ರಾಜ್ಯ ಸರ್ಕಾರ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನ ಹಿಂದೂ ಸಂಘಟನೆಗಳು ತೀವ್ರ ವಿರೋಧಿಸಿದ್ದು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಿ ಶಾಲೆಗೆ ಕಳಿಸುವುದಾಗಿ ನಿರ್ಧಾರ ಮಾಡಿದ್ದಾರೆ ಇದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಕೇಸರಿ ಶಾಲು ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.
ಮೈಸೂರು (ಮೇ.24): ಹಿಜಾಬ್ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಬಿಜೆಪಿಯವರಿಗೆ ಅದು ಹಿಜಾಬ್. ನಮಗೆ ಅದು ಸಮಾನತೆ ಸಂಕೇತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಮ್ಮ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ:
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರೀಯ ವಿದ್ಯಾಲಯದಲ್ಲಿ ಯಾವ ನಿಯಮ ಇದೆ ಎಂಬುದನ್ನು ಮೊದಲು ಬಿಜೆಪಿಯವರು ನೋಡಿಕೊಂಡು ಬರಲಿ. ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಹಾಕಿಸಿ ಕಳುಹಿಸಲಿ. ನಮ್ಮ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ. ಯಾರದರೂ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಆಗುತ್ತದೆ ಎಂದರು. ಹಿಜಾಬ್ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದೇವು. ನಮಗೆ ಜನ ಮತ ಕೊಟ್ಟಿದ್ದಾರೆ ಅದಕ್ಕಾಗಿ ನಾವು ಮತ ಕೊಟ್ಟ ಜನರ ಖುಣ ತಿರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನನಗೆ ಉಗಿದ್ರೆ ನಾನು ಅವರಿಗೆ ಉಗಿಯುತ್ತೇನೆ:
ನನಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ನನಗೆ ಕನ್ನಡ ಬರೆಯುವುದು ಕಷ್ಟ. ನನ್ನ ಕನ್ನಡ ಬರವಣಿಗೆ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿಗರು ನನಗೆ ಪಾಠ ಮಾಡಿದ ಕನ್ನಡ ಮೇಷ್ಟ್ರನ್ನ ಹುಡುಕಿ ತರಲಿ. ಆಗ ಕನ್ನಡ ಮೇಷ್ಟ್ರು ಜೊತೆ ಆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ. ನನಗೆ ಯಾರಾದರೂ ಉಗಿದರೆ ನಾನು ಅವರಿಗೆ ಕ್ಯಾಕರಿಸಿ ಉಗಿಯುತ್ತೇನೆ ಎಂದರು.


