಯ ವಕೀಲರು ಹೇಳಿದ್ದ ಘಟನೆಯನ್ನು ಬಿಚ್ಚಿಟ್ಟರು. ನೋಡಯ್ಯಾ ಮೇಲಿನ ರ್ಯಾಕ್‌ನ ದಪ್ಪ ಪುಸ್ತಕಗಳನ್ನು ಓದಿ, ವಾದ ಮಾಡಿದ್ರೆ ನೂರಕ್ಕೆ ನೂರು‌ ಕೇಸ್ ಗೆದ್ದ ಹಾಗೆ. ಎರಡನೇ ಸಾಲಿನ ಪುಸ್ತಕ ಓದಿ ವಾದ ಮಾಡಿದ್ರೆ ಕೇಸ್ ಗೆಲ್ಲಬಹುದು ಅಥವಾ ಸೋಲಬಹುದು. ಮೂರನೇ ಲೈನ್ ಚಿಕ್ಕ‌ ಪುಸ್ತಕ ನೋಡಿ ವಾದ ಮಾಡಿದ್ರೆ ಸೋಲು ಗ್ಯಾರಂಟಿ‌ ಕಣಯ್ಯಾ ಅಂತಿದ್ದರು ಎಂದು ತಿಳಿಸಿದರು.

ಕರ್ನಾಟಕ ಗುತ್ತಿಗೆದಾರರಿಗೆ ಗುನ್ನಾ ಕೊಟ್ಟ ಸಿದ್ದರಾಮಯ್ಯ: ಶೇ.40 ಕಮಿಷನ್‌ ತನಿಖೆಯಾಗದೇ ಬಿಲ್‌ ಕೊಡಲ್ಲ

ಇನ್ನು ನಾವು ಓದುತ್ತಿದ್ದ ಕಾಲದಲ್ಲಿಯೇ ಕೆಳ ಜಾತಿಯವರು ಲಾಯರ್ ಆಗುವುದು ಬೇಡ ಎಂದು ನಮ್ಮೂರಿನ ಚೆನ್ನಪ್ಪಯ್ಯ ಅಂತಿದ್ದರು. ಆ ಶಾನುಭೋಗರನ್ನ ನಮ್ಮಪ್ಪ‌ ಕೇಳಿದ್ದರು. ಆವಾಗ ಕುರುಬರು ಲಾಯರ್ ಓದಬಾರದು ಅಂತ‌ ಅಂದಿದ್ದರು. ಅವರ ಮಾತು ಕೇಳಿಕೊಂಡು ನಮ್ಮಪ್ಪ‌ ನನಗೆ ಲಾಯರ್‌ ಓದಬೇಡ ಅಂದರು. ಅವರ ಮಾತು‌ ಕೇಳಿದ್ದರೆ ನಾನು‌ ಲಾಯರ್ ಆಗಲು ಸಾಧ್ಯವಾಗಲು ಆಗುತ್ತಿರಲಿಲ್ಲ. ರಾಜ್ಯದ ಸಿಎಂ ಕೂಡ ಆಗುತ್ತಿರಲಿಲ್ಲ. ಅಂತಹ ಪಟ್ಟಭದ್ರ ಹಿತಾಶಕ್ತಿಗಳು ಎಲ್ಲಾ‌‌ ಕಾಲದಲ್ಲೂ‌ ಇವೆ ಎಂದು ಹೇಳಿದರು.

ರಾಜರ ಕಾಲದಲ್ಲಿ ಮನುವಾದಿ ಮಾದರಿ ನ್ಯಾಯವಿತ್ತು: ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಿರುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿರುತ್ತದೆ. ಸಂವಿಧಾನ ಬರುವ ಮುನ್ನ ನ್ಯಾಯದಾನ ಬೇರೆಯದ್ದೇ ಸ್ವರೂಪದಲ್ಲಿತ್ತು. ಸಂವಿಧಾನ ಬಂದ ಬಳಿಕ ನ್ಯಾಯದಾನ ಬದಲಾಗಿದೆ. ಬ್ರಿಟಿಷರ ಕಾಲಕ್ಕೂ, ಸ್ವಾತಂತ್ರ್ಯ ನಂತರ ನ್ಯಾಯದಾನ ಬದಲಾಗಿದೆ. ರಾಜ ಮಹರಾಜರ ಕಾಲದಲ್ಲಿ ಮನುವಾದಿ ಮಾದರಿ‌ ನ್ಯಾಯ ಹಂಚಿಕೆ ಆಗುತ್ತಿತ್ತು. ಜಾತಿ ವ್ಯವಸ್ಥೆ ಕಾರಣ ಬೇರೆ ಬೇರೆ ರೀತಿಯ ಶಿಕ್ಷೆ ಇತ್ತು. ಮೇಲ್ವರ್ಗ, ಶ್ರೀಮಂತ, ಬಡವ, ಕೆಳವರ್ಗದವರಿಗೆ ಬೇರೆ ಬೇರೆ ಶಿಕ್ಷೆಗಳಿದ್ದವು. ಸಂವಿಧಾನ ಬಂದ ಬಳಿಕ ಏಕರೂಪ ಶಿಕ್ಷೆ ಇದೆ. ಬಡವ-ಬಲ್ಲಿದ, ಶ್ರೀಮಂತ ಎನ್ನದೇ ಒಂದೇ ರೀತಿ ಕಾನೂನು‌ ಇದೆ. ಕಾನೂನು‌ ಮುಂದೆ ಎಲ್ಲರೂ ಸಮಾನರು ಎಂಬುದು ಭಾರತ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ ಎಂದು ತಿಳಿಸಿದರು.