Asianet Suvarna News Asianet Suvarna News

ರಾಜ್ಯದಲ್ಲಿ ‘ಬಸ್‌ ಸಂಚಾರ ಸಂಪೂರ್ಣ ಬಂದ್‌’!

ರಾಜ್ಯದಲ್ಲಿ ಇಂದಿನಿಂದ ಅನಿರ್ಧಿಷ್ಟಾವದಿಯ ವರೆಗೆ ಕೆಎಸ್‌ಆರ್‌ಟಿಸಿ  ಬಸ್ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಬಸ್ ವ್ಯವಸ್ಥೆ ಇಂದಿನಿಂದ ಸಿಗುವುದಿಲ್ಲ

KSRTC Staff Demands Government Employee Status  snr
Author
Bengaluru, First Published Dec 11, 2020, 7:20 AM IST

ಬೆಂಗಳೂರು (ಡಿ.11):  ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಬಸ್‌ ಸೇವೆ ಸ್ಧಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆ ನಿರ್ಧರಿಸಿದೆ.

ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ಗುರುವಾರ ರಾಜಧಾನಿಯಲ್ಲಿ ಸಾರಿಗೆ ನೌಕರರು ಬೃಹತ್‌ ಪ್ರತಿಭಟನೆ ಮೂಲಕ ‘ವಿಧಾನಸೌಧ ಚಲೋ’ ರಾರ‍ಯಲಿ ನಡೆಸಿದರು. ಈ ವೇಳೆ ವಿಧಾನಸೌಧ ಮುತ್ತಿಗೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಇದಾದ ನಂತರ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆದ ಸಾರಿಗೆ ನೌಕರರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಾದ್ಯಂತ ಬಸ್‌ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ಎಚ್ಚರ; ಬಂದ್, ಪ್ರತಿಭಟನೆ ಬಿಸಿ ಮುಗಿದಿಲ್ಲ.. ಸರ್ಕಾರಿ ಬಸ್ ಓಡಾಡಲ್ಲ! ..

ಇದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ ಹಾಗೂ ವಾಯವ್ಯ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್‌ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ನಾಲ್ಕು ನಿಗಮಗಳಿಂದ ಸುಮಾರು 1.30 ಲಕ್ಷ ಸಾರಿಗೆ ನೌಕರರು ಇದ್ದಾರೆ. ಈ ಪೈಕಿ ಶೇ.80ರಷ್ಟುಚಾಲನಾ ಸಿಬ್ಬಂದಿಯೇ ಇದ್ದಾರೆ. ಹೀಗಾಗಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಬಸ್‌ ಕಾರ್ಯಾಚರಣೆಗೆ ಸಮಸ್ಯೆಯಾಗಲಿದೆ.

ವಿಧಾನಸೌಧ ಚಲೋ ಯತ್ನ ವಿಫಲ:

ಇದಕ್ಕೂ ಮುನ್ನ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ ಬೃಹತ್‌ ಸಂಖ್ಯೆಯ ಸಾರಿಗೆ ನೌಕರರು ‘ವಿಧಾನಸೌಧ ಚಲೋ’ ರಾರ‍ಯಲಿ ನಡೆಸಿದರು. ಈ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ನೂರಾರು ನೌಕರರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ಸ್ಫಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಅನೇಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟಕ್ಕೆ ಸಾಥ್‌ ನೀಡಿದರು. ವಿಶೇಷವಾಗಿ ಹೋರಾಟದಲ್ಲಿ ಸಾರಿಗೆ ನೌಕರರ ಪತ್ನಿ, ಮಕ್ಕಳು, ಕೋವಿಡ್‌ನಿಂದ ಮೃತಪಟ್ಟನೌಕರರ ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ನಿಗಮಗಳ ಸುಮಾರು ಎರಡು ಸಾವಿರಕ್ಕೂ ಅಧಿಕ ನೌಕರರು, ರಾಜ್ಯ ಸರ್ಕಾರ ತೆಲಂಗಾಣ ಮಾದರಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ, ಸೌಲಭ್ಯ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ನೌಕರರನ್ನು ವಶಕ್ಕೆ ಪಡೆದ ಪೊಲೀಸರು:  ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಬಗ್ಗೆ ನಾಲ್ಕು ಗಂಟೆಯೊಳಗೆ ಸ್ಪಷ್ಟನಿಲುವು ತಿಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಸಚಿವರಾಗಲಿ, ಅಧಿಕಾರಿಗಳಾಗಲಿ ಬಾರದೇ ಇದ್ದಾಗ ಕುಪಿತರಾದ ಸಾರಿಗೆ ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ನೂರಾರು ಸಾರಿಗೆ ನೌಕರರನ್ನು ವಶಕ್ಕೆ ಪಡೆದು ಕರೆದೊಯ್ದರು.

Follow Us:
Download App:
  • android
  • ios