ಗುತ್ತಿಗೆದಾರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಪರ್ಸೆಂಟ್‌ ಆರೋಪ ಮಾಡಿದ್ದು, ಅದರ ತನಿಖೆ ಪೂರ್ಣಗೊಳ್ಳದೇ ಕಾಮಗಾರಿ ಬಿಲ್‌ ಬಿಡುಗಡೆ ಮಾಡುವುದಿಲ್ಲ.

ಬೆಂಗಳೂರು (ಆ.12): ಕರ್ನಾಟಕ ಗುತ್ತಿಗೆದಾರರ ಸಂಘ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರು ಬಾಕಿ ಬಿಲ್‌ ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಹಾಗೂ ರಾಜ್ಯಪಾಲರು ಸೇರಿದಂತೆ ವಿವಿಧೆಡೆ ಮನವಿ ಮಾಡಿದ್ದಾರೆ. ಆದರೆ, ತಾವೇ ಬಿಜೆಪಿ ಸರ್ಕಾರದಲ್ಲಿ ಆರೋಪ ಮಾಡಿದಂತೆ ಶೇ.40 ಪರ್ಸೆಂಟ್‌ ಕಮಿಷನ್ ವಸೂಲಿ ಮಾಡಿದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೂ ಬಾಕಿ ಬಿಲ್‌ ಬಿಡುಗಡೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಸಚಿವರು ಹಾಗೂ ಶಾಸಕರು ಶೇ.40 ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ, ಕಮಿಷನ್‌ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೆ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.

ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡನ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

ಕಮಿಷನ್‌ ವಸೂಲಿ ಆರೋಪಕ್ಕಾಗಿಯೇ ಬಿಜೆಪಿ ತಿರಸ್ಕಾರ: ಬಿಜೆಪಿಗೆ ಏನು ವಿಚಾರ ಇಲ್ಲದೆ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಶೇ.40 ಪರ್ಸೆಂಟ್‌ ಕಮಿಷನ್‌ಗಾಗಿಯೇ ಜನ ಅವರನ್ನ ತಿರಸ್ಕರಿಸಿದ್ದಾರೆ. ನಾವು ಅವತ್ತು ಮಾಡಿರುವ ಆರೋಪವನ್ನ ಸಾಬೀತು ಮಾಡಬೇಕಿದೆ. ಈ ಕಾರಣ ನಾಲ್ಕು ತಂಡಗಳು ತನಿಖೆ ಮಾಡುತ್ತಿದೆ. ಈಗ ತನಿಖೆ ಮಾಡುತ್ತಿರುವ ಎಲ್ಲ ಕಾಮಗಾರಿಗಳು ಕಳೆದ ಮೂರು ವರ್ಷದ ಹಿಂದೆ ಮುಕ್ತಾಯವಾಗಿದೆ. ಈಗ ಬಿಲ್‌ಗಾಗಿ ಆತುರ ಪಟ್ಟರೆ ಹೇಗೆ? ಎಂದು ಗುತ್ತಿಗೆದಾರರಿಗೆ ಪ್ರಶ್ನೆ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರವಾಗಿ ಒಂದು ಸಮಿತಿ ಮಾಡಿದ್ದೇವೆ. ಶಾಸಕರಿಗೂ ಇದರಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಇದನ್ನ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ವಾರ್ಡ್‌ಗಳ ಪುನರ್ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಕೇಲವೊಂದು ಗಡುವು ನೀಡಿದೆ. ಜಿ.ಪಂ-ತಾ.ಪಂ ಗಳಿಗೆ 10 ವಾರ, ಬಿಬಿಎಂಪಿಗೆ‌12 ವಾರ ಗಡುವು ಇದೆ. ಅಷ್ಟರಲ್ಲಿ‌ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತೇವೆ. ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ. ಅದನ್ನು ಕೋರ್ಟಿಗೆ ನಾವು ನೀಡುತ್ತೇವೆ. ರಾಜ್ಯದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ನಾವು ಯಾವುತ್ತು ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಚುನಾವಣೆಗಳನ್ನ ಮುಂದೂಡುತ್ತಿದ್ದರು. ನಾವೂ ಆ ರೀತಿ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದರು.

ಬಿಬಿಎಂಪಿ ಅಗ್ನಿ ದುರಂತ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಬೆಂಕಿ ಇಟ್ಟವರ‍್ಯಾರು?

ಏಕರೂಪ ನಾಗರಿಕ ಸಂಹಿತೆಗೆ ವಿರೋಧವಿದೆ: ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವೂ ಇದಕ್ಕೆ ವಿರೋಧ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.